ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಗಳಿಗೆ ನೀಡುವ ಸಹಕಾರ ಅದು ಕೇವಲ ಪುಸ್ತಕದ ರೂಪ ಅಲ್ಲ. ಇಲ್ಲಿನ ಸಮಾಜದ ಎಲ್ಲರ ಶ್ರಮದ ಫಲ ಅದರಲ್ಲಿದ್ದು, ಈ ಸಹಕಾರವನ್ನು ಸದ್ವಿನಿಯೋಗ ಮಾಡುವುದರೊಂದಿಗೆ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ದೊಡ್ಡದೊಂದು ಗುರಿಯನ್ನು ಇಟ್ಟುಕೊಳ್ಳಬೇಕು ಎಂದು ವಿಶ್ವಾಸ್ ಕ್ಯಾಟರಿಂಗ್ನ ಮಾಲಕ ಹಾಗೂ ರೋಟರಿ ಸಂಸ್ಥೆಯ ಸತೀಶ್ ಬೋಳಾರ್ ಅಭಿಪ್ರಾಯಪಟ್ಟರು.

ಅವರು ಕೊಲ್ಯ ಸೋಮೇಶ್ವರದ ಬ್ರಹ್ಮ ಶ್ರೀ ನಾರಾಯಣಗುರು ಸಭಾ ಮಂದಿರದಲ್ಲಿ ಭಾನುವಾರ ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ೩೭ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಮಂಗಳೂರು ಇದರ ಅಧ್ಯಕ್ಷ ರವಿ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಗೋಕರ್ಣನಾಥ ಕೋ- ಅಪರೇಟಿವ್ ಬ್ಯಾಂಕ್ ಲಿ. ಮಂಗಳೂರು ಇದರ ಉಪಾಧ್ಯಕ್ಷ ರಾಜೇಶ್ ಜಿ. ಸುವರ್ಣ, ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಅಧ್ಯಕ್ಷ ವಿಶ್ವನಾಥ್ ಕೊಲ್ಯ, ಪಡುಮಲೆಯ ಉಲ್ಲಾಸ್ ಕೋಟ್ಯಾನ್, ವಸ್ತ್ರ ಕುಟೀರ ಮಂಗಳೂರು ಇದರ ಮಾಲಕ ಉಮೇಶ್ ರಾಜ್, ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಅನುಸೂಯ ಎ., ಶ್ರೀ ನಾರಾಯಣ ಗುರು ಮಹಿಳಾ ಸಂಘದ ಗೌರವಾಧ್ಯಕ್ಷೆ ವಿಶಾಲಾಕ್ಷಿ ಜಿ., ಅಧ್ಯಕ್ಷೆ ಕಸ್ತೂರಿ ವೇಣುಗೋಪಾಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ವಿದ್ಯಾರ್ಥಿವೇತನ ನೀಡಲಾಯಿತು. ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಬಿಲ್ಲವ ಸೇವಾ ಸಮಾಜ ಕೊಲ್ಯ ಇದರ ಅದ್ಯಕ್ಷ ಬಾಳಪ್ಪ ಪೂಜಾರಿ ಸ್ವಾಗತಿಸಿದರು. ಗೌರವಾಧ್ಯಕ್ಷ ಡಾ. ಪಿ. ರಾಮಾನುಜಂ ಪ್ರಸ್ತಾವನೆಗೈದರು. ಕಾರ್ಯದರ್ಶಿ ವೇಣುಗೋಪಾಲ್, ಶ್ರೀ ನಾರಾಯಣ ಗುರು ಮಹಿಳಾ ಸಂಘದ ಕಾರ್ಯದರ್ಶಿ ರೇವತಿ ವಿಶ್ವನಾಥ್ ವರದಿ ವಾಚಿಸಿದರು. ಉಚಿತ ಪುಸ್ತಕ ಮತ್ತು ವಿದ್ಯಾರ್ಥಿ ವೇತನದ ವಿವರಣೆಯನ್ನು ಈಶ್ವರ್ ಸುವರ್ಣ ಕನೀರು ತೋಟ ನಿರ್ವಹಿಸಿದರು. ಕ್ರೀಡಾ ವಿಜೇತರ ವಿವರಣೆಯನ್ನು ಮಾಧವ ಕುಂದರ್ ನಿರ್ವಹಿಸಿದರು. ಕ್ರೀಡಾ ಸಂಚಾಲಕ ಸೀತಾರಾಮ ಎಸ್. ಕರ್ಕೇರ ವಂದಿಸಿದರು. ಜೈಕುಮಾರ್ ಪರ್ಯತ್ತೂರು ಕಾರ್ಯಕ್ರಮ ನಿರ್ವಹಿಸಿದರು.




