UN NETWORKS
ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾಲಯ ಉನ್ನತ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ನಿರ್ದೇಶನದೊಂದಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟರು.







ಅವರು ದೇರಳಕಟ್ಟೆ ಯೆನೆಪೋಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಯೆನೆಪೋಯ ಮೊಯ್ದೀನ್ ಕುಂಞ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ , ಯೆನೆಪೋಯ ಫೌಂಡೇಶನ್ ಹಾಗೂ ಯೆನೆಪೋಯ ವಿ.ವಿ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜ್ಞಾನ ಸಂಪಾದನೆ ಜೀವನದ ಪ್ರಮುಖ ಆಸ್ತಿಯಾಗಿದೆ. ಜ್ಞಾನದಿಂದ ಪ್ರತಿ ಕ್ಷೇತ್ರಗಳಲ್ಲೂ ಸಾಧಿಸಲು ಸಾಧ್ಯ. ಶಿಕ್ಷಣ ಪಡೆಯುವ ಸಮಯ ಎಲ್ಲವನ್ನೂ ಅರಿಯಲು ಅಸಾಧ್ಯ. ಆದರೆ ವೃತ್ತಿಪರ ಬದುಕಿನಲ್ಲಿ ಹಿರಿಯರ ಮಾರ್ಗದರ್ಶನದಂತೆ ಯಶಸ್ಸಿನ ಹಾದಿಯನ್ನು ಅರಿತು ಮುನ್ನಡೆಯಬೇಕಾಗಿರುವುದು ಜವಾಬ್ದಾರಿ. ಪೊಲೀಸರ ಕುರಿತು ಜನರಲ್ಲಿ ಇರುವಂತಹ ದೃಷ್ಟಿಕೋನ ಬದಲಾಗಬೇಕಿದೆ. ಟಿ.ವಿ ಷೋಗಳು ಹಾಗೂ ಚಲನಚಿತ್ರಗಳಲ್ಲಿ ಬಿತ್ತರಿಸುವಂತೆ ಪೊಲೀಸರು ಇರುವುದಿಲ್ಲ. ಮನಸ್ಥಿತಿಯನ್ನು ಬದಲಾಯಿಸಿಕೊಂಡು ಅವರೊಂದಿಗೆ ಬೆರೆಯುವ ಕೆಲಸವಾಗಬೇಕಿದೆ. ಪೊಲೀಸರು ಜನಸ್ನೇಹಿಯಾಗಿ ಹೊರಹೊಮ್ಮಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳ ಯುಗವಾಗಿದೆ. ಫೇಸ್ ಬುಕ್, ವಾಟ್ಸ್ಯಾಪ್, ಟ್ವಿಟ್ಟರ್ ಮೂಲಕ ಪೊಲೀಸ್ ಇಲಾಖೆ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ವೇದಿಕೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಇದೇ ಪರಿಣಾಮಕಾರಿ ಸಾಧನ ಅನ್ನುವ ದೃಷ್ಟಿಯಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ಕುರಿತು ಹೆಚ್ಚಿನ ಜ್ಞಾನವನ್ನು ಸಂಪಾದಿಸುವುದರ ಜತೆಗೆ ಇಲಾಖೆ ಕಲ್ಪಿಸಿರುವ ವೇದಿಕೆಯನ್ನು ಸದುಪಯೋಗ ಪಡಿಸಿವುದರೊಂದಿಗೆ ಸುರಕ್ಷಿತವಾಗಿ ಬಾಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞ್ ಮಾತನಾಡಿ ,ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿವರ್ಷವೂ ತಂದೆಯವರ ಸ್ಮರಣಾರ್ಥ ಯೆನೆಪೋಯ ಮೊಯ್ದೀನ್ ಕುಂಞ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಶೈಕ್ಷಣಿಕ ಪುರಸ್ಕಾರ ವಿತರಿಸಲಾಗುತ್ತಿದೆ. ಇದರ ಉಪಯೋಗವನ್ನು ಪಡೆದುಕೊಂಡ ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹಾರೈಸಿದರು.
ಯೆನೆಪೋಯ ಸಮೂಹ ಸಂಸ್ಥೆಗಳ ಚೇರ್ಮೆನ್ ಯೇನೆಪೋಯ ಮಹಮ್ಮದ್ ಕುಂಞÂ ಮುಖ್ಯ ಅತಿಥಿಯಾಗಿದ್ದರು. ಯೆನೆಪೋಯ ವಿ.ವಿ ಕುಲಪತಿ ಡಾ.ಎಂ ವಿಜಯ ಕುಮಾರ್ ಸ್ವಾಗತಿಸಿದರು. ಡಾ.ಗಂಗಾಧರ ಸೋಮಯಾಜಿ ವಂದಿಸಿದರು.
ದ.ಕ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶೈಕ್ಷಣಿಕ ವ್ಯಾಸಾಂಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಯೆನೆಪೋಯ ಸಂಸ್ಥೆ ನೀಡುತ್ತಾ ಬಂದಿದೆ. ಪ್ರಶಸ್ತಿಯು ರೂ. 3,000 ದಿಂದ 10,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. 300 ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಗಿದೆ. ರೂ.15 ಲಕ್ಷ ವೆಚ್ಚ ಮಾಡಲಾಗಿದೆ. ಜೊತೆಗೆ ಯೆನೆಪೋಯ ಫೌಮಡೇಶನ್ , ಯೆನೆಪೋಯ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಪ್ರತಿಭಾವಂತ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಯೆನೆಪೋಯ ವಿ.ವಿ ಸಾಮಾಜಿಕ ಕಾಳಜಿಗಾಗಿ ಬಿ.ಡಿ.ಎಸ್, ಬಿ.ಎಸ್ಸಿ(ನರ್ಸಿಂಗ್), ಬಿ.ಪಿ.ಟಿ, ಎಂ.ಪಿ.ಟಿ, ಬಿ.ಫಾಮ್ ್ ಹಾಗೂ ಇತರೆ ಕೋರ್ಸುಗಳಲ್ಲಿ ಕಲಿಯುತ್ತಿರುವ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಶಯಕ್ಷಣಿಕ ವ್ಯಾಸಾಂಗದಲ್ಲಿ ಪ್ರತಿಭಾನ್ವಿತರಾದ 32 ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರಾಯೋಜಿಸುತ್ತಿದೆ. ಇದರ ಅಂದಾಜು ವೆಚ್ಚ ರೂ.1,52,36,580 ಆಗಿದೆ. ಮತ್ತು 73 ವಿದ್ಯಾರ್ಥಿಗಳಿಗೆ ರೂ.2,65,50,750 ಮೊತ್ತದ ಸ್ಕಾಲರ್ ಶಿಪ್ ಅನ್ನೂ ನೀಡಲಾಗಿದೆ.

ಈ ಬಾರಿಯ ಪ್ರತಿಭಾ ಪುರಸ್ಕಾರಕ್ಕೆ 1043 ವಿದ್ಯಾರ್ಥಿಗಳು ಮತ್ತು 15 ಶಿಕ್ಷಣ ಸಂಸ್ಥೆಗಳ ಅರ್ಜಿ ಸ್ವೀಕರಿಸಲಾಗಿದೆ ಎಂದು ಯೆನೆಪೋಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


