





ಉಳ್ಳಾಲ: ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯಗಳಾಗುತ್ತಿದೆ. ನಾವು ನಾವಾಗಿಯೇ ಉಳಿಯಲು ಸಂಸ್ಕೃತದ ಮೇಲಿರುವ ಗೌರವ ನಂಬಿಕೆಗಳೇ ಕಾರಣ. ಇದನ್ನು ಹಾಳುಗೆಡವಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ. ಇದನ್ನು ಎಲ್ಲರೂ ಒಂದಾಗಿ ನಿಂತು ತಡೆಗಟ್ಟಬೇಕು. ಆಕ್ರಮಣ ಬಂದಾಗ ಮಾತ್ರವಲ್ಲ ಇಲ್ಲದಿದ್ದರೂ ಹಿಂದೂ ಸಮಾಜ ಒಗ್ಗಟ್ಟಾಗಿರಬೇಕಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಸೇವಾ ಟ್ರಸ್ಟಿನ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು
ಅವರು ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಹಿಂದೂ ಶ್ರಧ್ಧಾ ಕೇಂದ್ರಗಳಲ್ಲಿ ದುಷ್ಕøತ್ಯ ಎಸಗುತ್ತಿರುವ ದುಷ್ಕರ್ಮಿಗಳ ಕೃತ್ಯಗಳ ವಿರುದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ಶ್ರೀ ಕೊರಗಜ್ಜ ಆದಿಕ್ಷೇತ್ರಕ್ಕೆ ಭಾನುವಾರ ಹಮ್ಮಿಕೊಂಡಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಂಸ್ಕೃತಿ ಪ್ರತೀಕವಾಗಿರುವ ಅಯೋಧ್ಯೆ ರಾಮಮಂದಿರ ನಿರಂತರ ಹೋರಾಟದ ಬಳಿಕ ಫಲಪ್ರದವಾಗಿದೆ. ಹಿಂದೂ ಸಂತತಿ ಇರುವಷ್ಟು ಕಾಲ ಮಂದಿರ ಮಂದಿರವಾಗಿಯೇ ಉಳಿಯಲಿದೆ. ದೇಶದಲ್ಲಿ ಮಹಿಳೆಯರು ನರಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸರಕಾರವೇ ಹೆಣ್ಮಕ್ಕಳ ನಾಪತ್ತೆ ಕುರಿತು ವರದಿ ನೀಡುತ್ತಲೇ ಇದೆ. ರಾಮನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವಾಗಲಿ. ಹೆತ್ತವರಿಗೆ , ಸಂಸ್ಕೃತಿಗೆ ಗೌರವ ಕೊಡುವುದನ್ನು ಕಲಿಸಲಿ ಎಂದರು.
ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಮಾತನಾಡಿ, ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಘಾಸಿಗೊಳಿಸುತ್ತಿರುವುದು ಸಮಾಜದ ಪಿಡುಗಾಗಿದೆ. ಮೊಗಲರು, ಕ್ರೈಸ್ತರಿಂದ ಅನ್ಯಾಯಕ್ಕೊಳಗಾದ ಹಿಂದೂ ಧರ್ಮ ಎಂದಿಗೂ ಸೋತಿಲ್ಲ. ದೈವ-ದೇವರ ವಿಚಾರಗಳ ಮೇಲೆ ಕೀಳರಿಮೆ ಹುಟ್ಟುವಂತೆ ಮಾಡುತ್ತಿರುವ ಕಿರಾತಕರು ಹಿಂದೂಗಳ ದೌರ್ಬಲ್ಯ ಉಪಯೋಗಿಸಿ ಮತಾಂತರ ಷಡ್ಯಂತ್ರ ರೂಪಿಸಲಾಗುತ್ತಿದೆ. ಹಿಂದೂ ಸಮಾಜ ಎಲ್ಲರನ್ನು ಸ್ವಾಗತಿಸಿದ ಸನಾತನ ಧರ್ಮ. ಸಹನೆ, ತಾಳ್ಮೆಯ ಇನ್ನೊಂದು ಮುಖವೇ ಹಿಂದೂ ಸಮಾಜ. ಆದರೆ ತಾಳ್ಮೆಗೂ ಮಿತಿ ಇದೆ. ಅಯೋಧ್ಯೆ ಕರಸೇವಕರಿದ್ದ ರೈಲಿಗೆ ಬೆಂಕಿ ಕೊಟ್ಟವರನ್ನು ಬಿಡದ ಸಮಾಜದ ತಾಳ್ಮೆಗೂ ಮಿತಿ ಇದೆ. ಮಿತಿ ಮೀರಿದಲ್ಲಿ ನಿಲ್ಲಿಸುವ ತಾಕತ್ತೂ ಇದೆ ಎಂದರು.
