ತೊಕ್ಕೊಟ್ಟು: ಸಾಂವಿಧಾನಿಕವಾಗಿ ವಾಕ್ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಧರ್ಮದ ವಿಚಾರಧಾರೆಗಳ ಕುರಿತು ಹಿಂದೂ ಸಮಾಜಕ್ಕೆ ಹೇಳಿರುವ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಿಸುವ ರಾಜ್ಯ ಸರಕಾರ ಅಸಾಂವಿಧಾನಿಕವಾಗಿ ಧರ್ಮವನ್ನು ಹಿಯ್ಯಾಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಇರುವುದು ತಾರತಮ್ಯವಲ್ಲವೇ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಆಕ್ರೋಶ ವ್ಯಕ್ತಪಡಿಸಿದರು.







ಸಾಹಿತಿ ಹಾಗೂ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮಾಡಿದ ಹಿಂದೂ ಧರ್ಮ ಜಾಗೃತಿಯ ಬಾಷಣದ ವಿರುದ್ಧ ದಾಖಲಾಗಿರುವ ಸುಮೊಟೊ ಕೇಸನ್ನು ಹಿಂಪಡೆಯಲು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ,ಬಜರಂಗದಳ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಿನ್ಯಾದಲ್ಲಿ ಜರಗಿದ ನವ ದಂಪತಿ ಸಮಾವೇಶದಲ್ಲಿ ನವ ವಿವಾಹಿತರಾಗಿ ಭಾಗವಹಿಸಿದ್ದ ಉಪನ್ಯಾಸಕ ಅರುಣ್ ಉಳ್ಳಾಲ್, ಹಿಂದೂಗಳು ಹಿಂದೂಗಳ ಸಭಾಂಗಣಗಳಲ್ಲೇ ಮದುವೆಯಾಗಿ ಎಂದು ಸಮಾಜಕ್ಕೆ ಕಿವಿಮಾತು ಹೇಳಿದ್ದಾರೆಯೇ ಹೊರತು ಯಾವುದೇ ಧರ್ಮವನ್ನ ಅಣಕಿಸಿ ,ನಿಂದಿಸಿಲ್ಲ. ಧರ್ಮದ ಬಗ್ಗೆ ಜಾಗೃತಿ ಮಾತುಗಳನ್ನಾಡಲೂ ಇಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲವೇ..?. ದೈವ ,ದೇವರನ್ನು ಹಿಯ್ಯಾಳಿಸಿದ ಜೆರೋಝ ಶಾಲಾ ಶಿಕ್ಷಕಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಧರ್ಮ ಜಾಗೃತಿಯ ಮಾತುಗಳನ್ನಾಡಿದರೆ ಸುಮೋಟೊ ಪ್ರಕರಣ ದಾಖಲಿಸುತ್ತಾರೆ. ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಹಿಂದೂ ದೈವ ,ದೇವರುಗಳನ್ನ ತುಚ್ಚವಾಗಿ ನಿಂದಿಸಿದವರಿಗೆ ಪುರಸ್ಕಾರ ನೀಡಲಾಗುತ್ತಿದೆ.ಆದರೆ ಹಿಂದೂ ಧರ್ಮದ ಬಗ್ಗೆ ಜಾಗೃತಿಯ ಬಾಷಣ ಮಾಡಿದವರ ಮೇಲೆ ಕೇಸುಗಳನ್ನ ಹಾಕಿ ದಮನಿಸುವ ಕಾರ್ಯ ನಡೆಯುತ್ತಿದೆ . ಉಪನ್ಯಾಸಕರಾಗಿರುವ ಅರುಣ್ ಉಳ್ಳಾಲ್ ಅವರು ಹಿಂದೂ ಸಮಾಜದ ಮಕ್ಕಳಿಗೆ ಧರ್ಮಶಿಕ್ಷಣ ನೀಡುತ್ತಿರುವುದೇ ಮಹಾಪರಾಧವಾಗಿದೆ. ಮೂರು ತಿಂಗಳ ಹಿಂದೆಯೇ ಅರುಣ್ ಅವರು ಕೆಲಸ ಮಾಡುತ್ತಿದ್ದ ಮಂಗಳೂರಿನ ಕ್ರೈಸ್ತ ಧರ್ಮೀಯರ ಕಾಲೇಜು ಆಡಳಿತವು ಕೆಲಸದಿಂದ ತೆಗೆದಿದ್ದಾರೆ. ಅರುಣ್ ಜೊತೆಗೆ ೧೨ ಹಿಂದೂ ಉಪನ್ಯಾಸಕರನ್ನು ಕೆಲಸದಿಂದ ತೆಗೆಯುತ್ತಾರೆ. ಈ ಪೈಕಿ ಇಬ್ಬರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದು ಸರಕಾರದ ಕಣ್ಣಿಗೆ ಕಾಣದಿರುವುದು ದುರದೃಷ್ಟಕರ.
