UN NETWORKS
ಕುರ್ನಾಡು : ಬಂಟ್ವಾಳ ತಾಲೂಕಿನ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ನಾಲ್ಕು ದಶಕಗಳಿಂದ ಸೇವೆ ನೀಡುತ್ತಿದ್ದು ಕಳೆದ ಸಾಲಿನಲ್ಲಿ ನೂತನ ಕಟ್ಟಡ ಮಂಜೂರಾಗಿದ್ದು ಕಾಮಗಾರಿ ಭರದಿಂದ ಸಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಉದ್ಘಾಟನೆ ಭಾಗ್ಯ ಕಾಣಲಿದ್ದು ಆರೋಗ್ಯ ಕೇಂದ್ರಕ್ಕೆ ಬೇಕಾದ ಪರಿಕರ, ಸಾಧನಗಳ ಖರೀದಿ ಸಿದ್ಧತೆ ನಡೆಯುತ್ತಿದೆ.
ಆಶಾದಾಯಕ ಅಂಶವೆಂದರೆ ಇಲ್ಲಿ ನಿತ್ಯವೂ ಕನಿಷ್ಠ ನೂರ ಇಪ್ಪತ್ತು ರೋಗಿಗಳು ಹೊರರೋಗಿಗಳಾಗಿ ಸೇವೆ ಪಡೆದು ಹೋಗುತ್ತಿದ್ದಾರೆ. ಹಾಗಿದ್ದರೂ ಜಿಲ್ಲೆಯ ಇತರ ಆಸ್ಪತ್ರೆಗಳಂತೆ ಇಲ್ಲಿಯೂ ಹಲವು ಹುದ್ದೆಗಳು ಭರ್ತಿಯಾಗಬೇಕಿದ್ದು ಇಲ್ಲಿ ಸೇವೆ ನೀಡುವ ಸಿಬ್ಬಂದಿ ಬಹಳ ಉತ್ತಮ ರೀತಿಯಲ್ಲಿ ರೋಗಿಗಳ ಜೊತೆಗೆ ಸ್ಪಂದಿಸುತ್ತಿರುವುದರಿಂದ ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಟ್ಟ ನರಿಂಗಾನ, ಕೈರಂಗಳ, ಬಾಳೆಪುಣಿ, ಪಜೀರು, ಕುರ್ನಾಡು, ಸಜಿಪ ಪಡು, ಚೇಳೂರು ಗ್ರಾಮವಾಸಿಗಳು ಇಲ್ಲಿಗೆ ಉತ್ತಮ ಸೇವೆ ಪಡೆಯುವ ನಿರೀಕ್ಷೆಯೊಂದಿಗೆ ಬಂದು ಸೇವೆ ಪಡೆದು ಹೋಗುತ್ತಿದ್ದಾರೆ.ಅತ್ಯುತ್ತಮ ಲ್ಯಾಬ್, ಮದ್ದು ಸಂಗ್ರಹಣೆಗೆ ವ್ಯವಸ್ಥೆ ಇದ್ದು, ಸುಮಾರು ಆರು ವರ್ಷದ ಹಿಂದೆ ಇಲ್ಲಿ 24*7 ಸೇವೆ ಸೌಲಭ್ಯವಿದ್ದರೂ ಪ್ರಸವಕ್ಕೆ ಬರುವವರ ಸಂಖ್ಯೆ ಸರಕಾರ ನಿಗದಿ ಪಡಿಸಿದಂತೆ 10ಕ್ಕಿಂತ ಕಡಿಮೆ ಇದ್ದ ಕಾರಣ ಆ ಸೇವೆಯನ್ನು ನಿಲ್ಲಿಸಲಾಗಿದೆ. ಬಸುರಿಯರು ಇಲ್ಲಿ ಪ್ರಸವಕ್ಕೆಂದು ಬರದಿದ್ದರೂ ಪರೀಕ್ಷೆ ಹಂತದಲ್ಲಿ ಅವರಿಗೆ ಲಭ್ಯ ಉತ್ತಮ ಸೇವೆ ನೀಡಲಾಗುತ್ತಿದೆ. ಶುಕ್ರವಾರ ಮಾಧ್ಯಮ ಪ್ರತಿನಿಧಿ ತೆರಳಿದಾಗ ಬಸುರಿಯೊಬ್ಬರಿಗೆ ಹಿಮೋಗ್ಲೋಬಿನ್ ಕೊರತೆ ನೀಗಿಸಲು ಚಿಕಿತ್ಸೆ ಕೊಡಲಾಗುತ್ತಿರುವ ದೃಶ್ಯ ಕಂಡುಬಂದಿದೆ.