ತುಳು ಜಾನಪದ ವಿಧ್ವಾಂಸ ಕೆ.ಕೆ ಪೇಜಾವರ ಮಾತನಾಡಿ ಉಚ್ಛಯ ಆಗುವುದು ದೇವರಿಗೆ, ಕೋಲ ಮತ್ತು ನೇಮ ದೈವಗಳಿಗೆ. ಆದರೆ ಈಗ ನೇಮೋತ್ಸವ, ಕೋಲೋತ್ಸವ ಎಂದು ದೇವರ ಉತ್ಸವವನ್ನು ದೈವದ ಜೊತೆಗೆ ಸೇರಿಸಲಾಗುತ್ತಿದೆ. ಹದಿಹರೆಯದವರು ದೈವಶಕ್ತಿಗಳ ಕುರಿತು ಜ್ಞಾನದ ಕೊರತೆಯಿಂದ ಫೇಸ್ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಂ ನಲ್ಲಿ ದೈವ ಕಟ್ಟುವವರ ಚಿತ್ರಗಳನ್ನು ಹಾಕಿ ವಿಕೃತ ಮೆರೆಯುತ್ತಿದ್ದಾರೆ. ಈ ಕುರಿತು ವಿ.ಹಿಂ.ಪ ಎದುರುನಿಂತು ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಉಡುಪಿ ಆಮಂತ್ರಣ ಪತ್ರಿಕೆಯೊಂದರಲ್ಲಿ ದೈವದ ಸಂದರ್ಶನ ಎಂದು ಮುದ್ರಿಸಿದರೆ, ಕಂಗೀಲು ನೃತ್ಯದಲ್ಲಿ ಕೊರಗಜ್ಜನ ವೇಷವನ್ನು ಧರಿಸಿ ಕುಣಿಯಲಾಗಿತ್ತು. ಕೊರಗಜ್ಜ ಎಂದರೆ 800 ವರ್ಷಗಳ ಇತಿಹಾಸವಿರುವ ವಿಚಾರ. ಕಂಗೀಲು ನೃತ್ಯದ ಕಾಲಘಟ್ಟವೇ ಬೇರೆ. ಖಂಡಾಲ, ಬಿಲ್ಲಾಲ, ಮುರಕಾಲ, ಮುಂಡಾಲ, ಸ್ಥಾನಿಕ ಐದು ವರ್ಗಗಳ ಮೂಲದ ಜಾಗ ಇದಾಗಿದೆ. ಪಂಚವರ್ಣದ ಮಣ್ಣಾಗಿರುವ ತುಳುನಾಡಿನ ಆರಾಧನೆಗಳಲ್ಲಿ ಮೂಲತ್ವ ಇದೆ. ಅಂತಹ ಆರಾಧನೆಯನ್ನು ವೈಭವೀಕರಿಸುವ ಕಾರ್ಯಗಳಾಗುತ್ತಿದೆ. ವೈಭವ ಇರುವಲ್ಲಿ ಕಲೆ ಕಾರ್ಣಿಕ ಕಡಿಮೆಯಾಗುತ್ತಿದೆ ಅನ್ನುವುದನ್ನು ಸಮಾಜ ಅರಿಯಬೇಕು ಎಂದರು.
