ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ನೇಪಾಳ ಭೂಕಂಪಪೀಡಿತ ಪ್ರದೇಶಕ್ಕೆ ತೆರಳಿ ಗಾಯಾಳುಗಳ ಸೇವೆ ಮಾಡುವ ಮೂಲಕ ವೈದ್ಯ ವೃತ್ತಿ ಕೇವಲ ಹಣ ಗಳಿಸುವ ಯಂತ್ರವಲ್ಲ ಎನ್ನುವ ಮಾತನ್ನು ನಿಟ್ಟೆ ವಿಶ್ವವಿದ್ಯಾಲಯದ ವೈದ್ಯರು ಸುಳ್ಳಾಗಿಸಿದ್ದಾರೆ. ಅದರಲ್ಲೂ ಯುವ ವೈದ್ಯರು ಈ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದು ಶ್ಲಾಘನೀಯ. ಆ ಮೂಲಕ ನಿಟ್ಟೆ ವಿವಿಯ ಕೀರ್ತಿ ಪತಾಕೆಯನ್ನು ಹಿಮಾಲಯದ ತಪ್ಪಲಲ್ಲಿ ಹಾರಿಸಿರುವುದು ಅಭಿನಂದನೀಯ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಹೇಳಿದರು.
ಭೂಕಂಪ ಪೀಡಿತ ನೇಪಾಳದಲ್ಲಿ ನರಳುತ್ತಿರುವ ಜನರಿಗೆ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅಲ್ಲಿಗೆ ತೆರಳಿದ್ದ ಚಿಕಿತ್ಸೆ ನೀಡಿದ ನಿಟ್ಟೆ ವಿಶ್ವವಿದ್ಯಾಲಯ ವೈದ್ಯರ ತಂಡಕ್ಕೆ ಶುಕ್ರವಾರ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದಲ್ಲಿ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು.
ತಂಡದ ನೇತೃತ್ವ ವಹಿಸಿದ್ದ ಡಾ. ಸತೀಶ್ ರಾವ್ ಮಾತನಾಡಿ ಏ. ೨೭ರಂದು ಭೂಕಂಪ ಪೀಡಿತಪೀಡಿತ ನೇಪಾಳದಲ್ಲಿ ತುರ್ತು ಚಿಕಿತ್ಸೆ ನಿಟ್ಟಿನಲ್ಲಿ ತಂಡ ರಚಿಸುವಂತೆ ನಿಟ್ಟೆ ಕುಲಾಧಿಪತಿ ಹೇಳಿದರು. ಆ ದೇಶದಲ್ಲಿ ಕಠಿಣ ಪರಿಸ್ಥಿತಿ ಇದ್ದ ಕಾರಣ ಅಲ್ಲಿಗೆ ತೆರಳಲು ಕುಟುಂಬಸ್ಥರ ಒಪ್ಪಿಗೆ ಸಿಗುವುದು ಕಷ್ಟಕರವಾಗಿತ್ತು. ಈ ಹಿನ್ನೆಲೆಯಲ್ಲಿ ತಂಡ ರಚನೆ ಕಷ್ಟಕರವಾಗಿತ್ತಾದರೂ ವೈದ್ಯರು ಉತ್ಸಾಹ ತೋರಿದ್ದರಿಂದ ಸುಲಲಿತವಾಯಿತು ಎಂದು ಹೇಳಿದರು.
