ದೇರಳಕಟ್ಟೆ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ನಾಟೆಕಲ್ ಶಾಖೆಯಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಆನಂದ್ ಕೆ, ಎಸ್. ಜಯಪ್ರಸಾದ್, ಅಬ್ಬಾಸ್ ಎಮ್, ಮಹಮ್ಮದ್ ಎ. ಎಸ್ ಹಾಗೂ ಶ್ರೀಮತಿ ಮಾಲತಿ ಕೆ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.

ಸಂಘದ ಸದಸ್ಯರಾದ ಆನಂದ್ ಕೆ ರವರು ಮಾತನಾಡಿ “ಯಾವುದೇ ಒಂದು ಸಂಘವು ಬೆಳೆಯಬೇಕಾದರೆ ಎರಡು ಅಂಶಗಳು ಮುಖ್ಯವಾಗಿರುತ್ತದೆ. ಒಂದು ಸಂಸ್ಥೆಯನ್ನು ಮುನ್ನಡೆಸುವ ವ್ಯಕ್ತಿಯ ಆತ್ಮಸ್ಥೈರ್ಯ, ಇನ್ನೊಂದು ಅವರಿಗಿರುವ ವ್ಯಕ್ತಿತ್ವ. ಇವೆರಡು ನಮ್ಮ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರಲ್ಲಿ ಕಾಣಸಿಗಬಹುದು ಎಂದು ಶ್ಲಾಘಿಸಿದರು. ಮುಖ್ಯವಾಗಿ ಇವರು ಸಂಘದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿರುತ್ತಾರೆ. ಹೀಗಾಗಿ ಸಂಘವು ನೀಡುತ್ತಿರುವ ಗುಣಮಟ್ಟದ ಸೇವೆಯೇ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣ” ಎಂದರು.
ಸಂಘದ ಸದಸ್ಯರಾದ ಅಬ್ಬಾಸ್ ಎಮ್ ರವರು ಮಾತನಾಡಿ “ಮಂಜನಾಡಿ ಗ್ರಾಮ ಪಂಚಾಯತ್ನ ಕಟ್ಟಡದಲ್ಲಿ ಪ್ರಾರಂಭಿಸಿದ ಈ ಶಾಖೆಯು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, “ಸಂಘದ ನಾಟೆಕಲ್ ಶಾಖೆಯು ಆರನೇ ವರ್ಷದ ಸಂಭ್ರಮದೊಂದಿಗೆ ಮುನ್ನಡೆಯುತ್ತಿದೆ. ಈ ಭಾಗದಲ್ಲಿ ಶಾಖೆ ಮಾಡಲು ತುಂಬಾ ಜನ ಸಹಕಾರ ನೀಡಿದ್ದಾರೆ. ನಾಟೆಕಲ್ ಶಾಖೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಪ್ರತಿ ಗ್ರಾಂ ಗೆ ರೂ. 10,5೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲಗಳನ್ನು ನೀಡುತ್ತಿದ್ದೇವೆ. ಸಂಘದ ಎಲ್ಲಾ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೇವೆಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ಗ್ರಾಹಕರ ಮನೆ ಬಾಗಿಲಗೆ ಹೋಗಿ ಸೇವೆಯನ್ನು ನೀಡುತ್ತಿದ್ದೇವೆ. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಜನರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರವನ್ನು ಸಹ ಸತತವಾಗಿ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಒಳ್ಳೆಯ ಅಂಕ ಬಂದಾಗ ವಿದ್ಯಾರ್ಥಿ ವೇತನ ನೀಡಿ ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸಂಘದಲ್ಲಿ ಲಭ್ಯವಿರುವ ಪ್ರತಿಯೊಂದು ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಸಂಘದ ನಾಟೆಕಲ್ ಶಾಖೆಯ ಸಿಬ್ಬಂದಿಯಾದ ಕುಮಾರಿ ಪವಿತ್ರಾರವರು ಸ್ವಾಗತಿಸಿ , ಕುಮಾರಿ ನಿಶ್ಮಿತಾ ವಂದಿಸಿದರು. ಶಾಖಾಧಿಕಾರಿ ಶ್ರೀಮತಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.


