ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಕುಂದಾಪುರ ಟು ತಲಪಾಡಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಆರಂಭವಾಗಿ ವರ್ಷಗಳು ಸಂದು ರಸ್ತೆ ಕಾಮಗಾರಿ ಪೂರ್ಣವಾಗದೆ, ಅದರ ಅವ್ಯವಸ್ಥೆಗೆ ಜೀವಗಳು ಮಾತ್ರ ಬಲಿಯಾಗುತ್ತಲೇ ಇವೆ. ಆದರೂ ಗಮನಹರಿಸಬೇಕಾದ ಜನಪ್ರತಿನಿಧಿಗಳು ಜನರ ಧ್ವನಿಗೆ ಪ್ರತಿಕ್ರಿಯಿಸದೆ ತಮ್ಮ ಪಾಲಿಗೆ ಮುಂದುವರಿಯುತ್ತಿರುವ ನಡೆ ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ.
ಮಂಗಳೂರಿನಿಂದ ತಲಪಾಡಿಯವರೆಗೂ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಅಗಲೀಕರಣ ಕಾಮಗಾರಿಯ ಟೆಂಡರ್ ಮೇ. 2008ರಲ್ಲಿ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಒಂದೇ ವರ್ಷ ಅಂದರೆ 2009ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಯಿತು. ಆದರೆ ಈವರೆಗೆ ಕಾಮಗಾರಿ ಪೂರ್ಣವಾಗದೆ ಸರಿಸುಮಾರು 7 ವರ್ಷಗಳು ಪೂರ್ಣವಾಗುತ್ತಾ ಬಂದಿದೆ. ಈ ನಡುವೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆ ಕಂಪೆನಿಗಳಿಂದ ಜನಪ್ರತಿನಿಧಿಗಳು ಕಮೀಷನ್ ಪಡೆದುಕೊಂಡು ಕಾಮಗಾರಿ ವಿಳಂಬವಾದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಅನ್ನುವ ಆರೋಪವೂ ಕೇಳಿಬಂದಿದೆ.
ಕುಂದಾಪುರದಿಂದ ತಲಪಾಡಿವರೆಗೆ ಹಲವೆಡೆ ಕಾಮಗಾರಿಗಳು ಪೂರ್ಣವಾಗಿದೆ. ಪಡುಬಿದ್ರಿ, ಮುಲ್ಕಿ, ಕುಳಾಯಿ, ನಂತೂರು, ಪಂಪ್ವೆಲ್, ಕಲ್ಲಾಪು, ತೊಕ್ಕೊಟ್ಟು, ಉಚ್ಚಿ¯, ತಲಪಾಡಿ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಯದೆ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿದೆ. ಕಾಮಗಾರಿ ಸಂದರ್ಭದಲ್ಲಿ ನೀಡುವ ಡೈವರ್ಷನ್ ಗಳು ದಿನದಲ್ಲಿ ಹಲವು ಜೀವಗಳನ್ನು ಬಲಿ ಪಡೆಯುತ್ತಲೇ ಇದೆ. ಕುಂದಾಪುರದಿಂದ ತಲಪಾಡಿವರೆಗೆ ಬಲಿಯಾದ ಜೀವಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ಆದರೆ ಸಾವಿನ ಹೊಣೆಯನ್ನು ಹೊರಬೇಕಾದ ಹೆದ್ದಾರಿ ಪ್ರಾಧಿಕಾರ ಕಾಮಗಾರಿಯನ್ನು ಇನ್ನಷ್ಟು ಮಂದಗತಿಯಲ್ಲಿ ನಡೆಸುತ್ತಿದ್ದರೆ, ಇಲಾಖೆಯನ್ನು ನಿರ್ವಹಿಸಬೇಕಾದ ಜನಪ್ರತಿನಿಧಿ ಕಣ್ಣಿದ್ದೂ ಕುರುಡನಂತಾಗಿದ್ದಾರೆ.
