
ಉಳ್ಳಾಲ: ಕೃಷಿಕ ಸಮುದಾಯದ ಅಭಿವೃದ್ಧಿ, ಪ್ರವಾಸಿ ತಾಣ ರೂಪಿಸುವ ಉದ್ದೇಶ ಮತ್ತು ರೈತರ ಸಾಧನೆಯನ್ನು ಗುರುತಿಸುವ ದೃಷ್ಟಿಯಿಂದ ಮುಡಿಪು ಉತ್ಸವ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಕೃಷಿಕರಿಗೆ ಗೌರವಾಭಿವಂದನೆ, ಕೃಷಿ ಸಾಧನಾ ಪ್ರಶಸ್ತಿ ವಿತರಣೆ, ಹಾಗೂ ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜದಲ್ಲಿ ಉತ್ತಮ ಅಭಿಪ್ರಾಯ ಮೂಡಿಸುವ ಕಾರ್ಯ ನಡೆಯಲಿದೆ ಎಂದು ಮುಡಿಪು ಉತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಲ| ದೇವದಾಸ್ ಭಂಡಾರಿ ಅಭಿಪ್ರಾಯಪಟ್ಟರು.
ಮುಡಿಪು ಉತ್ಸವ ಸಮಿತಿ, ಯು.ಟಿ.ಫರೀದ್ ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್ ಹಾಗೂ ಕೃಷಿಕ ಸಮಾಜ ಉಳ್ಳಾಲ ತಾಲೂಕು ಇದರ ಜಂಟಿ ಆಶ್ರಯದಲ್ಲಿ ಎ.24,25,26 ಮೂರು ದಿನಗಳ ಕಾಲ ಮುಡಿಪು ಶ್ರೀ ಕೃಷ್ಣ ಧ್ಯಾನ ಮಂದಿರದಲ್ಲಿ ಜರಗಲಿರುವ ಮುಡಿಪು ಉತ್ಸವ 2026 ರ ಇದರ ಮುಡಿಪು ಆಡಿಟೋರಿಯಂನಲ್ಲಿ ಜರಗಿದ ಎರಡನೇ ಸುತ್ತಿನ ಸಿದ್ಧತಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಕೃಷಿಕ ಸಮಾಜ ಉಳ್ಳಾಲ ಇವರ ಸಹಯೋಗದಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮದಲ್ಲಿ ಮುಡಿಪು ಧ್ಯಾನ ಮಂದಿರವನ್ನು ಸ್ಥಾಪಿಸಿದ ಹಿರಿಯ ಮದನ್ ಮೋಹನ್ ನಾಯಕ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷರು ಸೇರಿದಂತೆ ಸ್ಥಳೀಯರೆಲ್ಲರೂ ಕೂಡಿಕೊಂಡು ನಿರ್ಧರಿಸುವ ಜೊತೆಗೆ ಕೃಷಿಕರಿಗೆ ಹೆಚ್ಚಿನ ಒತ್ತು, ಗೌರವ ನೀಡುವ ಸಲುವಾಗಿ ಕೃಷಿ ಸಂಬಂಧಿತ ಆಹಾರ ಪದಾರ್ಥಗಳ ಸ್ಟಾಲ್ ಇರಿಸುವ ಮುಖೇನ ಮುಡಿಪು ಸೇರಿದಂತೆ ನೆರೆಯ ಊರು, ಇಡೀ ಉಳ್ಳಾಲ ತಾಲೂಕಿನ ಜನತೆಗೆ ಉತ್ಸವವನ್ನು ಅನುಭವಿಸುವ ಸನ್ನಿವೇಶ ನಿರ್ಮಾಣವಾಗಲಿದೆ. ಎಲ್ಲರ ಸಹಕಾರ ಅಗತ್ಯ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಮಾತನಾಡಿ ಮಹೋತ್ಸವವು ಕೃಷಿಕರಿಂದ ಕೃಷಿಕರಿಗಾಗಿಯೇ ರೂಪುಗೊಂಡಿದ್ದು, ಗ್ರಾಮೀಣ ಅಭಿವೃದ್ಧಿ, ಕೃಷಿ ಜ್ಞಾನ ವಿನಿಮಯ ಹಾಗೂ ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ ಹೇಳಿದರು.
ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಅಮ್ಮೆಂಬಳ ಸಹಕಾರಿ ಸಂಘದ ಅಧ್ಯಕ್ಷ , , ರಮೇಶ್ ಶೆಟ್ಟಿ ಬೋಳಿಯಾರ್, ಉದ್ಯಮಿಗಳಾದ ರಮೇಶ್ ಶೇಣವ, ಕೋಶಾಧಿಕಾರಿ ರಾಧಾಕೃಷ್ಣ ರೈ ಉಮಿಯ , ಜಯರಾಮ ಶೆಟ್ಟಿ ಕಂಬಳಪದವು, ಶಂಕರ್ ಭಟ್ ದೋಸೆಮನೆ, ಇಬ್ರಾಹಿಂ ನಡುಪದವು, ಅಬ್ದುಲ್ ಜಲೀಲ್ ಮೊಂಟುಗೋಳಿ, ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಕಷಿಕ ಸಮಾಜದ ಕಾರ್ಯದರ್ಶಿ ಜೋಸೆಫ್ ಕುಟಿನ್ಹಾ, ಕೈರಂಗಳ ಕೃಷಿ ಪಟ್ಟಣ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾವತಿ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯದರ್ಶಿ ಹೈದರ್ ಕೈರಂಗಳ, ಸಂಯೋಜಕರುಗಳಾದ ಅಜಿತ್ ಪೂಜಾರಿ, ರೈತ ಕುಡ್ಲ ಪ್ರತಿಷ್ಠಾನದ ಭರತ್ರಾಜ್ ಸೊರಕೆ, ಸಾಂಸ್ಕೃತಿಕ ಸಮಿತಿ ಸಂಚಾಲಕ ಚಂದ್ರಹಾಸ್ ಕಣಂತೂರು, ಡಾ. ಸುರೇಖಾ ಭಾಗಿಯಾಗಿದ್ದರು.
ವರ್ಚುವಲ್ ಮೂಲಕ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ʻಉತ್ಸವ ಯಶಸ್ವಿಯಾಗಿ ನಡೆಯಲಿದೆ . ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿರುವುದು ಸಂತಸ ತಂದಿದೆ. ಎಲ್ಲ ವರ್ಗದ ಜನರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಉತ್ಸವದ ಯಶಸ್ಸಿಗೆ ಪ್ರಮುಖ ಕಾರಣವಾಗಲಿದೆ. ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಿರುವುದರಿಂದ ಕಾರ್ಯಕ್ರಮವು ಇನ್ನಷ್ಟು ವೈಭವದಿಂದ ಹಾಗೂ ಯಶಸ್ವಿಯಾಗಿ ನಡೆಯಲಿದೆ ಎಂಬ ನಂಬಿಕೆಯಿದೆ. ಉತ್ಸವವನ್ನು ಎಲ್ಲರೂ ಸಹಕಾರದೊಂದಿಗೆ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.
ʻವಿಚಾರಸಂಕಿರಣಗಳು ಕೃಷಿ ಸ್ಟಾಲ್ ಗಳುʼ
ಮಹೋತ್ಸವದಲ್ಲಿ ಕೃಷಿ ಮೇಳ, ಕೃಷಿ ಯಂತ್ರೋಪಕರಣ ಪ್ರದರ್ಶನ, ತಜ್ಞ ರೈತರು ಹಾಗೂ ವಿಜ್ಞಾನಿಗಳಿಂದ 25 ವಿಚಾರಸಂಕಿರಣಗಳು, ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ಕುರಿತು ವಿಶೇಷ ಚರ್ಚೆಗಳು ನಡೆಯಲಿವೆ. ಜೊತೆಗೆ ತೋಟಗಾರಿಕೆ ಬೆಳೆ, ಎಲೆ ಚುಕ್ಕೆ ರೋಗಗಳ ಮಾಹಿತಿ, ಗೇರು ಹಣ್ಣಿನ ಸಂಸ್ಕರಣೆ, ಜೇನು ಸಾಕಾಣಿಕೆ ಕುರಿತು ಮಾಹಿತಿ ನೀಡಲಾಗುತ್ತದೆ. ಆಹಾರ ಮೇಳ, ಕೃಷಿ ಮೇಳ, ಕರು ಮೇಳ, ಬೃಹತ್ ಆರೋಗ್ಯ ತಪಾಸಣಾ ಶಿಬಿರ ವಿಚಾರ ಸಂಕಿರಣ, ಸಾಂಸ್ಕೃತಿಕ ಉತ್ಸವ, ಗುಡ್ಡಗಾಡು ಓಟ, ಗಾಳಿಪಟ ಪ್ರದರ್ಶನ, ಅಭಿನಂದನಾ ಸಮಾರಂಭಗಳು ಮೂರು ದಿನಗಳ ಕಾಲ ಜರಗಲಿದೆ.
