ಬಂಟ್ವಾಳ, ಜು. 27 : ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದು, ಸಮೀಪದ ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದಾರೆ. ಗ್ರಾಮದಲ್ಲಿನ ನಡೆದ ಸರಣಿ ಕಳ್ಳತನ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

ಇಡ್ಕಿದು ಗ್ರಾಮದ ನಿವಾಸಿ ಹಾಗೂ ನಿವೃತ್ತ ವೈದ್ಯರಾದ ಕೆ. ಸೂರ್ಯನಾರಾಯಣ (79) ಅವರು ಮನೆಯಲ್ಲಿ ಮಲಗಿದ್ದ ವೇಳೆ, ತಡರಾತ್ರಿ ಅಪರಿಚಿತರು ಮನೆಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ.ಶಬ್ದ ಕೇಳಿ ಎಚ್ಚರಗೊಂಡ ಸೂರ್ಯನಾರಾಯಣ ಅವರು ಮನೆಯೊಳಗೆ ಇಬ್ಬರು ಕಳ್ಳರು ಮನೆಗೆ ಪ್ರವೇಶಿಸಿರುವುದನ್ನು ಗಮನಿಸಿದ್ದಾರೆ. ಆರೋಪಿಗಳು ಅವರ ಹೊಟ್ಟೆಗೆ ಬಲವಾಗಿ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ಅಂದಾಜು 2.60 ರೂ. ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.
ಮನೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗೋಡೆಯಲ್ಲಿ ಬಿಟ್ಟಿದ್ದ ತೆರೆಯ ಮೂಲಕ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಮನೆಯ ಮೇಲಂತಸ್ತಿನಲ್ಲಿ ಮಲಗಿದ್ದ ಸೂರ್ಯನಾರಾಯಣ ಅವರ ಪುತ್ರ, ಸೊಸೆ ಹಾಗೂ ಮೊಮ್ಮಗನಿಗೆ ಈ ಘಟನೆ ಕುರಿತು ಯಾವುದೇ ಮಾಹಿತಿ ಇರಲಿಲ್ಲ.ಚಿನ್ನದ ಸರ ದರೋಡೆಗೂ ಮುನ್ನ ಅಥವಾ ನಂತರ, ಕಳ್ಳರು ಸಮೀಪದ ಮತ್ತೊಂದು ಮನೆಗೆ ತೆರಳಿ ಅಲ್ಲಿ ಇದ್ದ ದ್ವಿಚಕ್ರ ವಾಹನವನ್ನು ಕಳವು ಮಾಡಲು ಯತ್ನಿಸಿದ್ದಾರೆ.

ಆದರೆ ಅದರ ಲಾಕ್ ತೆರೆಯಲು ಸಾಧ್ಯವಾಗದೆ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.ಭಾನುವಾರ ಬೆಳಗ್ಗೆ ಇಡ್ಕಿದು ಗ್ರಾಮದ ಕೊಡಂಚರಪಾಲು ನಿವಾಸಿ ಆನಂದ ಸಾಫಲ್ಯ ಅವರಿಗೆ ಸೇರಿದ ಸುಮಾರು 30,000ರೂ. ಮೌಲ್ಯದ ದ್ವಿಚಕ್ರ ವಾಹನ ಮನೆಯ ಮುಂಭಾಗದ ಅಂಗಳದಿಂದ ಕಳವಾಗಿರುವುದು ಬೆಳಕಿಗೆ ಬಂದಿದೆ.ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳವು ಚಿನ್ನದ ಸರ ಕಳವಾದ ಮನೆಯಿಂದ ಸುಳಿವು ಹಿಡಿದು ಅಂಗಳ, ತೋಟದ ಮೂಲಕ ರಸ್ತೆವರೆಗೆ ತೆರಳಿ, ನಂತರ ಬೈಕ್ ಕಳವಾದ ಸ್ಥಳದ ಸಮೀಪದವರೆಗೂ ಸಾಗಿರುವುದಾಗಿ ತಿಳಿದುಬಂದಿದೆ.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ, ವಿಟ್ಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಬ್-ಇನ್ಸ್ಪೆಕ್ಟರ್ ರಾಮಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಎರಡೂ ಕೃತ್ಯಗಳನ್ನು ಒಂದೇ ಕಳ್ಳರ ತಂಡ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.






