ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಇನೋಳಿ: ಇತ್ತೀಚೆಗೆ ಬ್ರಹ್ಮಕಲಶ ಆದ ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ನುಗ್ಗಿರುವ ಕಳ್ಳರು ದೇವರ ಉತ್ಸವ ಮೂರ್ತಿ, ಕಾಣಿಕೆ ಡಬ್ಬಿ, ಸಿ.ಸಿ.ಟಿವಿಯನ್ನು ಕಳವುಗೈದಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಅರ್ಚಕರು ಪೂಜೆಗೆಂದು ದೇವಸ್ಥಾನಕ್ಕೆ ಬಂದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಊರಿನ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ.
ಮಂಗಳವಾರ ತಡರಾತ್ರಿ ವೇಳೆ ಮುಂದಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ರೂ.1 ಲಕ್ಷ ಬೆಲೆಯುಳ್ಳ ಪಂಚಲೋಹದ ಮೂರ್ತಿಯನ್ನು ಕಳವುಗೈದಿದ್ದಾರೆ. ಅಲ್ಲದೆ ದೇವಸ್ಥಾನದ ಒಳಗೆ ಇರಿಸಲಾದ ಕಾಣಿಕೆಡಬ್ಬಿಯನ್ನು ಕಳವುಗೈದಿರುವ ತಂಡ ಹೊರಹೋಗುವ ಸಂದರ್ಭ ಕೃತ್ಯದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ಶಂಕೆಯಿಂದ ಅದರಲ್ಲಿದ್ದ ದಾಖಲೆ ಸಹಿತ ಸಿಸಿಟಿವಿಯನ್ನು ಸಹ ಕಳವುಗೈದಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕರೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಪಾಳುಬಿದ್ದಿದ್ದ ದೇವಸ್ಥಾನವನ್ನು ಊರ-ಪರವೂರ ಗ್ರಾಮಸ್ಥರ ಸಹಕಾರದೊಂದಿಗೆ ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಅದರ ಬೆನ್ನಲ್ಲೇ ಇಂತಹದ್ದೊಂದು ದುಷ್ಕøತ್ಯ ನಡೆಸಿರುವುದು ಗ್ರಾಮಸ್ಥರನ್ನು ಕೆರಳಿಸಿದೆ.