ಅಜಿತ್ ಪೂಜಾರಿ
ʻಆಟ, ನಾಟಕ, ಸ್ವಚ್ಛತಾ ಜಾಥಾʼ
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿವಿಧ ಸ್ಪರ್ಧೆಗಳು, ಚಿತ್ರಕಲೆ ಪ್ರದರ್ಶನ, ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆ, ಕಿಶೋರ್ ಡಿ. ಶೆಟ್ಟಿ ತಂಡದಿಂದ ತುಳು ಹಾಸ್ಯನಾಟಕ ಆಂಟಿ ಅಂಕಲ್ , ಎರಡನೇ ದಿನ ಮುಸ್ಲಿಂ ದಫ್ಫ್, ಕ್ರೈಸ್ತ ಸಮುದಾಯದ ದೃಶ್ಯ ರೂಪಕ, ಗಾಳಿಪಟ ಸ್ಪರ್ಧೆ, ವಿಧೂಷಿ ರೇಶ್ಮಾ ತಂಡದಿಂದ ನೃತ್ಯ, ಕೊಳಲು ವಾದನ, ರಮೇಶ್ ಚಂದ್ರರಿಂದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಪ್ರಚಾರಾರ್ಥವಾಗಿ ಅದರ ಜೊತೆಗೆ “ಗುಡ್ಡಕಾಡು ಓಟ”, ಸ್ವಚ್ಛತಾ ಜಾಥಾ, ಲೋಗೋ ಬಿಡುಗಡೆ ಸೇರಿದಂತೆ ಹಲವು ಜನಜಾಗೃತಿ ಕಾರ್ಯಕ್ರಮಗಳೂ ಹಮ್ಮಿಕೊಳ್ಳಲಾಗಿದೆ.
ಚಂದ್ರಹಾಸ್ ಕಣಂತೂರು
ʻಕೃಷಿ ಉತ್ತೇಜಿಸುವ, ಆಹಾರ ಖಾದ್ಯಗಳ ಸ್ಟಾಲ್ʼ
“ಕೃಷಿ ಪೂರಕ ಸ್ಟಾಲ್ಗಳು ಹಾಗೂ ವಿವಿಧ ಆಹಾರ ಖಾದ್ಯಗಳ ಸ್ಟಾಲ್ಗಳನ್ನು ಸೇರಿಸಿ ಒಟ್ಟು 100 ಸ್ಟಾಲ್ಗಳನ್ನು ಏರ್ಪಾಡು ಮಾಡಲಾಗಿದೆ. ಕರಕುಶಲ ಕಾರ್ಯಗಳಲ್ಲಿ ತೊಡಗಿರುವ 3 ದಿನಗಳ ಕಾಲ ಉಚಿತ ಸ್ಟಾಲ್ ವ್ಯವಸ್ಥೆ ಮಾಡಲಾಗಿದೆ. ಗೇರು ಹಣ್ಣಿನ ಜ್ಯೂಸ್ ಮಾರಾಟಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಹಾಗೂ ಮಹಿಳೆಯರಿಗೆ ಸ್ಟಾಲ್ಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ.
ಭರತ್ರಾಜ್ ಸೊರಕೆ
ಕುಡ್ಲ ರೈತ ಪ್ರತಿಷ್ಠಾನ
ʻಸಾರಿ ವಾಕ್ , ಮೆಹೆಂದಿ ಸ್ಪರ್ಧೆʼ
ಮುಡಿಪು ಉತ್ಸವದ ಉದ್ಘಾಟನಾ ದಿನದಂದು ಮಹಿಳೆಯರಿಗಾಗಿ ವಿಶೇಷವಾಗಿ ‘ಸೀರೆ ವಾಕ್’ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಸಂಪ್ರದಾಯದ ಸೌಂದರ್ಯ, ಶೈಲಿ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸಲು ಇದು ಒಂದು ಅಪೂರ್ವ ವೇದಿಕೆಯಾಗಲಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.
ಇದೇ ದಿನ ಉತ್ಸವದ ಅಂಗವಾಗಿ ‘ಮೆಹೆಂದಿ’ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಮಹಿಳೆಯರು ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಪಡೆಯುತ್ತಾರೆ. ಎಲ್ಲಾ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿ.
ಮಮತಾ ಡಿ ಎಸ್ ಗಟ್ಟಿ
ಉತ್ಸವ ಸಮಿತಿ
ಮಹಿಳಾ ಅಧ್ಯಕ್ಷರು


