ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಂಬ್ಲಮೊಗರು : ಬಸ್ಸಿನಲ್ಲಿ ಮುಂಬದಿಯ ಸೀಟಿನಲ್ಲಿ ಮಹಿಳೆಯರ ಜತೆಗೆ ಕುಳಿತಿರುವ ಮೂವರನ್ನು ಆಕ್ಷೇಪಿಸಿದ ಪ್ರಯಾಣಿಕನಿಗೆ ತಂಡವೊಂದು ಶನಿವಾರ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಉಳ್ಳಾಲ ಪೊಲೀಸರು ಬಸ್ ನಿರ್ವಾಹಕನನ್ನು ವಶಕ್ಕೆ ಪಡೆದುಕೊಂಡ ಹಿನ್ನೆಲೆಯಲ್ಲಿ ಮಂಗಳೂರು-ಎಲಿಯಾರುಪದವು ನಡುವೆ ಸಂಚರಿಸುವ ಬಸ್ ಸಿಬ್ಬಂದಿ ಕರ್ತವ್ಯ ನಡೆಸದೆ ಬಸ್ ಬಂದ್ ನಡೆಸಿದ ಪರಿಣಾಮ ಪ್ರಯಾಣಿಕರು ಪರದಾಡಬೇಕಾಯಿತು.
ಆ.21 ರಂದು ಬೆಳಿಗ್ಗೆ ಎಲಿಯಾರುಪದವಿನಿಂದ ಮಂಗಳೂರಿಗೆ ಹೋಗುತ್ತಿದ್ದ `ಬಾಯಾರ್’ ಹೆಸರಿನ ಬಸ್ಸಿನಲ್ಲಿ ಚಾಲಕನ ಬದಿಯಲ್ಲಿರುವ ಉದ್ದದ ಸೀಟಿನಲ್ಲಿ ಮೂವರು ಬಸ್ ಸಿಬ್ಬಂದಿಯ ತಂಡ ಕುಳಿತಿತ್ತು. ಅದೇ ಸೀಟಿನಲ್ಲಿ ಎರಡು ಮಹಿಳೆಯರು ಇದ್ದರು. ಮೂವರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆಂದು ಅಂಬ್ಲಮೊಗರು ತಮ್ಮಣಕಟ್ಟೆ ನಿವಾಸಿ ನವೀನ್ ಕುಮಾರ್ ಎಂಬವರು ಅದೇ ಬಸ್ಸಿನ ನಿರ್ವಾಹಕನಲ್ಲಿ ವಿಷಯ ತಿಳಿಸಿದ್ದರು. ಅದರಂತೆ ನಿರ್ವಾಹಕ ಮೂವರನ್ನು ಎಬ್ಬಿಸಿ ಬಸ್ಸಿನ ಹಿಂಬದಿಗೆ ಕಳುಹಿಸಿದ್ದಾರೆ. ಇದರಿಂದ ನವೀನ್ ವಿರುದ್ಧ ಧ್ವೇಷ ಇಟ್ಟುಕೊಂಡ ತಂಡ ಶನಿವಾರದಂದು ದೇಸೋಡಿ ಎಂಬಲ್ಲಿ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನವೀನ್ ಅವರಿಗೆ ಅಂಬ್ಲಮೊಗರು ನಿವಾಸಿಗಳಾದ ಇಮ್ರಾನ್, ಅನ್ಸಾರ್, ಶರೀಫ್, ರಿಝ್ವಾನ್, ಅಮೀರ್ ಎಂಬವರು ಸೇರಿಕೊಂಡು ಕೈ ಹಾಗೂ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಅವರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಎಲಿಯಾರುಪದವು ಕಡೆಗೆ ಬರುತ್ತಿದ್ದ `ಅಶ್ವಿನಿ’ ಹೆಸರಿನ ಖಾಸಗಿ ಬಸ್ಸಿನ ನಿರ್ವಾಹಕ ಅನ್ಸಾರ್ ಮತ್ತು ಚಾಲಕ ಜುನೈದ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕರ್ತವ್ಯದಲ್ಲಿರುವಾಗಲೇ ಪೊಲೀಸರು ಬಸ್ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದು ಖಂಡನೀಯ. ಹಾಗೂ ಪೊಲೀಸರ ಈ ಕ್ರಮವನ್ನು ಖಂಡಿಸಿ ಬಸ್ ಸಿಬ್ಬಂದಿ ಬಸ್ ಬಂದ್ ನಡೆಸಿ ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಕಾಲೇಜು, ಶಾಲೆ ಹಾಗೂ ಕರ್ತವ್ಯಕ್ಕೆ ತೆರಳುವ ವಿದ್ಯಾರ್ಥಿಗಳು ಪರದಾಡಬೇಕಾಯಿತು. ಬಸ್ ಬಂದ್ ನಡೆಸಿ ಒಂದು ಗಂಟೆಯಾದರೂ ಸಂಬಂಧಪಟ್ಟ ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

