ಬಜರಂಗದಳ ಉಳ್ಳಾಲ ನಗರ,ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಮಾತನಾಡಿ , ಭಾರತ ಮಾತೆಗೆ ಜೈಕಾರ ಹಾಕಿದವರ ಮೇಲೆ ಕೇಸ್ ಹಾಕುವ ಸರಕಾರ ಇದ್ದರೆ ಅದು ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ .ಪೊಲೀಸ್ ಠಾಣೆಗೆ ಕಲ್ಲೆಸೆದವರ ಮೇಲೆ ಕೇಸಿಲ್ಲ. ಮಂಗಳೂರಿನ ಬೀದಿಗಳಲ್ಲಿ ನಮಾಝ್ ಮಾಡಿದವರ ಮೇಲೆ ಸುಮೊಟೊ ಕೇಸ್ ಮಾಡಿದ ಪೊಲೀಸ್ ಅಧಿಕಾರಿಂ ಎತ್ತಂಗಡಿ ಮಾಡಲಾಗುತ್ತದೆ. ಅರುಣ್ ಉಳ್ಳಾಲ್ ಏಕಾಂಗಿಯಲ್ಲ ಹಿಂದೂ ಸಮಾಜ,ಹಿಂದೂ ಸಂಘಟನೆಗಳು ಅವರ ಜತೆ ನಿಲ್ಲುತ್ತದೆ. .ಸಿದ್ಧರಾಮಯ್ಯ ಸರಕಾರವು ಹುಬ್ಬಳ್ಳಿ ಪ್ರಕರಣವನ್ನು ಹಿಂಪಡೆಯುತ್ತದೆ. ಹಿಂದೂಗಳು ಇನ್ನೂ ಸುಮ್ಮನಿದ್ದರೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಕೇಸನ್ನೂ ಹಿಂಪಡೆಯುತ್ತಾರೆ.ಯಾವುದೇ ತಪ್ಪು ಮಾಡದ ವಿದ್ಯಾವಂತ ಸಾಹಿತಿ ಅರುಣ್ ಉಳ್ಳಾಲ್ ಮೇಲಿನ ಕೇಸು ದಾಖಲಿಸಿರುವ ನಡೆ ಖಂಡನೀಯ. ಉದ್ಯೋಗ ಭದ್ರತೆಯ ಬಗ್ಗೆಯೂ ವಿ.ಹಿಂ.ಪ ಅರುಣ್ ಅವರಿಗೆ ವಿಶ್ವಾಸ ನೀಡಿದೆ ಎಂದರು.
ವಿಶ್ವ ಹಿಂದೂ ಪರಿಷತ್ನ ಮಠ,ಮಂದಿರ,ಅರ್ಚಕ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ , ವಿ.ಹಿಂ.ಪ ಜಿಲ್ಲಾಧ್ಯಕ್ಷರಾದ ಹೆಚ್.ಕೆ ಪುರುಷೋತ್ತಮ್, ಉಪಾಧ್ಯಕ್ಷರಾದ ಮನೋಹರ್ ಸುವರ್ಣ,ಪ್ರಮುಖರಾದ ಕೃಷ್ಣ ಮೂರ್ತಿ, ಗೋಪಾಲ ಕುತ್ತಾರು, ನಾರಾಯಣ ಕುಂಪಲ, ರವಿ ಅಸೈಗೋಳಿ, ಗುರುಪ್ರಸಾದ್ ಕಡಂಬಾರ್, ಶಿವಪ್ರಸಾದ್ ಕೊಣಾಜೆ, ಕಿಶನ್ ತಾರಿಪಡ್ಪು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನಾಗೇಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರಾಧ್ಯಕ್ಷರಾದ ಜಗದೀಶ ಆಳ್ವ ಕುವೆತ್ತಬೈಲು, ಕ್ಷೇತ್ರ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆ, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್ , ಲಲಿತಾ ಸುಂದರ್, ಜಗದೀಶ ಶೇಣವ ಮೊದಲಾದವರು ಉಪಸ್ಥಿತರಿದ್ದರು.
ವಿ.ಹಿಂ.ಪ ಜಿಲ್ಲಾ ಪ್ರಚಾರ ಮತ್ತು ಪ್ರಸಾರ ವಿಭಾಗದ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ಸ್ವಾಗತಿಸಿ ನಿರೂಪಿಸಿದರು. ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಯೋಜಕರಾದ ಅರ್ಜುನ್ ಮಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಮುಖರಾದ ಹರಿಪ್ರಸಾದ್ ಕೈರಂಗಳ ವಂದಿಸಿದರು.


