ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ತಮ್ಮ ಸ್ವಕ್ಷೇತ್ರ ಉಳ್ಳಾಲ ಇಲ್ಲಿನ ಉಳ್ಳಾಲದ ನಗರಸಭೆಯಲ್ಲಿ ವಿಧಾನಪರಿಷತ್ ಚುನಾವಣೆಯ ಮತ ಹಾಕಿದರು.
ಮಂಗಳೂರಿನ ತಾಲೂಕು ಪಂಚಾಯಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮತ ಚಲಾವಣೆ ನಡೆಯುವ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ಸಚಿವರು ಅಲ್ಲಿ ತಮ್ಮ ಮತಪಟ್ಟಿಯಲ್ಲಿ ಹೆಸರು ಇರದೆ ಉಳ್ಳಾಲ ನಗರಸಭೆಯತ್ತ ದೌಡಾಯಿಸಬೇಕಾಯಿತು. ಉಳ್ಳಾಲದ ನಗರಸಭೆಯಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಂದ ಆಯ್ಕೆಗೊಳ್ಳಲಿರುವಂತಹ ವಿಧಾನಪರಿಷತ್ ನ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಅವರ ಪರವಾಗಿ ಮತ ಚಲಾಯಿಸಿದ್ದೇನೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಾದ್ಯಂತ ಕಾಂಗ್ರೆಸ್ ನ ಅಭ್ಯರ್ಥಿಗಳನ್ನೇ ಸ್ಥಳೀಯ ಜನಪ್ರತಿನಿಧಿಗಳು ಚುನಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ. ಗ್ರಾ.ಪಂ, ಜಿ.ಪಂ, ತಾ.ಪಂ ಇವರು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸಲು ಅಧಿಕಾರ ಮತ್ತು ಶಕ್ತಿಯನ್ನು ಕೊಟ್ಟಿರುವುದು ಕಾಂಗ್ರೆಸ್ ಪಕ್ಷವಾಗಿದೆ. ಮುಖ್ಯಮಂತ್ರಿಯವರು ಸಮಿತಿಯೊಂದನ್ನು ರಚಿಸಿ ಸ್ಥಳೀಯ ಸಂಸ್ಥೆಗಳ ಕುಂದು ಕೊರತೆಗಳನ್ನು ಬಗೆಹರಿಸಿದ್ದಾರೆ. ಇದನ್ನು ಅರ್ಥೈಸಿಕೊಂಡಿರುವ ಜನಪ್ರತಿನಿಧಿಗಳು ಕಾಂಗ್ರೆಸ್ ನ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಜಯಗಳಿಸಲಿದ್ದಾರೆ ಎಂದರು.









