
ಉಳ್ಳಾಲ: ಪ್ರಜಾಪ್ರಭುತ್ವದ ಹಕ್ಕು ಎಂದು ಆಡುವ ಮಾತುಗಳು ಸಮಾಜಕ್ಕೆ ಮಾರಕವಾಗಿರಬಾರದು. ಆಡುವ ಮಾತು, ಮಾಡುವ ಕಾರ್ಯಗಳು ಸರಿಯಾಗಿದ್ದರೆ ದೇಶ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯ, ಅದುವೇ ನಿಜವಾದ ದೇಶಭಕ್ತಿ. ಸ್ವಚ್ಛತೆ ಶ್ರಮದಾನ ನಿಟ್ಟೆ ಪಿಯುಸಿ ಕಾಲೇಜು ಪ್ರಾಂಶುಪಾಲರು ತಮ್ಮ ಜೀವನದಲ್ಲಿ ಮಾತ್ರವಲ್ಲ ವಿದ್ಯಾರ್ಥಿಗಳಿಗೂ ಜೀವನದಲ್ಲಿ ಅಳವಡಿಸುವಂತೆ ಮಾಡಿ ವ್ಯಕ್ತಿತ್ವ ವಿಕಸನಗೊಳಿಸುವ ಶಿಬಿರಗಳನ್ನು ಆಯೋಜಿಸುವ ಕಾರ್ಯ ಶ್ಲಾಘನೀಯ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು ನಂತೂರು ಇದರ ರಾಜ್ಯಪ್ರಶಸ್ತಿ ವಿಜೇತ ಎನ್ ಎಸ್ ಎಸ್ ವಿಶೇಷ ವಾರ್ಷಿಕ ಶಿಬಿರಕ್ಕೆ ಮುನ್ನೂರು ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಂಗಾರ ಅರಳಿಸುವ ಮೂಲಕ ಉದ್ಘಾಟನೆ ನಡೆಸಿ ಮಾತನಾಡಿದರು.
ಸಮಾಜದಲ್ಲಿ ಅವಕಾಶಗಳು ಸಿಗುವುದು ಕಡಿಮೆ, ಸಿಕ್ಕ ಅವಕಾಶಗಳನ್ನು ಉಪಯೋಗಿಸುವುದು ವಿದ್ಯಾರ್ಥಿಗಳ ಕರ್ತವ್ಯ ಆಗಿರುತ್ತದೆ. ಈ ನಿಟ್ಟಿನಲ್ಲಿ ಕಾಲೇಜಿಗೆ ರಜೆಯಿದ್ದರೂ ರಾಷ್ಟಿçÃಯ ಸೇವಾ ಯೋಜನೆಯ ಶಿಬಿರದಲ್ಲಿ ಭಾಗಿಯಾಗುವ ಮುಖೇನ ವಿದ್ಯಾರ್ಥಿ ಜೀವನ ಯಶಸ್ಸುಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿರುವಿರಿ. ಉತ್ತಮವಾದ ಸಾಮಾಜಿಕ ಚಿಂತನೆಗಳ ಕಾಲೇಜುಗಳು ಪ್ರಸ್ತುತ ಸಿಗುವುದು ಕಡಿಮೆ. ಹಾಗಾಗಿ ತರಬೇತಿಗಳು ಜೀವನದಲ್ಲಿ ಉಪಯುಕ್ತವಾಗಿರುತ್ತದೆ. ಕಾನೂನು ಪದವಿ ಸಂದರ್ಭ ರಾಷ್ಟಿçÃಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವಾಗ ಉತ್ತಮ ಎನ್ ಎಸ್ ಎಸ್ ವಲಂಟಿಯರ್ ಪುರಸ್ಕಾರ ಪಡೆದುಕೊಂಡಿದ್ದೆನು. ಕಾಲೇಜಿನಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಯು.ಟಿ.ಖಾದರ್ , ನಾಲ್ಕು ಬಾರಿ ಸಚಿವರಾಗಿ, ಸದ್ಯ ಸರಕಾರದ ಎದುರು ಬೆಂಚ್ ನಲ್ಲಿ ಕುಳಿತುಕೊಳ್ಳಲು ಶಿಸ್ತುಬದ್ಧ ಎನ್ ಎಸ್ ಎಸ್ ನಂತಹ ಶಿಬಿರಗಳೇ ಸಾಕ್ಷಿಯಾಗಿದೆ. ಅಮೆರಿಕಾ ದೇಶ ತೆರಿಗೆಯಿಂದಲೇ ನಡೆದರೆ, ಭಾರತ ಮಾನವೀಯತೆಯಿಂದ ಮುಂದುವರಿಯುವ ದೇಶವಾಗಿದೆ ಎಂದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ದೀಪ ಬೆಳಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ| ನವೀನ್ ಶೆಟ್ಟಿ ಕೆ. ವಹಿಸಿದ್ದರು. ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್ ಈಶ್ವರ್, ಯುವ ನ್ಯಾಯವಾದಿ ದಿನಕರ ಶೆಟ್ಟಿ, ಉದ್ಯಮಿ ಪೀಟರ್ ಪಿಂಟೋ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಲಿಲ್ಲಿ ಪೈಸ್, ಅಶೋಕನಗರ ಲಯನ್ಸ್ ಕ್ಲಬ್ ಅಧ್ಯಕ್ಷ ನರೇಶ್ ಕುಮಾರ್ ಶೆಟ್ಟಿ, ಉದ್ಯಮಿ ನಾರಾಯಣ್, ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮುನ್ನೂರು ಪ್ರಭಾರ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಗ್ರೇಸಿ ಡಿಸೋಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಸ್ಮಾನ್ ಫಯಾಝ್ , ಕಾಲೇಜು ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್, ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕ ಕು.ಧನುಶ್, ಉಪನಾಯಕ ಮೋಕ್ಷಿತ್ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ಯೋಜನಾಧಿಕಾರಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಟಿ.ವಿ.ಗಿರಿ ನಿರೂಪಿಸಿದರು. ಎನ್ ಎಸ್ ಎಸ್ ಉಪಯೋಜನಾಧಿಕಾರಿ ಡಾ.ಸುಕನ್ಯಾ ವಂದಿಸಿದರು.






