ಮಂಗಳೂರು, ಏ. 15 ; ಜೆಪ್ಪು ಮಹಾಕಾಳಿಪಡ್ಪು ಬಳಿ ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಬಾಲಕ ವಿದ್ಯುತ್ ತಂತಿ ತಗುಲಿದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ.

ಮೂಲತಃ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಪ್ರಸಕ್ತ ಜೆಪ್ಪು ಮಹಾಕಾಳಿಪಡ್ಪುನಿರ್ಮಲ ನಗರದಲ್ಲಿ ವಾಸವಾಗಿದ್ದ ಕಣ್ಣನ ಗೌಡ ಎಂಬವರ ಪುತ್ರ ವರುಣ್ (15) ಮೃತಪಟ್ಟ ಬಾಲಕ.
ಎ.11ರಂದು ಮಹಾಕಾಳಿಪಡ್ಪುಅಂಡರ್ಪಾಸ್ ಬಳಿಯ ಭಜನಾಮಂದಿರದ ಸಮೀಪ ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಮಂದಿರದ ಛಾವಣಿ ಬಿದ್ದ ಬಾಲ್ ಹೆಕ್ಕಲು ಹೋದಾಗ ವಿದ್ಯುತ್ ತಂತಿ ತಗುಲಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ. ವಾರದ ಹಿಂದೆಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ವರುಣ್ ಫಲಿತಾಂಶದ ನಿರೀಕ್ಷೆಯಲ್ಲಿದ್ದ. ತಂದೆ ಕಣ್ಣನ ಗೌಡ ಮಹಾಕಾಳಿಪಡ್ಪುವಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಬಾಲಕನ ಮನೆಗೆ ಭೇಟಿ ನೀಡಿದ್ದು, ಹೆತ್ತವರಿಗೆ ಸಾಂತ್ವನ ಹೇಳಿ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