ಹಳೆಯ ಕಟ್ಟಡದಲ್ಲಿ ಮೀಟಿಂಗ್ ಹಾಲ್, ಪ್ರಯೋಗಾಲಯ, ದಾಸ್ತಾನು ಕೊಠಡಿ , ಪರೀಕ್ಷೆ ಕೇಂದ್ರ ಅಚ್ಚುಕಟ್ಟಾಗಿ ವಿಶಾಲವಾಗಿದೆಯಾದರೂ ನೂತನ ಕಟ್ಟಡದಲ್ಲಿ ಕೊಠಡಿಗಳು ಚಿಕ್ಕದಾಗಿದೆ.ಸ್ಟ್ಟಾಫ್ ನರ್ಸ್ ನಿವೃತ್ತಿಯಾಗಿ ಎಂಟು ಕಳೆದರೂ ಇನ್ನೂ ಆ ಹುದ್ದೆ ಖಾಲಿ ಬಿದ್ದಿದೆ. ಬೆಳಗ್ಗೆ 9.00ರಿಂದ ಸಂಜೆ 4.30ರತನಕ ಇಲ್ಲಿ ಸೇವೆ ಲಭ್ಯವಿದ್ದು ಹುಚ್ಚುನಾಯಿ ಕಡಿತದರೂ ಚಿಕಿತ್ಸೆ ಲಭ್ಯವಿದೆ. ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ ವೈದ್ಯರೊಬ್ಬರು ಸೇವೆ ನೀಡುತ್ತಿದ್ದಾರೆ. ಪುರುಷ ಸಿಬ್ಬಂದಿ ಗ್ರೂಪ್ ಡಿ ನೌಕರರೊಬ್ಬರು ಇದ್ದು ತುರ್ತು ಚಿಕಿತ್ಸೆ ಅಥವಾ ರೋಗಿಯನ್ನು ಎತ್ತಿಕೊಮಡು ಹೋಗುವಾಗ ಅವರು ಸಹಕಾರ ನೀಡುತ್ತಾರೆ. ಅಪಘಾತಕ್ಕೀಡಾದ ರೋಗಿಗಳು ಹತ್ತಿರ ಖಾಸಗಿ ಆಸ್ಪತ್ರೆಗಳಿದ್ದರೂ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವುದು ಇಲ್ಲಿನ ಹೆಗ್ಗಳಿಕೆ. ಹಾಗೆಯೇ ಡೇಟಾ ಎಂಟ್ರಿ ಸಿಬ್ಬಂದಿ ಹುದ್ದೆ ಖಾಲಿ ಇದ್ದು ಫೀಲ್ಡ್ ವರ್ಕ್ ಜವಬ್ದಾರಿ ಇರುವ ಕಿರಿಯ ಆರೋಗ್ಯ ಸಹಾಯಕಿಯರು ಕೆಲವೊಮ್ಮೆ ಡೇಟಾ ಎಂಟ್ರಿ ಮಾಡುವ ಕೆಲಸ ಅನಿವಾರ್ಯವಾಗಿ ಮಾಡಬೇಕಿದೆ. ಹಾಗಾಗಿ ಇಲ್ಲಿಗೆ ಸಿಬ್ಬಂದಿ ಭರ್ತಿ ಮಾಡುವ ಜವಬ್ದಾರಿ ಇಲಾಖೆಗಿದ್ದು ಆ ಮೂಲಕ ಇನ್ನಷ್ಟು ಉತ್ತಮ ಸೇವೆ ನೀಡಲು ಹಾಗೂ ಸರಕಾರಿ ಪ್ರಾಥಮಿಕ ಆರೋಗ್ಯ ಕೇಮದ್ರಗಳ ಬಗ್ಗೆ ಭರವಸೆ ಮೂಡಿಸಲು ಸಾಧ್ಯ.
ಏಳು ಗ್ರಾಮಗಳು ಈ ಕೇಂದ್ರದಡಿಗೆ ಬರುತ್ತದೆ. ಅತ್ಯುತ್ತಮ ಸೇವೆ ಇಲ್ಲಿ ಲಭ್ಯವಿದೆ. ರೋಗಿಗಳು ಅವರ ಕುಟುಂಬಸ್ಥರು ಇರುವ ಸಿಬ್ಬಂದಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಇಲ್ಲಿ ಸದ್ಯ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಕೊರತೆ ನೀಗಿಸಿದರೆ ರೋಗಿಗಳಿಗೆ ಇನ್ನಷ್ಟು ಉತ್ತಮ ಸೇವೆ ನೀಡಬಹುದು.
ನವೀನ್ ಪಾದಲ್ಪಾಡಿ
ತಾಲೂಕು ಪಂಚಾಯಿತಿ ಸದಸ್ಯರು