ತೊಕ್ಕೊಟ್ಟು ಫ್ಲೈಓವರಿಗಿಲ್ಲ ಮುಕ್ತಿ:
ಹೆದ್ದಾರಿ ಕಾಮಗಾರಿ ಆರಂಭವಾದ ಕೆಲವೇ ತಿಂಗಳುಗಳಲ್ಲಿ ತೊಕ್ಕೊಟ್ಟು ಫ್ಲೈಓವರಿಗೆ ಯೋಜನೆ ರೂಪಿಸಲಾಯಿತು. ಅದಕ್ಕಾಗಿ ದಿನದಲ್ಲಿ ಸಾವಿರಗಟ್ಟಲೆ ವಾಹನ ಸಂಚರಿಸುವ ಜಂಕ್ಷನ್ನಿನಲ್ಲಿ ಏಕಮುಖ ಸಂಚಾರವನ್ನು ಆರಂಭಿಸಲಾಯಿತು. ಮತ್ತೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸೆಟೆದು ನಿಂತ ಪಕ್ಷವೊಂದರ ಕಾರ್ಯಕರ್ತರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸುವಂತೆ ತಡೆಯೊಡ್ಡಿ ಮತ್ತೆ ಹೊಸ ಯೋಜನೆ ರೂಪಿಸುವಂತೆ ಒತ್ತಡ ಹೇರಿದ್ದರು. ಇದರಿಂದಾಗಿ ಮತ್ತೆ ಕೆಲ ವರ್ಷಗಳ ಕಾಲ ಕಾಮಗಾರಿ ಸ್ಥಗಿತಗೊಂಡು ವಾಹನಸವರರೂ ಸಂಕಷ್ಟಕ್ಕೀಡಾದರು. ಕೆಲ ತಿಂಗಳ ಹಿಂದೆ ಮತ್ತೆ ಕಾಮಗಾರಿ ಆರಂಭಗೊಂಡರೂ ಮುಕ್ತಿ ಇನ್ನೂ ದೊರೆತಿಲ್ಲ. ಇದರಿಂದಾಗಿ ಗಂಟೆಗಟ್ಟಲೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ, ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಸಮಯಕ್ಕೆ ಸರಿಯಾಗ ಕಾರ್ಯಕ್ಷೇತ್ರಕ್ಕೆ ತಲುಪಬೇಕಾದವರು ತಲುಪದೆ ತೊಂದರೆಗೀಡಾಗುತ್ತಿರುವುದು ಸಾಮಾನ್ಯವಾಗಿದೆ. ಆಂಬ್ಯುಲೆನ್ಸ್ ವಾಹನಗಳು ಸಂಚಾರದಲ್ಲಿ ಅಡ್ಡಿಯುಂಟಾಗಿ ರೋಗಿಗಳು ಸಾವನ್ನಪ್ಪಿರುವ ಉದಾಹರಣೆಗಳು ಗಂಭೀರ ವಿಷಯವಾದರೆ, ವಿಮಾನ, ರೈಲನ್ನೇರುವ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಸ್ಟೇಷನ್ ಅಥವಾ ವಿಮಾನ ನಿಲ್ದಾಣ ತಲುಪಲು ಸಾಧ್ಯವಾಗದೆ ಬಾಕಿಯಾದ ಉದಾಹರಣೆಗಳು ಅನೇಕ ಇದೆ. ನೇತ್ರಾವತಿ ಸೇತುವೆ ಕಾಮಗಾರಿ ವೇಳೆ ಇಂತಹದ್ದೇ ಘಟನೆಗಳು ನಡೆಯುತ್ತಿತ್ತು, ಇದೀಗ ನೂತನ ಸೇತುವೆ ಉದ್ಘಾಟನೆಗೊಂಡಾಗಿನಿಂದ ಸಮಸ್ಯೆ ಈಡೇರಿದ್ದರೆ, ಮತ್ತೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ದೇರಳಕಟ್ಟೆ, ಕೇರಳ, ಉಳ್ಳಾಲ, ಕೋಟೆಕಾರು ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ.
