
ದೇರಳಕಟ್ಟೆ : ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದು, ಶಿಕ್ಷಣಕಾಶಿಯನ್ನೇ ನಿರ್ಮಿಸಿದ ಜಸ್ಟೀಸ್ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಜಾಗತಿಕವಾಗಿ ಉತ್ತಮ ಉನ್ನತ ಶಿಕ್ಷಣಕ್ಷೇತ್ರಗಳಿಗೆ ಉದಾಹರಣೆಯಾಗಿ ನೆಲೆಯೂರಿದೆ. ಆರ್ಥಿಕ ಕ್ಷೇತ್ರದ ಕಾನೂನು ತಜ್ಞರಾಗಿ, ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಸ್ಥಾಪಕರ ಸಮಾಜವನ್ನು ಉನ್ನತ ಶಿಕ್ಷಣದಲ್ಲಿ ಶಿಕ್ಷಿತರನ್ನಾಗಿಸುವ ಕನಸುಗಳು ನನಸಾಗಿದೆ
ಎಂದು ವಿದ್ಯುತ್ ಮತ್ತು ಹೊಸ, ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋನಾಯಕ್ ಹೇಳಿದರು.
ಅವರು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವಿದ್ಯಾನಿಲಯದ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇದೀಗ ನಿಟ್ಟೆ ಎಜ್ಯುಕಜೇಷನ್ ಟ್ರಸ್ಟ್ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಗಳನ್ನು ಸ್ಥಾಪಿಸಿ 25,000 ವಿದ್ಯಾರ್ಥಿಗಳು, 4,500 ಸಿಬ್ಬಂದಿ ಸೇರಿದಂತೆ ಲಕ್ಷಾಂತರ ಹಳೇ ವಿದ್ಯಾರ್ಥಿಗಳನ್ನು ಹೊಂದಿದೆ.ಈ ಮೂಲಕ ದೇಶಕ್ಕೆ ಲಾಭದಾಯಕವಾದ ಸಂಸ್ಥೆಯಾಗಿ ಬೆಳದುನಿಂತಿದೆ. ಆಲದ ಮರದಂತೆ ಆರೋಗ್ಯದಂತಹ ನೆರಳನ್ನು ಜನರಿಗೆ ನೀಡಿ ಬೆಳೆಯುತ್ತಾ ಆಧುನಿಕವಾಗಿ ತಂತ್ರಜ್ಞಾನಗಳ ಚಿಕಿತ್ಸೆಗಳನ್ನು ಗ್ರಾಮಾಂತರ ಭಾಗದ ರೋಗಿಗಳಿಗೂ ಕಡಿಮೆ ದರದಲ್ಲಿ ಒದಗಿಸುವಂತಹ ಕಾರ್ಯ ಶ್ಲಾಘನೀಯ. ದೇಶದ ಪಾರಂಪರ್ಯವನ್ನು ಗುರುತಿಸುವ ಆಯುಷ್ ನಡಿ ಬರುವ ಆಯುರ್ವೇದ, ಯುನಾನಿ, ಸಿದ್ಧಾ, ಹೋಮಿಯೋಪತಿ ಔಷಧಿ ಪದ್ಧತಿಗಳನ್ನು ನಿಟ್ಟೆ ಮುಂದಿನ ದಿನಗಳಲ್ಲಿ ಸ್ಥಾಪಿಸಿ ದೇಶದ ಪರಂಪರೆಯ ಔಷಧೀಯ ಪದ್ಧತಿಯ ವೈದ್ಯರನನು ಸಿದ್ಧಪಡಿಸಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್ ಸಂತೋಷ್ ಹೆಗ್ಡೆ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿರುವುದರಲ್ಲಿ ನಿಟ್ಟೆ ಸಂಸ್ಥೆಯ ಪಾತ್ರ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲಿಯೂ ಯಶಸ್ವೀ ಮೈಲಿಗಲ್ಲನ್ನು ಶಿಕ್ಷಣ ಕ್ಷೇತ್ರದಲ್ಲಿ ಸ್ಥಾಪಿಸುವ ಮೂಲಕ ಸಮಾಜದ ಆಶೋತ್ತರಗಳನ್ನು ನಿವಾರಿಸುವ ಸಂಸ್ಥೆಯಾಗಲಿ ಎಂದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, 25 ವರ್ಷಗಳಲ್ಲಿ ನಿಟ್ಟೆ ಸಂಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ಗ್ರಾಮಾಂತರ ಭಾಗದಲ್ಲಿ ನಿರಂತರ ಸೇವೆಗಳನ್ನು ನೀಡುತ್ತಾ ಬಂದಿದೆ. 23 ಗ್ರಾಮಾಂತರ ಆರೋಗ್ಯ ಕೇಂದ್ರಗಳು ಕರ್ಯಾಚರಿಸುತ್ತಿದ್ದು, ದಿನವೊಂದಕ್ಕೆ 1000 ಕ್ಕೂ ಅಧಿಕ ರೋಗಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ದಂತ ವೈದ್ಯಕೀಯ ಕ್ಷೇತ್ರದ ಸಾಧನೆಯಿಂದಾಗಿ ಗ್ರಾಮಾಂತರ ಭಾಗಗಳಲ್ಲಿ ಯಶಸ್ವೀ ಸೇವೆಯನ್ನು ನೀಡಲು ಸಾಧ್ಯವಾಗಿದೆ. ಬಡಬಗ್ಗರನ್ನು ಸಲಹುವ ತನ್ನ ತಾಯಿಯ ಮಾತೊಂದು ಇಡೀ ನಿಟ್ಟೆ ವಿಶ್ವವಿದ್ಯಾಲಯವನ್ನು ಎಲ್ಲರ ಶ್ರಮದ ಜೊತೆಗೆ ಸ್ಥಾಪಿಸಲು ಸಾಧ್ಯವಾಯಿತು ಎಂದರು.