ಮನಶಾಸ್ತ್ರಜ್ಞ ಡಾ. ಸತೀಶ್ ರಾವ್ ನೇತೃತ್ವದ ತಂಡದಲ್ಲಿದ್ದ ಪ್ರಥಮ ಎಂಪಿಎಚ್ ವಿದ್ಯಾರ್ಥಿ ನೇಪಾಲ ಮೂಲದ ಗಣೇಶ್ ಶ್ರೇಷ್ಠ, ಹರ್ಷರಾಜ್ ದಹಾಲ್, ನ್ಯೂರೋ ಸರ್ಜನ್ ಡಾ. ಅನಂತನ್, ಇಂಟೆನ್ಸಿವಿಟ್ ಡಾ. ನರೇಶ್ ರೈ, ಆರ್ಥೊಪೆಡಿಕ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಸಂತೋಷ್ ಬಾಬು, ಸರ್ಜರಿ ವಿಭಾಗದ ಡಾ. ಗೌರವ್ ಶೆಟ್ಟಿ, ಆರ್ಥೊಪೇಡಿಕ್ಸ್ ವಿಭಾಗದ ಡಾ.ಕುಶಾಲಪ್ಪ, ಅನೇಸ್ತಿಯಾ ವಿಭಾಗದ ಡಾ. ಮಯೂರ್ ಹಾಗೂ ಮುಖ ಮತ್ತು ಸೌಂದರ್ಯ ಚಿಕಿತ್ಸಾ ವಿಭಾಗದ ಸರ್ಜನ್ ಡಾ.ಗೋಪಿನಾಥ ಅವರನ್ನು ಅಭಿನಂದಿಸಲಾಯಿತು.
ಪ್ರಯಾಣದ ದಿನ ಸಂಜೆ ೪.೩೦ರ ಹಾರಾಟದ ವಿಮಾನದ ಟಿಕೆಟ್ ಬುಕ್ ಮಾಡುವ ಸಂದರ್ಭ ಮಧ್ಯಾಹ್ನ ಒಂದು ಗಂಟೆ ಕಳೆದಿತ್ತು. ನಿಲ್ದಾಣ ತಲುಪುವಾಗ ಗಂಟೆ ೩.೪೫ ಆಗಿದ್ದು ಸಿಬ್ಬಂದಿ ಒಳಹೋಗಲು ಅವಕಾಶ ಒಡಲಿಲ್ಲ. ೭೦ಲಗೇಜ್ ಬ್ಯಾಗ್ಗಳಿದ್ದವು. ಸಿಬ್ಬಂದಿ ಬಳಿ ನೇಪಾಳಕ್ಕೆ ತೆರಳುವ ಅಗತ್ಯತೆ ಬಗ್ಗೆ ಮಾಹಿತಿ ನೀಡಿದ ಪರಿಣಾಮ ಸ್ಪಂದಿಸಿದರು. ದಾಡಿಂಗ್ ತಲುಪಿದಾಗ ಸಂಪೂರ್ಣ ನಾಶವಾದ ದೃಶ್ಯ ಕಂಡು ಬಂತು. ಎಲ್ಲರೂ ಪ್ರತ್ಯೇಕ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಕೆಲಸ ಮಾಡಿದರು. ಆಹಾರ ಸೇವನೆಗೆ ಸಮಯವಿರಲಿಲ್ಲ. ಬೆಳಗ್ಗೆ ಚಹಾಕ್ಕೆ ತಿಂಡಿಯಿಲ್ಲದ ಕಾರಣ ಕಡ್ಲೆ, ಹಾಲು ಇಲ್ಲದ ಚಹಾ ಸೇವಿಸಿದೆವು. ನೇಪಾಲ ಮೂಲದ ವಿದ್ಯಾರ್ಥಿನಿ ಸರಸ್ವತಿ ಪ್ರತಿದಿನ ರೋಗಿಗಳ ಆರೈಕೆ ಮಾಡುತ್ತಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿತ್ತು. ಸ್ವಯಂಭುನಾಥ ದೇವಸ್ಥಾನ ಬಹುತೇಕ ಹಾನಿಗೀಡಾಗಿತ್ತು. ಸೇವೆಗಾಗಿ ಅಂತಹ ಅವಕಾಶ ಯಾವಾಗಲೂ ಸಿಗದು ಎಂದರು.
ನಿಟ್ಟೆ ವಿವಿ ಉಪ ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ ಉಪಸ್ಥಿತರಿದ್ದರು. ಡಾ.ಜಯಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ವಂದಿಸಿದರು.