ಪಾದಚಾರಿಗಳಿಗೂ ತೊಂದರೆ:
ತೊಕ್ಕೊಟ್ಟುನಿಂದ ತಲಪಾಡಿಯ ಮಧ್ಯೆ ಭಾಗದಲ್ಲಿ ಅಂದರೆ ಬೀರಿ ಜಂಕ್ಷನ್ ನಲ್ಲಿ ಇದೀಗ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಇಲ್ಲಿ ರಸ್ತೆ ದಾಟಲು ಸರಿಯಾದ ವ್ಯವಸ್ಥೆಗಳಿಲ್ಲದೆ ಜನರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ. ಬೆಳಿಗ್ಗೆ ಕೆಲಸ ನಿಮಿತ್ತ ತೆರಳುವ ಮಾಡೂರು, ಮಡ್ಯಾರ್, ಕೋಟೆಕಾರ್, ಹಾಗೂ ಸ್ಥಳೀಯ ನಿವಾಸಿಗಳು ಈ ಜಂಕ್ಷನ್ಗೆ ಬರಬೇಕಾಗಿದ್ದು ಪ್ರತಿ ದಿನ ನೂರಾರು ಜನರು ಇಲ್ಲಿ ಸಂಚರಿಸಿರುತ್ತಾರೆ. ಇನ್ನು ದೇರಳಕಟ್ಟೆಯಿಂದ ಮಡ್ಯಾರು, ಮಾಡೂರು ಕಡೆಗೆ ಹೋಗುವ ಬಸ್ ಹಾಗೂ ಇತರ ವಾಹನಗಳು ಇದೇ ರಸ್ತೆಯನ್ನು ಸಂಪರ್ಕಿಸುವುದರಿಂದ ಮೂರು ಕಡೆಗಳಲ್ಲಿ ವಾಹನಗಳು ಬರುವ ಸಂದರ್ಭ ಜನರು ರಸ್ತೆ ದಾಟಲು ಪೇಚಾಗಿ ಹೋಗುತ್ತಿದ್ದಾರೆ. ತೊಕ್ಕೊಟ್ಟು ಜಂಕ್ಷನ್ನಿನಲ್ಲಿಯೂ ಇದೆ ಸ್ಥಿತಿಯಾಗಿದೆ.
ಒಂದು ಕಡೆಯಲ್ಲಿ ಕಾಮಗಾರಿ ಇನ್ನೊಂದು ಕಡೆಯಲ್ಲಿ ಕಾಸರಗೋಡಿನಿಂದ ಮಂಗಳೂರಿಗೆ ವಿಮಾನದಂತೆ ಸಾಗುವ ಕೆಎಸ್ಎರ್ಟಿಸಿ ಬಸ್ಸುಗಳು, ಕಾಮಗಾರಿ ನಡೆಯುತ್ತಿದೆ ಎಂದು ತಿಳಿದರೂ ಸಹ ಅದಕ್ಕೆ ಕ್ಯಾರೆ ಅನ್ನದೇ ತಮಗೆ ಇಷ್ಟ ಬಂದಂತೆ ಸಾಗುವ ವಾಹನ ಸವಾರರಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲುವುದೆಂದರೆ ಭಯವಾಗುತ್ತದೆ ಅನ್ನೋದು ಅನೇಕ ಜನರ ಮಾತು. ಇನ್ನು ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಶಾಲೆಗಳಿರುವುದರಿಂದ ಮಕ್ಕಳಿಗೂ ಕೂಡ ಈ ರಸ್ತೆಯನ್ನು ದಾಟಲು ಕಷ್ಟವಾಗುತ್ತಿದೆ. ರಸ್ತೆ ದಾಟುವ ವೇಳೆ ಅನೇಕ ಅಪಘಾತಗಳು ನಡೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಪರಿಹಾರವನ್ನು ನೀಡಬೇಕೆಂಬುದು ಇಲ್ಲಿನ ಜನರ ಅಭಿಪ್ರಾಯ.
ಈ ಪ್ರದೇಶದಲ್ಲಿ ಇದುವರೆಗೆ ಯಾವುದೇ ರೀತಿಯಾದ ಬ್ರಾರಿಗೇಡ್ ಆಗಲಿ ಟ್ರಾಫಿಕ್ ಪೊಲೀಸರನ್ನಾಗಲಿ ಆಯೋಜಿಸಿಲ್ಲ. ಬೆಳಿಗ್ಗಿನ ಹಾಗೂ ಸಂಜೆಯ ಹೊತ್ತಿನಲ್ಲಿ ಈ ಪ್ರದೇಶದಲ್ಲಿ ರಸ್ತೆ ದಾಟುವುದೆ ಜಬರಿಗೆ ವಿರ್ಪಯಾಸವಾಗಿದೆ. ಶಾಲಾ ಮಕ್ಕಳ ಹಾಗೂ ಪಾದಾಚಾರಿಗಳ ಹಿತ ರಕ್ಷಣೆಗಾಗಿ ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಈ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರ ಅಗತ್ಯವಿದೆ.
ವಜ್ರ ಗುಜರನ್ ಮಾಡೂರು






