ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಸೋಮೇಶ್ವರ: ಅದು ಭಾರತದ ದ್ವಾದಶ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪವಿತ್ರ ಧಾರ್ಮಿಕ ಕ್ಷೇತ್ರ. ಸಾಕ್ಷಾತ್ ಶಿವನೇ ಲಿಂಗರೂಪದಲ್ಲಿ ನೆಲೆಸಿರೋ ಪುರಾಣ ಪ್ರಸಿದ್ದ ತಾಣ. ಇವತ್ತು ಈ ಇತಿಹಾಸ ಪ್ರಸಿದ್ದ ಕ್ಷೇತ್ರದಲ್ಲಿ ಪವಿತ್ರ ಸಮುದ್ರ ಸ್ನಾನದ ಸಂಭ್ರಮ ಮನೆಮಾಡಿತ್ತು. ಸಾವಿರಾರು ಭಕ್ತರು ಶ್ರಾವಣ ಮಾಸದ ಪ್ರಯುಕ್ತ ಸೋಮನಾಥನ ಕ್ಷೇತ್ರದಲ್ಲಿ ತೀರ್ಥಸ್ನಾನಗೈದು ಪುನೀತರಾದ್ರು….
ಸೋಮೇಶ್ವರ….ಭಾರತ ದೇಶದ ಇತಿಹಾಸ ಪ್ರಸಿದ್ದ ಪವಿತ್ರ ಪುಣ್ಯ ಕ್ಷೇತ್ರ. ಅಬ್ಬರಿಸೋ ಕಡಲಿನ ಮಧ್ಯೆಯೇ ಬಂಡೆಗಲ್ಲಿನ ಮೇಲೆ ಸಾಕ್ಷಾತ್ ಶಿವನೇ ನೆಲೆನಿಂತಿರೋ ನಂಬಿಕೆಯ ತಾಣ. ಶ್ರಾದ್ದ ಪ್ರಯೋಗಕ್ಕೆ ದೇಶದಲ್ಲಿರೋ ದ್ವಾದಶ ಪುಣ್ಯ ಕ್ಷೇತ್ರಗಳಲ್ಲಿ ಕಡಲತಡಿಯ ಸೋಮನಾಥೇಶ್ವರನ ಸನ್ನಿಧಾನವೂ ಒಂದು. ಹೀಗಾಗಿ ಸೋಮೇಶ್ವನ ಸನ್ನಿಧಾನದಲ್ಲಿ ನಡೆಯೋ ಶ್ರಾವಣ ಮಾಸದ ಅಮಾವಾಸ್ಯೆ ತೀರ್ಥ ಸ್ನಾನಕ್ಕೆ ಆದರದ್ದೇ ಆದ ಪ್ರಾಮುಖ್ಯತೆಯಿದೆ. ಹೀಗಾಗಿಯೇ ಶ್ರಾವಣ ಮಾಸದ ಇಂದು ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಸಮುದ್ರ ಸ್ನಾನ ಗೈದು ಪುನೀತರಾದ್ರು. ಅಮಾವಾಸ್ಯೆಯ ದಿನವಾದ ಇಂದು ಸಮುದ್ರಕ್ಕೆ ವೀಳ್ಯದೆಳೆ ಮತ್ತು ಅಡಿಕೆಯನ್ನ ಅರ್ಪಿಸಿ ಸಮುದ್ರಲ್ಲಿ ಸ್ನಾನ ಮಾಡಿ ದೇವಸ್ಥಾನ ಗದಾತೀರ್ಥದಲ್ಲಿ ಮಿಂದೆದ್ದು ಧನ್ಯರಾದ್ರು. ಇನ್ನು ಶ್ರಾವಣ ಮಾಸದ ಈ ದಿನ ಕಡಲಲ್ಲಿ ಮಿಂದೆದ್ರೆ ಸರ್ವ ರೋಗಗಳು ಗುಣವಾಗುತ್ತೆ ಮತ್ತು ಇಷ್ಟಾರ್ಥಗಳು ಈಡೇರುತ್ತೆ ಅನ್ನೋ ನಂಬಿಕೆಯಿದೆ. ಹೀಗಾಗಿಯೇ ಸಾವಿರಾರು ಭಕ್ತರು ಬೆಳ್ಳಂಬೆಳಿಗ್ಗೆ ಕ್ಷೇತ್ರಕ್ಕೆ ಆಗಮಿಸಿ ಸಮುದ್ರ ಸ್ನಾನವನ್ನ ಗೈದು ಸೋಮನಾಥೇಶ್ವರನ ದರ್ಶನ ಪಡೆಯೋದು ನಂಬಿಕೆ. ಅಲ್ಲದೇ ಶ್ರಾವಣ ಮಾಸದಲ್ಲಿ ಕಡಲಿನ ಅಬ್ಬರವೂ ಕಡಿಮೆಯಿರೋ ಕಾರಣದಿಂದ ಮತ್ತು ಸಮುದ್ರದ ಲವಣಯುಕ್ತ ಅಂಶಗಳು ಮನುಷ್ಯ ದೇಹವನ್ನ ಸ್ಪರ್ಶಿಸಿದ್ರೆ ರೋಗಗಳು ಗುಣವಾಗುತ್ತೆ ಅನ್ನೋ ನಂಬಿಕೆಯಿಂದ ದೂರದ ಊರುಗಳಿಂದಲೂ ಶ್ರೀಕ್ಷೇತ್ರಕ್ಕೆ ಆಗಮಿಸಿ ಭಕ್ತರು ತೀರ್ಥಸ್ನಾನವನ್ನ ಮಾಡ್ತಾರೆ.