ವೈದ್ಯ ಪದವಿ ಪಡೆಯುವವರು ಇಂತಹ ಘಟನೆಗಳಾದಾಗ ಸಹಾಯ ಮಾಡಬೇಕು. ಈ ಮೂಲಕ ವೈದ್ಯನ ನಿಜ ಸ್ವರೂಪ ಕಂಡುಬರುತ್ತದೆ. ವೈದ್ಯನಾದಾತ ಇಂತಹ ಸ್ಥಿತಿಯಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಅನ್ನುವ ಅವಕಾಶ ಎಂದು ಭಾವಿಸಿ ಕೂಡಲೇ ಕೆಲಸ ಕಾರ್ಯಗಳನ್ನು ಬಿಟ್ಟು ದೈವೀ ಕಾರ್ಯವೆಂದು ಭಾವಿಸಿ ವಿಮಾನ ಏರಿದ್ದೇವೆ. ತಾಯಿಯ ಪ್ರೇರಣೆಯಿಂದಲೇ ನೇಪಾಳ ಹೋಗುವಂತಾಯ್ತು. ಒಂದೇ ದಿನದ ನಿರ್ಧಾರದಲ್ಲಿ ಬೆಳಿಗ್ಗೆ ತಾಯಿಯಲ್ಲಿ ಅನುಮತಿ ಕೇಳಿದಾಗ ಹೆದರಿದ್ದರು. ಆದರೆ ಧೈರ್ಯ ತುಂಬಿದ ನಂತರ ಅವರೇ ಸಂಕಷ್ಟದಲ್ಲಿರುವವರ ಸೇವೆ ದೇವತಾ ಸೇವೆ ಎಂಬ ಪ್ರೇರಣೆಯಿಂದ ಹಿಂದೆ ಮುಂದೆ ನೋಡದೆ ಪ್ಯಾಕ್ ಅಪ್ ಮಾಡಿ ಹೊರಡಿದ್ದೆ. ನಾವು ಉಳಿದುಕೊಂಡ ಹೊಟೇಲಿನಲ್ಲಿ ೩-೪ ಸೆಕೆಂಡುಗಳವರೆಗೆ ಭೂಕಂಪನದ ಅನುಭವವಾಗಿತ್ತು. ಬಳಿಕ ಎರಡು ದಿನಗಳಲ್ಲಿ ಗೋರ್ಕಾ ಪ್ರದೇಶದಲ್ಲಿ ೪.೮ ರಿಕ್ಟರ್ ಮಾಪಕದಲ್ಲಿ ಕಂಪನವಾಯಿತು. ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಕಂಪನದ ಅನುಭವವಾಯಿತು. ಆದರೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಧೈರ್ಯ ತುಂಬಿದ್ದರಿಂದ ಹೆದರದೆ ಧರ್ಯದಲ್ಲೇ ಇದ್ದೆವು. ಆದರೆ ಸ್ಥಳದಲ್ಲಿದ್ದ ಹಳೇಯ ಕಟ್ಟಡಗಳು ಉರುಳಿಬಿದ್ದವು. ಅದರ ನಡುವೆ ಎರಡು ತಂಡದಲ್ಲಿದ್ದ ನಮ್ಮವರು ಅಪಾಯಕಾರಿ ದಾಧಿಂಗ್ ಮತ್ತು ಹಾರ್ಡ್ಕೋ ಬೆಟ್ಟದ ಪ್ರದೇಶದಲ್ಲಿ ರೋಗಿಗಳ ಆರೈಕೆಯನ್ನು ನಡೆಸಿದರು. ೧೩೩ ಮನೆಗಳು ಧರಾಶಾಹಿಯಾದ ಪ್ರದೇಶದಲ್ಲಿ ಅವರಿಗೇ ಆಹಾರಕ್ಕೆ ಕಷ್ಟ ಇರುವ ಸಂದರ್ಭ, ನಮ್ಮನ್ನು ಬಿಡದೇ ತಾವು ತಯಾರಿಸಿದ ಆಹಾರವನ್ನು ನೀಡುತ್ತಿದ್ದರು. ಒಳ್ಳೆಯ ಗೌರವವನ್ನು ನೀಡಿದ್ದಾರೆ.
