ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಬೈಕಿನಲ್ಲಿ ಹೋಗುತ್ತಿದ್ದ ಯುವಕನಿಗೆ ಆರು ಜನ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ತೊಕ್ಕೊಟ್ಟು ಟಿ.ಸಿ.ರೋಡ್ ಮಸೀದಿ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.
ಟಿ.ಸಿ.ರೋಡ್ ನಿವಾಸಿ ಧನರಾಜ್ (20) ಕೊಲೆ ಯತ್ನಕ್ಕೀಡಾದವರು. ಖಾಸಗಿ ಚಿಟ್ ಫಂಡಿನ ಹಣ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿರುವ ಇವರು ತನ್ನ ಮನೆಯಿಂದ ತೊಕ್ಕೊಟ್ಟು ಕಡೆಗೆ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಟಿ.ಸಿ.ರೋಡ್ ಸಮೀಪದ ಮಸೀದಿ ಬಳಿ 6 ಮಂದಿ ಅಪರಿಚಿತ ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿತ್ತು. ಪವಾಡಸದೃಶವಾಗಿ ಧನರಾಜ್ ಅವರು ಬ್ಯಾಗ್ ಧರಿಸಿದ್ದರಿಂದಾಗಿ ದುಷ್ಕರ್ಮಿಗಳು ಬೀಸಿದ ತಲವಾರು ಏಟು ಮೊದಲು ಬ್ಯಾಗಿಗೆ ತಗಲಿ ಬಳಿಕ ಬೆನ್ನಿಗೆ ತಾಗಿತ್ತು. ಇದರಿಂದ ಧನರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ.12 ರಂದು ಅಮಾಯಕ ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಅವರ ಹತ್ಯೆ ನಡೆದಿತ್ತು. ಘಟನೆ ಸಂಬಂಧಿಸಿ ಉಳ್ಳಾಲದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಐದು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರ ನೆರವಿನೊಂದಿಗೆ ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಎ.24 ರಂದು ನಸುಕಿನ ಜಾವ ಮೀನುಗಾರಿಕೆಗೆಂದು ಮಂಗಳೂರಿನ ಧಕ್ಕೆಗೆ ಬೈಕಿನಲ್ಲಿ ತೆರಳುತ್ತಿದ್ದ ಇಕ್ಬಾಲ್ ನಫ್ಸಾನ್ (28) ಎಂಬವರ ಮೇಲೆ ದುಷ್ಕರ್ಮಿಗಳ ತಂಡ ತಲವಾರು ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಎ.26ರಂದು ಮತ್ತೆ ಕ್ಯಾಟರಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಮೂರು ಮಂದಿಯ ಗುಂಪಿಗೆ ದುಷ್ಕರ್ಮಿಗಳು ತೊಕ್ಕೊಟ್ಟು ಒಳಪೇಟೆಯಲ್ಲಿ ತಲವಾರು ದಾಳಿ ನಡೆಸಿದ್ದರು. ಇದರಲ್ಲಿ ಪಿಲಾರು ನಿವಾಸಿ ಸಫ್ವಾನ್ ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಈ ಸಂಬಂಧ ಆರು ಮಂದಿ ಆರೋಪಿಗಳನ್ನು ನಿನ್ನೆ ಬಂಧಿಸಲಾಗಿತ್ತು.
ಎ.28ರಂದು ಮತ್ತೆ ಕಲ್ಲಾಪು ಬಳಿ ಕಲ್ಲಾಪು ಪಟ್ಲ ನಿವಾಸಿ ಸಫ್ವಾನ್(28) ಎಂಬವರ ಮೇಲೆ ತಲವಾರು ದಾಳಿ ನಡೆದಿದೆ. ಇದು ವೈಯಕ್ತಿಕ ಕಾರಣ ಎಂದು ಹೇಳಲಾಗುತ್ತಿದ್ದರೂ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ತೊಕ್ಕೊಟ್ಟು ಟಿ.ಸಿ.ರೋಡು ಸಮೀಪ ಶುಕ್ರವಾರ ಮತ್ತೆ ಅಮಾಯಕನ ಮೇಲೆ ದಾಳಿ ನಡೆದಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ, ದುಷ್ಕರ್ಮಿಗಳು ಮಾತ್ರ ಪೊಲೀಸರಿಗೆ ಸವಾಲಾಗಿ ನಿಂತು ಕೃತ್ಯಗಳನ್ನು ಎಸಗುತ್ತಲೇ ಅಮಾಯಕರ ಮೇಲೆ ನಿರಂತರವಾಗಿ ದಾಳಿ ಮುಂದುವರಿಸುತ್ತಲೇ ಇದ್ದಾರೆ. ಇದರಿಂದ ಜನರಲ್ಲಿ ಭೀತಿಯ ವಾತಾವರಣ ಮನೆಮಾಡಿದೆ.




