ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಗೋಡೆಯ ಮೇಲಿನ ಹಣತೆಯ ಬೆಳಕಿನಲ್ಲಿ ಪ್ರತಿಭೆಗಳು ಹುಟ್ಟುವಂತೆ ಕಾಡಿನೊಳಗಿನ ಕತ್ತಲಿನಲ್ಲಿಯೂ ವಿಚಾರಗಳು ಹುಟ್ಟುತ್ತವೆ. ಪ್ರಶ್ನೆ ಅನುಮಾನಗಳು ಹುಟ್ಟುತ್ತವೆ. ಮಾನವ ಬೆಳಕಿನಲ್ಲಿರುವುದಕ್ಕಿಂತ ಹೆಚ್ಚಿನ ಜ್ಞಾನವನ್ನು ಕತ್ತಲೆಯಲ್ಲಿ ಮತ್ತು ಒಂಟಿಯಾಗಿರುವಾಗ ಪಡೆದುಕೊಳ್ಳುತ್ತಾನೆ. ಆದರೆ ನಮ್ಮ ತಲೆಯಲ್ಲಿ ಎಲ್ಲವೂ ನನಗೆ ತಿಳಿದಿದೆ ಎಂಬ ಅಹಂ ಭಾವನೆ ನಿಂತು ಬಿಟ್ಟರೆ ನಮ್ಮಿಂದ ಯಾವುದೇ ರೀತಿಯ ಕಲಿಕಾ ಆಸಕ್ತಿ ಮೂಡಲು ಸಾಧ್ಯವಿಲ್ಲ ಎಂದು ಸಾಹಿತಿ,ಅಂಕಣಕಾರ ನರೇಂದ್ರ ರೈ ದೇರ್ಲ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ತೇಜಸ್ವಿ ನೆನಪು ಮತ್ತು ಬಿತ್ತಿ ಪತ್ರಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬ್ರಿಟಿಷ್ ಕಂಪೆನಿಗಳ ಮೂಲಕ ಪ್ರಕಟವಾಗುತ್ತಿದ್ದ ಬಂಗಾಳ ಗೆಜೆಟ್ನಂತಹ ಪತ್ರಿಕೆಗಳು ಮೊದಲು ಗೋಡೆ ಬರಹದ ಮೂಲಕ ಬಿತ್ತರವಾಗುತ್ತಿತ್ತು. ನಂತರ ಅದು ಸಮಾಜವನ್ನು ಮುಟ್ಟಿದ್ದು. ಪತ್ರಿಕೆ ಎಲ್ಲಿ ಪ್ರಕಟವಾಗುತ್ತದೆ ಎಂಬುದು ಮುಖ್ಯವಲ್ಲ ಅದರಲ್ಲಿ ಯಾವ ರೀತಿಯಾದ ಮಾಹಿತಿ ಲಭ್ಯವಿದೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿ ಬಿತ್ತಿ ಪತ್ರಿಕೆಗೆ ಶುಭ ಹಾರೈಸಿದರು.
ಪೂರ್ಣಚಂದ್ರ ತೇಜಸ್ವಿ ಅವರ ಕುರಿತು ಮಾತನಾಡಿ ತೇಜಸ್ವಿಯವರು ಎಂದೂ ಕೂಡ ತಂದೆ ಕುವೆಂಪು ಅವರ ಹೆಸರಿನ ಮೇಲೆ ಪ್ರಸಿದ್ಧಿ ಗಿಟ್ಟಿಸಿಕೊಂಡವರಲ್ಲ. ಕುವೆಂಪು ಬೇಟೆಯ ದಾರಿ ಇಷ್ಟ ಪಡುತ್ತಿದ್ದರು. ಅದರ ಹಿಂಸೆಯನ್ನು ಅರ್ಥೈಸಿಕೊಳ್ಳುತ್ತಿದ್ದರು. ತೇಜಸ್ವಿ ಗ್ರಾಮ, ಹಳ್ಳಿ, ಕಾಡು, ಸುತ್ತಾಡಿ ಅನುಭವವನ್ನು ಪಡೆದು ಅವುಗಳ ಸಂಬಂಧದ ಕುರಿತಾಗಿ ಬರೆಯುತ್ತಿದ್ದರು. ತೇಜಸ್ವಿಯವರು ಅನುಭವನಿಷ್ಠ ಸಾಹಿತ್ಯ ರಚಿಸುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಾದ ಚೇತನಾ ಕುಂಬ್ಳೆ, ಸುಚಿತ್ರಾಕುಮಾರಿ, ಪ್ರವೀಣಾ, ಕಾಜಲ್, ದೊಡ್ಡಶಿವಕುಮಾರ್, ಶ್ಯಾಮ್ಪ್ರಸಾದ್, ರಂಗನಾಥ್, ಮಧು ಹೆಚ್.ಜಿ ಹಾಗೂ ಕವನ ವಾಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆÇ್ರ. ಶಿವರಾಮ್ ಶೆಟ್ಟಿ ಮಾತನಾಡಿ ಬಿತ್ತಿ ಪತ್ರಿಕೆ ಬೇರೆ ಬೇರೆ ರೀತಿಯಲ್ಲಿ ವಿದ್ಯಾರ್ಥಿಗಳಲ್ಲಿ, ಸಾಹಿತ್ಯಾಸಕ್ತರಲ್ಲಿ ಸಂಬಂಧವನ್ನು ಕಲ್ಪಿಸುತ್ತದೆ. ಸಂಪರ್ಕ ಸೇತುವೆಯಂತೆ ಕೆಲಸ ಮಾಡುವ ಬಿತ್ತಿ ಪತ್ರಿಕೆಯೂ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದರು.
ಬಿತ್ತಿಪತ್ರಿಕೆಯ ಸಂಪಾದಕಿ ಕೀರ್ತನಾ.ಬಿ ಪ್ರಾಸ್ತಾವನೆಗೈದರು. ಉಪಸಂಪಾದಕ ವಿಶ್ವನಾಥ ಕಾರ್ಯಕ್ರಮ ನಿವಸಿರ್ದಹಿಸಿದರು. ಶ್ಯಾಮ್ಪ್ರಸಾದ್ ವಂದಿಸಿದರು.