ಡಾ.ಮಯೂರ್
ಅನೇಸ್ತಿಯಾ ವಿಭಾಗ
ಕೆ.ಎಸ್.ಹೆಗ್ಡೆ ಆಸ್ಪತ್ರೆ
ಯುನಿಸೆಫ್, ‘ಮಾಸಿ’ ಮಲೇಷಿಯಾದ ತಂಡ, ಯುಎನ್ ಓ, ಡಬ್ಲ್ಯು ಹೆಚ್ ಓ, ಇಸ್ರೇಲ್, ಸೌದಿ ಅರೆಬಿಯಾ, ಪಾಕಿಸ್ತಾನದ ತಂಡಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೊದಲು ಮೌಂಟ್ ಎವರೆಸ್ಟ್ ಶಿಖರವನ್ನು ಭಾರತೀಯ ತೀನ್ ಸಿಂಗ್ ಜತೆಗೆ ಏರಿದ ಹೆಡ್ಮಂಡ್ ಹಿಲರಿ ಅವರ ಮೊಮ್ಮಗಳು ಎಮಿಲ್ಲಿಯಾ ಹಿಲ್ಲರಿ ಓರ್ವಳೇ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ವಿಶೇಷ ಅನ್ನಿಸಿತ್ತು. ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ನೇಪಾಳ ಮೂಲದ ಇಬ್ಬರನ್ನು ಜತೆಗೆ ಕರೆದುಕೊಂಡು ಹೋದ ಪರಿಣಾಮ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪರಿಚಯ ಸುಲಭದಿಂದ ಆಯಿತು. ಅಲ್ಲಿ ೧೫ ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ೬೦ ಗಾಯಾಳುಗಳು ದಾಖಲಾಗಿದ್ದರು. ಅದರಿಂದ ದಿನಕ್ಕೆ ೬೦ ರೋಗಿಗಳ ಶುಶ್ರೂಷೆಯನ್ನು ನಡೆಸಿದೆವು. ಇದರಿಂದ ವೃತ್ತಿಯಲ್ಲಿ ಸಿಗದ ಅನುಭವ ದೊರೆತಂತಾಯಿತು. ಒಂದು ಆಪರೇಷನ್ ಥಿಯೇಟರಿನಲ್ಲಿ ತಂಡದ ಕೇವಲ ಇಬ್ಬರು ವೈದ್ಯರುಗಳು ಕರ್ತವ್ಯ ನಿಭಾಯಿಸಿದರು. ಎರಡು ವರ್ಷಗಳ ನಂತರ ಮತ್ತದೇ ಪ್ರದೇಶಕ್ಕೆ ಹೋಗುವ ಆಸೆಯನ್ನು ಹೊಂದಿದ್ದೇವೆ.೧೯೯೨ರಲ್ಲಿ ನೇಪಾಳ ಹೋಗುವ ಆಸೆಯಿತ್ತು. ಆದರೆ ಈ ಬಾರಿ ಜನರ ಸೇವೆ ಮಾಡುವ ಭಾಗ್ಯದಿಂದ ಅಲ್ಲಿಗೆ ಹೋಗಿದ್ದೇವೆ. ಬಡತನ ಹೆಚ್ಚಾಗಿದೆ. ನೆಪಾಳವನ್ನು ಪರಕೀಯರು ನಿಯಂತ್ರಿಸುವಂತೆ ಕಾಣುತ್ತಿದೆ. ಸರಿಯಾದ ಮೂಲಸೌಲಭ್ಯಗಳು ಸಿಗುತ್ತಿಲ್ಲ. ಆದರೂ ಯುನಿಸೆಫ್ ಮತ್ತು ಡಬ್ಲ್ಯುಹೆಚ್ ಓ ಅವರ ಕಾರ್ಯವೈಖರಿಯಿಂದ ಸಾಂಕ್ರಾಮಿಕ ರೋಗಗಳು ಯಾವುದೇ ಭಾಧಿಸಿಲ್ಲ.
ವೈದ್ಯ ಡಾ.ಗೋಪಿನಾಥ್
ಮುಖ ಮತ್ತು ಸೌಂದರ್ಯ ವಿಭಾಗದ ಮುಖ್ಯಸ್ಥರು
ಕೆ.ಎಸ್.ಹೆಗ್ಡೆ
ಆಸ್ಪತ್ರೆ




