ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆ ಯಲ್ಲಿ ಪರ ವಿರೋಧ ಗುಂಪುಗಳ ನಡುವೆ ನಡೆದಿರುವ ಘರ್ಷಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡನ ಸಹಿತ ಇಬ್ಬರು ಮೃತ ಪಟ್ಟಿದ್ದು, ಈ ಘಟನೆಯನ್ನು ಖಂಡಿಸಿ ಬಜರಂಗದಳ ನವೆಂಬರ್ 13ರಂದು ಶುಕ್ರವಾರ ದಕ್ಷಿಣ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ರಾಜ್ಯದ ಬಹು ಸಂಖ್ಯಾತರ ಮತ್ತು ಕ್ರೈಸ್ತರ ವಿರೋಧದ ನಡುವೆಯೂ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದ್ದು, ಇದು ಹಿಂದೂ ವಿರೋಧಿ ನೀತಿಯಾಗಿದೆ. ಸರಕಾರದ ಈ ರೀತಿಯ ವರ್ತನೆಯಿಂ ದಲೇ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಕೋಮುವಾದ ಸೃಷ್ಠಿಯಾಗಿದ್ದು, ಇದನ್ನು ಖಂಡಿಸಿ ಬಂದ್ ನಡೆಯಲಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಬುಧವಾರವೇ ಬಂದ್ಗೆ ಚಿಂತನೆ ನಡೆಸಲಾಗಿತ್ತಾದರೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತು ರಾಜ್ಯದ ಬೇರೆ ಭಾಗದಲ್ಲಿ ಹಬ್ಬದ ವಾತಾವರಣ ಇರುವ ಕಾರಣದಿಂದ ಪ್ರತಿಭಟನೆ ಶುಕ್ರವಾರ ನಡೆಯಲಿದೆ ಎಂದು ಶರಣ್ ತಿಳಿಸಿದ್ದಾರೆ. ಶುಕ್ರವಾರ ತುರ್ತು ಅಗತ್ಯಗಳನ್ನು ಹೊರತು ಪಡಿಸಿ ವಾಹನ ಸಂಚಾರ ಸ್ಥಗಿತಗೊಳ್ಳುವುದಲ್ಲದೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.


