UN NETWORKS
ತಲಪಾಡಿ: ಶಿಕ್ಷಣ ಸಂಸ್ಥೆಗಳಲ್ಲಿ ಹಳೆ ವಿದ್ಯಾರ್ಥಿಗಳ ರಚನಾತ್ಮಕ ಕಾರ್ಯ ಮಹತ್ವಪೂರ್ಣವಾಗಿದ್ದು ಅದರಲ್ಲೂ ಪ್ರಾಥಮಿಕ ಶಿಕ್ಷಣ ಸಂಸ್ಥೆಯನ್ನು ಸದಾ ಸ್ಮರಿಸುವ, ಮರಿಯಾಶ್ರಮ ಹಳೆ ವಿದ್ಯಾರ್ಥಿ ಸಂಘ ಶ್ಲಾಘನೀಯ ಎಂದು ಶಾಲಾ ಸಂಚಾಲಕ ಧರ್ಮಗುರು ಎಡ್ವಿನ್ ಮಸ್ಕರೇನಸ್ ಹೇಳಿದರು.
ಶಾಲಾ ಅಮೃತ ಮಹೋತ್ಸವ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದ ಪ್ರಾರಂಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಅಮೃತಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಭಾಶ್ಚಂದ್ರ ಕಣ್ವತೀರ್ಥ ಮಾತನಾಡಿ ಕರ್ನಾಟಕ ಗಡಿನಾಡ ಅಭಿವದ್ಧಿ ಪ್ರಾಧಿಕಾರವು ಬಿಡುಗಡೆಗೊಳಿಸಿದ ಪ್ರಾರಂಭಿಕ ಹಂತದ ಸಹಾಯ ಧನ ಹಾಗೂ ಅದಕ್ಕಾಗಿ ಸಹಾಯ ಮಾಡಿದ ಡಾ. ವೀರಪ್ಪ ಮೋಯಿಲಿಯವರನ್ನು ಹಾಗೂ ಸಚಿವ ಯು. ಟಿ. ಖಾದರ್ ಅವರನ್ನು ಅಭಿನಂದಿಸಿ, ಸುಮಾರು 65ಲಕ್ಷ ರೂ. ಅಂದಾಜು ವೆಚ್ಚದ ಈ ಯೋಜನೆಯು ವಿವಿಧ ಹಂತಗಳಲ್ಲಿ ನಡೆಯುವುದು ಎಂದು ತಿಳಿಸಿದರು.
ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ನಾಯಕ್ ಮಾತನಾಡಿ ಯೋಜನೆಯ ಒಟ್ಟು ವೆಚ್ಚವನ್ನು ಸರಿದೂಗಿಸಲು ಹಳೆ ವಿದ್ಯಾರ್ಥಿಗಳ ವಿವಿಧ ಸ್ತರಗಳಲ್ಲಿ ಶ್ರಮಿಸಬೇಕೆಂದು ವಿನಂತಿಸಿದರು.ಮುಖ್ಯ ಶಿಕ್ಷಕಿ ಮೇರಿ ಪಿಂಟೊ, ಮಧುಸೂದನ ಆಚಾರ್, ನಾರಾಯಣ ಪೂಜಾರಿ, ವಿನ್ಸೆಂಟ್ ಡಿಸೋಜ ಹಾಗೂ ಮೂಸಾ ತಲಪಾಡಿ ಉಪಸ್ಥಿತರಿದ್ದರು.ವಿನಯ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಸಿದ್ದಿಕ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ ವಂದಿಸಿದರು.


