ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೋಟೆಪುರ: ಶಾಲೆಗಳಲ್ಲಿ ಆಹಾರೋತ್ಸವದಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ಪಡೆಯಲು ಸಹಕಾರಿ ಎಂದು ಮಂಗಳೂರು ತಾಲೂಕು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ.ಜ್ಞಾನೇಶ್ ಅಭಿಪ್ರಾಯಪಟ್ಟರು.
ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಅಯೋಜಿಸಲಾಗಿದ್ದ ವಸ್ತು ಪ್ರದರ್ಶನ, ಆಹಾರೋತ್ಸವ ಮೇಳ-2015 ಹಾಗೂ ಅಕ್ಷರ ದಾಸೋಹ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಇಂದು ಶಾಲಾ ಮಟ್ಟದಲ್ಲೇ ವ್ಯವಹಾರ ಜ್ಞಾನ ಅಗತ್ಯವಿದ್ದು ಟಿಪ್ಪು ಸುಲ್ತಾನ್ ಶಾಲೆಯಲ್ಲಿ ಆಹಾರೋತ್ಸವದ ಮೂಲಕ ಆ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ, ಇಂತಹ ಕಾರ್ಯಕ್ರಮದಿಂದ ಗ್ರಾಹಕರ ನಡುವಿನ ಸಂಬಂಧವೂ ಮಕ್ಕಳಲ್ಲಿ ಬೆಳೆಯುತ್ತದೆ ಎಂದು ಹೇಳಿದರು.ಅಕ್ಷರ ದಾಸೋಹ ಕಟ್ಟಡ ಉದ್ಘಾಟಿಸಿದ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಮಾತನಾಡಿ, ಟಿಪ್ಪು ಸುಲ್ತಾನ್ ಶಾಲೆ ದರ್ಗಾ ಅಧೀನದ ಪ್ರಥಮ ವಿದ್ಯಾಸಂಸ್ಥೆಯಾಗಿದೆ, ಕಳೆದ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದು ಇಲ್ಲಿನ ಶಿಕ್ಷಕ ವೃಂದದವರ ಪ್ರಯತ್ನ ಕಾರಣ, ಈ ಸಾಲಿನಲ್ಲಿ ಶೇ.100 ಫಲಿತಾಂಶ ಬರುವ ವಿಶ್ವಾಸವಿದೆ ಎಂದು ತಿಳಿಸಿದರು.
ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯಶೋಧರ ಜೆ ಆಹಾರೋತ್ಸವ ಮೇಳ ಉದ್ಘಾಟಿಸಿದರು. ಉದ್ಯಮಿ ಎಚ್.ಕೆ.ಖಾದರ್ ಬಹುಮಾನ ವಿತರಿಸಿದರು. ಸಂಸ್ಥೆಯ ಸಂಚಾಲಕ ಎ.ಕೆ.ಮೊಯಿದ್ದೀನ್, ಸಮಿತಿ ಸದಸ್ಯ ಅಹ್ಮದ್ ಅಬ್ಬಾಸ್, ಯು.ಕೆ.ಅಬ್ಬಾಸ್, ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಕ್ಷೇತ್ರ ಶಿಕ್ಷಣ ಸಂಯೋಜಕಿ ಹಿಲ್ಡಾ ಕ್ಲೆಮೇನ್ಸಿಯಾ ಪಿಂಟೋ ಹಾಗೂ ಫ್ರಾನ್ಸಿಸ್ ಲ್ಯಾನ್ಸಿ ಮೆನೇಜಸ್, ಟ್ರಸ್ಟ್ ಆಡಳಿತಾಧಿಕಾರಿ ಅಬ್ದುಲ್ ಲತೀಫ್, ಮಹಮ್ಮದ್ ಮೇಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.


