ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೆ ಜನಾಗ್ರಹ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ತೀವ್ರಗೊಳ್ಳುತ್ತಿದೆ. ತುಳು ಭಾಷಿಗರನ್ನು ಒಳಗೊಂಡ ಭೌಗೋಳಿಕ ಪ್ರದೇಶವನ್ನು ತುಳುನಾಡು’ ಎಂಬ ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂಬ ಜನಾಗ್ರಹದದ ಮಧ್ಯದಲ್ಲಿ ಈ ಭಾಗದ ತುಳುನಾಡು ಜಿಲ್ಲೆಗೆ ‘ದಕ್ಷಿಣ ಕನ್ನಡ’ ಎಂದು ಹೆಸರಿಟ್ಟವರು ಯಾರು ಎಂಬ ಕುತೂಹಲಕಾರಿ ಪ್ರಶ್ನೆಯೊಂದು ಎಲ್ಲೆಡೆ ಟಿಸಿಲೊಡೆಯಲು ಆರಂಭವಾಗಿದೆ.

ಅಲ್ಲದೆ ದಕ್ಷಿಣ ಕನ್ನಡ ಹೆಸರು ಬದಲಾವಣೆಗೆ ಇಲ್ಲಿನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೂಡಾ ಬ್ಯಾಟ್ ಬೀಸಿದ್ದು, ಅವರು ‘ಮಂಗಳೂರು ಜಿಲ್ಲೆ’ ಹೆಸರಿಡುವುದು ಸೂಕ್ತ ಎಂದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಈ ಹೆಸರು ಬರುವ ಮುಂಚೆ ಸೌತ್ ಕೆನರಾ ಎಂದು ಕರೆಯಲಾಗುತ್ತಿತ್ತು. ಅದು ಕಾಲ ಕ್ರಮೇಣ ದಕ್ಷಿಣ ಕನ್ನಡ ಎಂದು ಬದಲಾಯಿತು. ಈ ಹೆಸರು ಹೇಗೆ ಬಂತೆಂದು ನನಗೆ ಇಂದಿಗೂ ಗೊತ್ತಿಲ್ಲ ಮಂಗಳಾದೇವಿ ದೇವಿಯಿಂದಾಗಿ ಇಲ್ಲಿಗೆ ಮಂಗಳೂರು ಜಿಲ್ಲೆ ಎಂದು ಹೆಸರಿಡುವುದು ಸೂಕ್ತ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇದರ ಒಟ್ಟು ನಿರ್ಣಯ ಏನಾಗುತ್ತದೆ ಎಂದು ಚರ್ಚಿಸಿ ನಿರ್ಧರಿಸೋಣ. ನಿಮ್ಮೊಂದಿಗೆ ನಾನೆಂದಿಗೂ ಇದ್ದೇನೆ’ ಎಂದು ಸಂಸದ ಕ್ಯಾ। ಬ್ರಿಜೇಶ್ ಚೌಟ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ತುಳುನಾಡು ರಾಜ್ಯ, ತುಳು ಭಾಷೆ ಸ್ಥಾನಮಾನಕ್ಕೆ ಆಗ್ರಹ
ತುಳು ಭಾಷಿಗರನ್ನೊಳಗೊಂಡ ಭೌಗೋಳಿಕ ಪ್ರದೇಶ ಮುಖ್ಯವಾಗಿ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯನ್ನೊಳಗೊಂಡ ಜಿಲ್ಲೆಗಳನ್ನು ಸೇರಿಸಿ, ಭಾಷಾ ಸೂತ್ರದ ಅಡಿಯಲ್ಲಿ ಪ್ರತ್ಯೇಕ ತುಳುನಾಡ್ ರಾಜ್ಯ’ ಮಾಡಬೇಕೆಂಬ ಆಗ್ರಹ ಹಿಂದಿನಿಂದಲೂ ನಡೆಯುತ್ತಿದೆ. ಅಲ್ಲದೆ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಬೇಕೆಂಬ ಹೋರಾಟ ನಡೆಯುತ್ತಿದ್ದು, ಈ ಬಗ್ಗೆ, ಇನ್ನೂ ಅಂತಿಮ ನಿರ್ಣಯ ಆಗಿಲ್ಲ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆಗೆ ಒತ್ತಡ ಜಾಸ್ತಿಯಾಗುತ್ತಿದೆ




