ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ರಾಜಕೀಯ ಪ್ರೇರಿತ ಉದ್ದೇಶಕ್ಕಾಗಿ ಬಿಜೆಪಿ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಸುಬ್ರಮಣ್ಯ ಸ್ವಾಮಿ ಬಿಜೆಪಿಯ ಸಾಕು ನಾಯಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ನ್ಯಾಶನಲ್ ಹೆರಾಲ್ಡ್ ಪ್ರತಿಕೆ ಪ್ರಕರಣಕ್ಕೆ ಸಂಬಂಧಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಮಂಗಳೂರು ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆಸಲಾದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯ ಬಗ್ಗೆ ಅಪಪ್ರಚಾರ ಮಾಡುವ ಯಾವುದೇ ನೈತಿಕ ಹಕ್ಕು ಬಿಜೆಪಿಗಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾಂಗ್ರೆಸ್ ನಾಯಕತ್ವವನ್ನು ಅಳಿಸಲು ಈ ರೀತಿಯ ಹುನ್ನಾರ ನಡೆಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಕಿಡಿಕಾಡಿದರು.
ಅರಣ್ಯ ಸಚಿವ ರಮಾನಾಥ್ ರೈ ಮಾತನಾಡಿ ಬಿಜೆಪಿ ಪಕ್ಷಕ್ಕೆ ಕರುಣೆ ಇಲ್ಲ. ನೆಹರು ಕಾಲದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಕಾಂಗ್ರೆಸ್ ನಡೆಸಿಕೊಂಡು ಬರುತ್ತಿತ್ತು ಆದರೆ ಇದನ್ನು ಬಿಜೆಪಿ ಸರಕಾರ ನುಂಗಲು ಪ್ರಯತ್ನಿಸುತ್ತಿದೆ. ಸುಬ್ರಮಣ್ಯ ಸ್ವಾಮಿ ಒಬ್ಬ ಮಾನಸಿಕ ಅಸ್ವಸ್ಥ. ಸುಳ್ಳು ಪ್ರಕರಣವನ್ನು ಸೃಷ್ಟಿಸಿ ಈ ಪ್ರಕರಣಕ್ಕೆ ಮರುಜೀವ ನೀಡಲಾಗುತ್ತಿದೆ. ಸುಳ್ಳು ಆರೋಪದಡಿಯಲ್ಲಿ ಕಾಂಗ್ರೆಸ್ ನಾಯಕರನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸಿದರೆ ಬಿಜೆಪಿ ಸರಕಾರ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿ.ವಿ ಮೋಹನ್, ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಕಲ್, ಎ.ಸಿ ಭಂಡಾರಿ, ಪದ್ಮನಾಭ ಭಂಡಾರಿ, ಮಮತಾ ಗಟ್ಟಿ, ವಿಶ್ವಾಸ್ ಕುಮಾರ್ ದಾಸ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


