UN NETWORKS
ಉಳ್ಳಾಲ: ವಾಹನ ದಟ್ಟಣೆ ಜತೆಗೆ ಅಪಘಾತಗಳು ಹೆಚ್ಚುತ್ತಿರುವ ರಸ್ತೆಯಲ್ಲಿ, ಸುರಕ್ಷತೆಯನ್ನು ಗಮನದಲ್ಲಿಟ್ಟು ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ದೇರಳಕಟ್ಟೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ಇನೋಳಿ ಕಂಬ್ಲಪದವು ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರಸ್ತೆವರೆಗಿನ ಅಗಲೀಕರಣ ಕಾಮಗಾರಿಗೆ ನಿಟ್ಟೆ ಆಸ್ಪತ್ರೆ ಎದುರುಗಡೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ತೊಕ್ಕೊಟ್ಟು ಮೆಲ್ಕಾರ್ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರ ಮುಂದಾಗುವ ಸಂದರ್ಭ, ರಸ್ತೆ ಎನ್ಹೆಚ್ಎಐ ಇಲಾಖೆಗೆ ವರ್ಗೀಕರಣಗೊಂಡಿತ್ತು. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೆಲ ತಿಂಗಳ ಹಿಂದೆ ಮಂಗಳೂರು ಭೇಟಿ ಸಂದರ್ಭ ತೊಕ್ಕೊಟ್ಟು -ಮೆಲ್ಕಾರ್ ರಸ್ತೆ ಚತುಷ್ಪಥ ಕಾಮಗಾರಿಯನ್ನು ತಿಂಗಳೊಳಗೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಅದು ಈಡೇರಿಲ್ಲ. ಅದಕ್ಕಾಗಿ ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಿ ಹಂತವನ್ನು ಪ್ರಶ್ನಿಸುವುದಾಗಿ ಭರವಸೆ ನೀಡಿದ ಸಚಿವ ಖಾದರ್, ದೇರಳಕಟ್ಟೆ -ಇನೋಳಿ ರಸ್ತೆ 7 ಮೀ ಅಗಲವಿದ್ದು, ಇದರಿಂದ ಅನೇಕ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕಾಗಿ ಮತ್ತೆ 7 ಮೀ ಅಗಲಗೊಳಿಸಿ ಒಟ್ಟು 14 ಮೀ ಅಗಲದ ಕಾಮಗಾರಿಯನ್ನು ನಡೆಸಲಾಗುವುದು. ಅದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಸದಸ್ಯರುಗಳಾದ ಕೆ.ಹೆಚ್. ಹಸೈನಾರ್, ಕೆಬೀರ್ ಡಿ., ಸತೀಶ್ ಕುಮಾರ್ , ರಝಾಕ್, ಕರಾವಳಿ ಪ್ರಾಧಿಕಾರದ ನಿರ್ದೇಶಕ ಯೂಸುಫ್ ಬಾವಾ, ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಸಂಘಟನಾ ಕಾರ್ಯದರ್ಶಿ ಝಕರಿಯಾ ಮಲಾರ್, ಯುವಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ , ಮಂಜನಾಡಿ ಯುವಕಾಂಗ್ರೆಸ್ ಮುಖಂಡ ಅಶ್ರಫ್ ಕಟ್ಟೆಮಾರ್, ರಫೀಕ್ ಕಲ್ಕಟ್ಟ, ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರ್, ಹಿರಿಯರಾದ ಅಬೂಬಕರ್ , ಮುಖಂಡರುಗಳಾದ ರವಿರಾಜ್ ಶೆಟ್ಟಿ, ಫಾರುಕ್ ಜಿ.ಎನ್, ಇಬ್ರಾಹಿಂ ಬದಿಯಾರ್, ಮಾಜಿ ತಾ.ಪಂ ಸದಸ್ಯ ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.