ಸೂರ್ಯನಾರಾಯನ ಹೊಳ್ಳ, ದೇವಸ್ಥಾನದ ಪ್ರಧಾನ ಅರ್ಚಕ
ಇನ್ನು ಶಿವನ ಸಾನಿಧ್ಯವಾದ ಕಡಲತಟದ ಸೋಮೇಶ್ವರದಲ್ಲಿ ನಡೆಯೋ ಶ್ರಾವಣ ಮಾಸದ ತೀರ್ಥ ಸ್ನಾನಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ದ್ರೌಪದಿ ಸ್ವಯಂವರಕ್ಕಿಂಯ ಮೊದಲು ಪಾಂಡವರು ಅರಗಿನ ಮನೆಯನ್ನ ಸುಟ್ಟು, ಬಕಾಸುರ ವಧೆಗೂ ಮುನ್ನ ಬ್ರಾಹ್ಮಣ ವೇಶದಿಂದ ಸೋಮೇಶ್ವರಕ್ಕೆ ಬಂದಿದ್ದರಂತೆ. ಈ ವೇಳೆ ಸೋಮೇಶ್ವನ ಸಮುದ್ರದಲ್ಲಿ ರುದ್ರಪಾದೆಯ ಪಕ್ಕದಲ್ಲಿ ತೀರ್ಥಸ್ನಾನ ಮಾಡಿ ನಂತ್ರ ತಣ್ಣೀರ ಸ್ನಾನಕ್ಕಾಗಿ ಭೀಮನು ತನ್ನ ಗದೆಯನ್ನ ಭೂಮಿಗೆ ಬಡಿದು ಗದಾತೀರ್ಥವನ್ನ ಸೃಷ್ಟಿಸಿದನೆಂಬ ನಂಬಿಕೆಯಿದೆ. ಹೀಗಾಗಿ ಪೌರಾಣಿಕ ಹಿನ್ನೆಲೆಯಿಂದಲೂ ಇಲ್ಲಿನ ತೀರ್ಥಸ್ನಾನ ಪ್ರಾಮುಖ್ಯತೆ ಪಡೆದುಕೊಂಡಿದೆ. ತಮಿಳ್ನಾಡಿನ ರಾಮೇಶ್ವರದ ನಂತ್ರ ದಕ್ಷಿಣ ಭಾರತದಲ್ಲೇ ಸೋಮೇಶ್ವರ ಪವಿತ್ರ ತೀರ್ಥ ಕ್ಷೇತ್ರ ಎನಿಸಿಕೊಂಡಿದೆ. ಇನ್ನು ಭಕ್ತರು ಕೂಡ ಬೆಳಿಗ್ಗೆಯೇ ಆಗಮಿಸಿ ಸಮುದ್ರ ಸ್ನಾನ ಮಾಡಿದ್ರು. ಈ ಮಧ್ಯೆ ಅಬ್ಬರಿಸೋ ಕಡಲಲ್ಲಿ ಸ್ನಾನ ಮಾಡೋದು ಅಪಾಯವಾಗಿರೋ ಕಾರಣದಿಂದ ಸ್ಥಳೀಯ ಈಜುರಕ್ಷಕ ಪಡೆಯವರು ರಕ್ಷಣೆ ಒದಗಿಸಿದ್ರು. ಹೀಗಾಗಿ ಚುಮುಚುಮು ಚಳಿಯಲ್ಲೂ ಭಕ್ತರು ತೀರ್ಥ ಸ್ನಾನ ಮಾಡಿ ಪುನೀತರಾದ್ರು..
ಒಟ್ಟಾರೆ ಇತಿಹಾಸ ಪ್ರಸಿದ್ದ ಸೋಮನಾಥೇಶ್ವನ ಸನ್ನಿಧಾನ ಇಂದು ಸಾವಿರಾರು ಭಕ್ತರಿಂದ ತುಂಬಿತ್ತು. ಇಷ್ಟಾರ್ಥ ಈಡೇರಿಕೆಗಾಗಿ ಹಲವಾರು ಮಂದಿ ಸಮುದ್ರ ಸ್ನಾನ ಗೈದು ಲಿಂಗ ರೂಪಿ ಶಿವನ ದರ್ಶನ ಪಡೆದ್ರು. ಸಾವಿರಾರು ವರ್ಷಗಳಿಂದ ಜನ್ರ ನಂಬಿಕೆಯ ಪ್ರತೀಕವಾಗಿರೋ ಕ್ಷೇತ್ರದಲ್ಲಿ ಇಂದು ಅತ್ಯಂತ ಶ್ರದ್ದಾಭಕ್ತಿಯಿಂದ ನಡೆದ ತೀರ್ಥಸ್ನಾನದಲ್ಲಿ ಸಾವಿರಾರು ಮಂದಿ ನಂಬಿಕೆಯಿಂದ ಪಾಲ್ಗೊಂಡಿದ್ದು ವಿಶೇಷ….