ಈ ವೇಳೆ ಕೊರಗಜ್ಜ ಹಾಡು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ಮತ್ತು ಆತನಿಗೆ ಹಾಡು ಕಲಿಸಿದ ಸಹೋದರಿ ರಕ್ಷಿತಾಳನ್ನು ಸ್ವಾಮೀಜಿ ಸನ್ಮಾನಿಸಿದರು.
ಈ ಸಂದರ್ಭ ಶ್ರೀ ಪಂಜಂದಾಯ ಬಂಟ ದೈವಸ್ಥಾನ ಮತ್ತು ಶ್ರೀ ಕೊರಗ ತನಿಯ ಆದಿಸ್ಥಳಗಳ ಆಡಳಿತ ಮೊಕ್ತೇಸರ ರವೀಂದ್ರನಾಥ್ ಪೂಂಜ ,ವಿ.ಹಿಂ.ಪ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಜರಂಗದಳದ ಜಿಲ್ಲಾ ಸಂಚಾಲಕ ಪುನಿತ್ ಅತ್ತಾವರ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿದರು. ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವಿ ಅಸೈಗೋಳಿ ನಿರೂಪಿಸಿದರು. ಸುರೇಖಾರಾಜ್ ವಂದಿಸಿದರು.
`ಎಲ್ಲಾ ಕ್ಷೇತ್ರದಲ್ಲೂ ಜಿಹಾದಿಗಳಿದ್ದಾರೆ ‘
ಶಿವಮೊಗ್ಗದ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಯುವತಿಯರು ಅನ್ಯ ಜಾತಿಯವರನ್ನು ವಿವಾಹವಾಗಬಾರದು ಅನ್ನುವ ಹೇಳಿಕೆಯನ್ನು ಸುಳ್ಳಾಗಿ ಪ್ರಕಟಿಸಿದೆ. ವರದಿ ಪ್ರಕಟಿಸಿರುವ ಮಾಧ್ಯಮದವರಲ್ಲಿ ವೀಡಿಯೋ ದಾಖಲೆ ಕೇಳಿದಾಗ, ಅದನ್ನು ಸ್ಪಷ್ಟವಾಗಿ ನೀಡಿಲ್ಲ. ಅಂತಹ ಹೇಳಿಕೆಯನ್ನು ನೀಡದೇ ಇದ್ದರೂ, ಜನರಿಗೆ ಪತ್ರಿಕೆಗಳು ಹೇಳುವುದು ಸತ್ಯವಾಗುತ್ತದೆ. ವೈದ್ಯರು, ಇಂಜಿನಿಯರುಗಳು ಉನ್ನತ ವಿದ್ಯಾಭ್ಯಾಸ ಪಡೆದುಕೊಂಡವರೇ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜಿಹಾದಿ ಪ್ರವೃತ್ತಿ ಯಾವ ರೀತಿಯಲ್ಲೂ ಇರಬಹುದು. ಪೂಜೆ ಮಾಡುವ ಅರ್ಚಕರ ವೇಷದಲ್ಲೂ ಬರಬಹುದು. ಹಿಂದೂ ಸಮಾಜದಲ್ಲಿ ಒಡಕು ಹುಟ್ಟಿಸುವ ಪ್ರಯತ್ನಗಳು ನಿರಂತರವಾಗಿ ಆಗುತ್ತಿವೆ. ಮನಸ್ಸುಗಳು ತುಂಡಾದಲ್ಲಿ ಅವರಿಗೇ ಲಾಭ. ಇಂತಹ ಉದ್ದೇಶವನ್ನಿಟ್ಟುಕೊಂಡೇ ನಮ್ಮೊಳಗೆ ಒಡಕು ಮೂಡುವಂತಹ ವಿಚಾರಗಳನ್ನು ಪ್ರಚಾರಕ್ಕೆ ತರಲಾಗುತ್ತಿದೆ ಎಂದರು.




