ಬೆಂಗಳೂರು: 67ನೇ ಗಣರಾಜ್ಯೋತ್ಸವ ಆಚರಣೆಯನ್ನು ರಾಜ್ಯಾದ್ಯಂತ ವಿದ್ಯುಕ್ತವಾಗಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿ, ಸೈನಿಕರಿಂದ ಗೌರವ ರಕ್ಷೆ ಸ್ವೀಕರಿಸಿದರು. ಇದಕ್ಕೂ ಮೊದಲು ಪೊಲೀಸ್ ಬ್ಯಾಂಡ್ ವೃಂದದಿಂದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆಯೇ ಸೇನೆಯ ಹೆಲಿಕಾಪ್ಟರ್ ರಾಷ್ಟ್ರಧ್ವಜದ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಿತು.
ಬಳಿಕ ಹಿಂದಿಯಲ್ಲಿ ಭಾಷಣ ಪ್ರಾರಂಭಿಸಿದ ರಾಜ್ಯಪಾಲರು, ಭಾರತ 67 ವರ್ಷಗಳ ಹಿಂದೆ ಗಣರಾಜ್ಯವಾಯಿತು. ಅದೆಷ್ಟೋ ಜನರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಗಣರಾಜ್ಯೋತ್ಸವ ದಿನವಾದ ಇಂದು ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದವರಿಗೆ ಗೌರವವನ್ನು ಈ ಮೂಲಕ ಸಲ್ಲಿಸುತ್ತೇವೆ ಎಂದರು.


