UN NETWORKS
ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯಿತಿ ಕಚೇರಿಯ ಅಭಿವೃದ್ಧಿ ಅಧಿಕಾರಿಯ ನಕಲಿ ಸಹಿ ಹಾಗೂ ನಕಲಿ ಸೀಲು, ಲೆಟರ್ ಪ್ಯಾಡ್ ಬಳಸಿ ದಾಖಲೆ ಸೃಷ್ಟಿಸಿದ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಾಗಿದೆ.
ಸೆ. 13 ರಂದು ದಾಖಲೆಯನ್ನು ಫೋರ್ಜರಿ ಮಾಡಲಾಗಿದೆ. ಆ ತಾರೀಕಿನಂದು ಮುನ್ನೂರು ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯೇ ಇರಲಿಲ್ಲ. ಹಿಂದೆ ಇದ್ದಂತಹ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಎಂಬವರು ಕಚೇರಿಯ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ತೀರಿ ಹೋದ ಬಳಿಕ ಅವರ ಸಹಿಯನ್ನೇ ನಕಲಿ ಮಾಡಿ ದಾಖಲೆ ತಯಾರಿಸಲಾಗಿದೆ.
ಮುನ್ನೂರು ನಿವಾಸಿ ಅಬ್ದುಲ್ ನಾಸಿರ್ ಯಾನೆ ಸೀದಿ ಬಾವ ಎಂಬವರು ಮಗಳು ನಿಧಾ ಎಂಬವರ ಆಧಾರ್ ಕಾರ್ಡು ದಾಖಲಾತಿ ಬದಲಾವಣೆಗಾಗಿ ಪಂಚಾಯಿತಿಗೆ ಆಗಮಿಸಿದ್ದರು. ಈ ಸಂದರ್ಭ ಸಿಬ್ಬಂದಿ ದಾಖಲಾತಿ ಪರಿಶೀಲನೆ ವೇಳೆ ಕಡತದಲ್ಲಿ ಯಾವುದೇ ರೀತಿಯ ರೆಫರೆನ್ಸ್ ಸಂಖ್ಯೆ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ , ಸಹಿ ಬಳಸಿ ದಾಖಲಾತಿ ನಡೆಸಿರುವುದು ಬೆಳಕಿಗೆ ಬಂದಿದೆ.ಈ ಕುರಿತು ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಈಗಿನ ಪಿಡಿಓ ರವೀಂದ್ರ ರಾಜೀವ ನಾಯ್ಕ್ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ . ಅದರ ಆಧಾರದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.


