ಉಳ್ಳಾಲ: ಕಳೆದ 20 ವರ್ಷಗಳ ಹಿಂದೆ ಆರ್ಎಸ್ಎಸ್ ಬೈಠಕ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಸೌಖ್ಯಕ್ಕೀಡಾಗಿ ಸಾವನ್ನಪ್ಪಿದ ಜನಸಂಘ, ಬಿಜೆಪಿ ಹಾಗೂ ಆರ್ ಎಸ್ ಎಸ್ ಸಕ್ರಿಯ ಸದಸ್ಯರಾಗಿದ್ದ ಕುತ್ತಾರುಗುತ್ತು ಸಮೀಪದ ನಿವಾಸಿ ಮಾಧವ ಆಚಾರ್ಯ ಕುಟುಂಬ ಇಂದು ಆರ್ಥಿಕ ಸ್ಥಿತಿ ಹಾಗೂ ಸಹೋದರನ ಆರೋಗ್ಯ ಸ್ಥಿತಿಯಿಂದ ಕಂಗಾಲಾಗಿದ್ದು, ಮಾಜಿ ಶಾಸಕ ಜಯರಾಮ ಶೆಟ್ಟಿ ಸೇರಿದಂತೆ ಕುತ್ತಾರು ಬಿಜೆಪಿ ಮುಖಂಡರು ಮನೆಗೆ ಭೇಟಿ ನೀಡಿ ರೂ.2 ಲಕ್ಷದ ಚೆಕ್ ಅನ್ನು ಸಹಾಯಹಸ್ತವಾಗಿ ವಿತರಿಸಿದ್ದಾರೆ.

ಮಾಜಿ ಶಾಸಕ ಜಯರಾಮ ಶೆಟ್ಟಿ ಅವರು ಮಾತನಾಡಿ, ಸಂಘ, ಬಿಜೆಪಿ, ಜನಸಂಘಕ್ಕೆ ಕೆಲಸ ಮಾಡಿದವರು ಮಾಧವ ಆಚಾರ್ಯರು. ತೊಕ್ಕೊಟ್ಟು ಜ್ಯುವೆಲ್ಲರಿಯನ್ನು ನಡೆಸುತ್ತಾ ಕುಟುಂಬದ ಜೀವನಾಧಾರವಾಗಿದ್ದರು. ಆದರೆ 20 ವರ್ಷಗಳ ಹಿಂದಿನ ಅವರ ಸಾವು ಇಡೀ ಕುಟುಂಬಕ್ಕೆ ಜೀವನಾಧಾರವನ್ನೇ ಕಸಿದಿತ್ತು. ಅವರ ಸಾವಿನ ನಂತರ ಇಬ್ಬರು ಸಹೋದರರೂ ಸಾವನ್ನಪ್ಪಿ, ಸಹೋದರಿಗೂ ವಿವಾಹ ನಡೆಸಲು ಅಸಾಧ್ಯವಾಗಿತ್ತು. ಮರದ ಕೆಲಸ ನಿರ್ವಹಿಸುತ್ತಾ ಸಹೋದರ ಲಕ್ಷ್ಮಣ್ ಆಚಾರ್ಯ ಸಹೋದರಿಯರು, ಅವರ ಪುತ್ರಿಯರ ಜವಾಬ್ದಾರಿಯನ್ನು ನಿಭಾಯಿಸುತ್ತಾ ಬಂದರೂ ವಿಧಿ ಲೀಲೆಗೆ ಅವರು ಕೂಡ ಅನಾರೋಗ್ಯಕ್ಕೀಡಾಗಿ, ಇಂದು ಕಿಡ್ನಿ ಸಂಬAಧಿತ ಕಾಯಿಲೆಯಿಂದ ದುಡಿಯಲು ಸಾಧ್ಯವಾಗದೇ ಮನೆಯಲ್ಲೇ ಉಳಿಯುವಂತಾಗಿದೆ. ಅವರ ಚಿಕಿತ್ಸೆಗೆ ಹಾಗೂ ಸಹೋದರಿಯರ ಸಲಹಲು ಆರ್ಥಿಕ ಅಡಚಣೆಯಿರುವುದರಿಂದ ಕುತ್ತಾರು ಪರಿಸರದ ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಕುತ್ತಾರು ಗುತ್ತಿನವರು ಸೇರಿಕೊಂಡು ರೂ. 