ಈ ಸಂದರ್ಭ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಸ್ಥಾಪನೆಗೆ ಸಹಕರಿಸಿದ ಅಂದಿನ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ| ರಾಮಕೃಷ್ಣ ಹೆಗಡೆ ಪುತ್ರಿ ಮಮತಾ ಹೆಗಡೆ , ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳಾದ ಡಾ| ಸುಧಾಕರ್ ಕಾರಂತ್, ಡಾ| ಶಾಂತಾರಾಮ ಶೆಟ್ಟಿ, ಡಾ. ಸತೀಶ್ ಕುಮಾರ್ ಭಂಡಾರಿ ಇವರನ್ನು ಗೌರವಿಸಲಾಯಿತು.
ನಿಟ್ಟೆ ಪರಿಗಣಿತ ವಿ.ವಿ.ಯ ಆಡಳಿತ ವಿಭಾಗಗಳ ಉಪಕುಲಾಧಿಪತಿ ವಿಶಾಲ್ ಹೆಗ್ಡೆ, ಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ಫೈನಾನ್ಸ್ ಆಂಡ್ ಪ್ಲಾನಿಂಗ್ ನಿರ್ದೇಶಕ ರಾಜೇಂದ್ರ ಎಂ., ನಿಟ್ಟೆ ಎಜ್ಯುಕೇಷನ್ ಟ್ರಸ್ಟ್ ಆಡಳಿತ ವಿಭಾಗದ ಸದಸ್ಯರಾದ ರೋಹಿತ್ ಪೂಂಜ, ರಾಜೇಂದ್ರ , ವೈಸ್ ಡೀನ್ ಗಳಾದ ಕ್ಷೇಮ ಆಡಳಿತ ವಿಭಾಗದ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಕೆ. , ಅಕಾಡೆಮಿಕ್ಸ್ ವಿಭಾಗದ ವೈಸ್ ಡೀನ್ ಡಾ.ಅಮೃತ್ ಮಿರಾಜ್ ಕರ್, ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಆರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಆಸ್ಪತ್ರೆ ಮತ್ತು ಸ್ನಾತಕೋತ್ತರ ಕಲಿಕಾ ವಿಭಾಗಗಳ ಉಪಕುಲಾಧಿಪತಿ ಡಾ| ಎಂ. ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು. ಡಾ| ಅಂಕಿತಾ ಮೆನನ್ ಮತ್ತು ದಿವ್ಯಾ ನಿರೂಪಿಸಿದರು. ಕುಲಸಚಿವ ಡಾ.ಹರ್ಷ ಹಾಲಹಳ್ಳಿ ವಂದಿಸಿದರು.
ಇದೇ ಸಂದರ್ಭ ಬೆಳ್ಳಿಹಬ್ಬದ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಮಾಜಿ ಮುಖ್ಯಮಂತ್ರಿ ದಿ| ರಾಮಕೃಷ್ಣ ಹೆಗಡೆ ಇವರ ಪುತ್ರಿ ಮಮತಾ ಹೆಗಡೆ ಇವರನ್ನು ಗೌರವಿಸಲಾಯಿತು.

ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಬೆಳ್ಳಿ ಹಬ್ಬದ ಸ್ಮರಣ ಸಂಚಿಕೆ ʻ ಸ್ಮರಣ್ʼ ಇದನ್ನು ಬಿಡುಗಡೆಗೊಳಿಸಲಾಯಿತು.