2 ಲಕ್ಷದ ಚೆಕ್ ವಿತರಿಸಲಾಗಿದೆ. ಈಗಾಗಲೇ ಸ್ಥಳೀಯ ಕುತ್ತಾರು ದೇವಸ್ಥಾನ ಹಾಗೂ ಪರಿಚಿತರು ಸಣ್ಣ ಆರ್ಥಿಕ ಸಹಾಯವನ್ನು ಮಾಡುತ್ತಾ ಬಂದರೂ ಅದರಿಂದ ಜೀವನ ಸಾಲದು ಅನ್ನುವ ಉದ್ದೇಶದಿಂದ ಎಲ್ಲರೂ ಮನಸ್ಸು ಮಾಡಿ ಮನುಷ್ಯತ್ವದ ಕಾರ್ಯವನ್ನು ಮಾಡಲಾಗಿದೆ. ಸ್ಥಳೀಯ ದೈವ ದೇವರು ಇಡೀ ಕುಟುಂಬವನ್ನು ಚೇತರಿಸುವಂತೆ ಮಾಡಲಿ ಎಂದು ಹಾರೈಸಿದರು.
ಹಿರಿಯ ಸಂಘದ ನಾಯಕ ಪ್ರಭಾಕರ್ ಶೆಟ್ಟಿ ಮಾತನಾಡಿ, ಉಳ್ಳಾಲ 1972 ರ ಜನಸಂಘದ ಸದಸ್ಯತ್ವ ನಡೆಸಿ, ಸ್ಥಾನೀಯ ಸಮಿತಿಯನ್ನು ರಚಿಸುತ್ತಾ ಕುತ್ತಾರು ಭಾಗದಲ್ಲಿ ಸಂಘದ ಸಂಪರ್ಕ ಸಾಧಿಸಿದವರು. ಅಂದಿನ ದಿನದಲ್ಲಿ ಶಾಲಾ ವಿದ್ಯಾರ್ಥಿಯಾಗಿ ಮಾಧವ ಆಚಾರ್ಯ ನಿತ್ಯ ಶಾಖೆಯನ್ನು ನಡೆಸುತ್ತಿದ್ದವರು, ಅಲ್ಲದೆ ಸಂಘದ ಶಾಖೆಯಲ್ಲಿ ಸಕ್ರಿಯರಾಗಿದ್ದರು. ಕಾಲೇಜು ಮುಗಿಸಿ ಕೆಲಸ ಹುಡುಕಿ, ಕೆಲಸ ಸಿಗದೇ ಇದ್ದಾಗ ಸಹೋದರನ ಸಹಾಯದೊಂದಿಗೆ ಜ್ಯುವೆಲ್ಲರಿ ಅಂಗಡಿಯನ್ನು ತೊಕ್ಕೊಟ್ಟಿನಲ್ಲಿ ಸ್ಥಾಪಿಸಿದರು. ಕೆಲಸದ ಜೊತೆಗೆ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಆದರೆ ತನ್ನ 30 ರ ಹರೆಯದಲ್ಲಿ ಬೈಠಕ್ ಹೋಗಿ ವಾಪಸ್ಸಾಗುವಾಗ ಏಕಾಏಕಿ ಅಸೌಖ್ಯಕ್ಕೀಡಾಗಿ ಆಸ್ಪತ್ರೆಗಳಲ್ಲಿ ದಾಖಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ತದನಂತರ ಇಬ್ಬರು ಸಹೋದರರು ತೀರಿ ಹೋದರು. ಕುಟುಂಬದ ಆಧಾರಸ್ತಂಭವೇ ಕಳಚಿದ್ದರಿಂದಾಗಿ ಮನೆಮಂದಿ ಕಂಗಾಲಾಗಿದ್ದರು, ಸಹೋದರ ತೀರಿಹೋದ ಬೇಸರದಲ್ಲಿದ್ದ ಜವಾಬ್ದಾರಿ ನಿರ್ವಹಿಸಬೇಕಾದ ಲಕ್ಷ್ಮಣ್ ಆಚಾರ್ಯರೂ ತೀವ್ರ ಅಸೌಖ್ಯಕ್ಕೀಡಾಗಿ ಹಾಸಿಗೆ ಹಿಡಿದು, ಇಂದು ಕಿಡ್ನಿ ಸಂಬAಧಿ ಕಾಯಿಲೆಗೆ ತುತ್ತಾಗುವಂತೆ ಆಗಿದೆ. ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು. ಈ ಕಾರಣದಿಂದ ಎಲ್ಲರೂ ಜೊತೆಗೂಡಿ ಹೊರಗಿನಿಂದ ಯಾರಿಂದಲೂ ಹಣ ಪಡೆಯದೇ ಸ್ಥಳೀಯರೇ ರೂ.5,000, 10,000 ಸಂಗ್ರಹಿಸಿ ರೂ. 2ಲಕ್ಷದ ಮೊತ್ತವನ್ನು ಹಸ್ತಾಂತರಿಸಿದ್ದೇವೆ. ಮುಂದೆಯೂ ದಾನಿಗಳ ಸಹಕಾರವಿದ್ದಲ್ಲಿ ಆರ್ ಎಸ್ ಎಸ್ ನಾಯಕನ ನೊಂದ ಕುಟುಂಬ ಇನ್ನಷ್ಟು ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದರು.
ಸೇವಾ ಚಟುವಟಿಕೆ, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಾಯಕನ ಕುಟುಂಬ ಕಳೆದ 20 ವರ್ಷಗಳಿಂದ ಸಂಕಷ್ಟದಲ್ಲಿದೆ. ಈಗಾಗಲೇ ತಮ್ಮ ಕೈಯಿಂದ ಆದಷ್ಟು ಸಹಾಯಧನವನ್ನು ವಿತರಿಸಲಾಗಿದೆ. ಮುಂದೆ ದಾನಿಗಳು ಸಹಕರಿಸಿದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಲಕ್ಷ್ಮಣ್ ಆಚಾರ್ಯ ಸಂಸಾರದ ನೌಕೆಯನ್ನು ನಿಭಾಯಿಸಲು ಸಾಧ್ಯ ಎಂದು ವಿ.ಹಿಂ.ಪ ಮುಖಂಡ ಪ್ರವೀಣ್ ರಾಜ್ ಕುತ್ತಾರ್ ಹೇಳಿದರು. ಈ ಸಂದರ್ಭ ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಬು ಶೆಟ್ಟಿ, ಕೆ.ಗಂಗಾಧರ ಆಳ್ವ ಕುತ್ತಾರಗುತ್ತು, ಸಂದೀಪ್ ಶೆಟ್ಟಿ ಕುತ್ತಾರಗುತ್ತು, ಸಂದೀಪ್ ಶೆಟ್ಟಿ, ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಕುತ್ತಾರಗುತ್ತು, ನಮಸ್ತೇ ಕೆ. ಶಶಿಕಾಂತ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಆರ್ಎಸ್ಎಸ್ ನಾಯಕನ ಮನೆಮಂದಿಗೆ ಸಹಕರಿಸಲು ಇಚ್ಛಿಸುವವರು: LAXMAN ACHARYA , 250101000006109, IOBA0002501, INDIAN OVERSEAS BANK , KUTHAR , MUNNUR, 9686128829



