
ಉಳ್ಳಾಲ : ಗೋಣಿಯಲ್ಲಿರಿಸಿ ಸ್ಕೂಟರಿನಲ್ಲಿ ಕರು ಸಾಗಾಟ ನಡೆಸುವಾಗ, ಗೋಣಿಚೀಲ ಕೆಳಗೆಬಿದ್ದು ಮಾಂಸಕ್ಕಾಗಿ ಕೊಂಡೊಯ್ಯುತ್ತಿದ್ದ ಕರು ಬದುಕುಳಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆಯ ಬಬ್ಬುಕಟ್ಟೆ ಸಮೀಪ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ. ಕರು ಸಾಗಾಟ ನಡೆಸುತ್ತಿದ್ದ ಸ್ಕೂಟರಿನಲ್ಲಿ ದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಆಕ್ಸೆಸ್ ಸ್ಕೂಟರಿನಲ್ಲಿ ಗೋಣಿ ಚೀಲದಲ್ಲಿ ಮೂರು ಮಂದಿ ಗೋಣಿ ಚೀಲದೊಳಗಿರಿಸಿ ಕರು ಸಾಗಾಟ ನಡೆಸುತ್ತಿದ್ದರು. ದಾರಿಮಧ್ಯೆ ರಸ್ತೆಗೆ ಬಿದ್ದಾಗ ಯುವಕನೋರ್ವ ಪ್ರಶ್ನಿಸಿದ್ದನು. ಹೊಟೇಲ್ ತ್ಯಾಜ್ಯ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದರು. ಆದರೆ ಕರುವಿನ ಕಾಲುಗಳನ್ನು ಕಂಡ ಸ್ಥಳೀಯ ಯುವಕ ಮೂವರು ಸ್ಕೂಟರಿನಲ್ಲಿ ಸುಳ್ಳು ಹೇಳಿ ಮುಂದುವರಿದಾಗ, ಕರು ಸಾಗಾಟ ನಡೆಸುವುದನ್ನು ಯುವಕ ಬೊಬ್ಬಿಡಲು ಆರಂಭಿಸಿದ್ದ. ಇದರಿಂದ ಗಾಬರಿಗೊಂಡ ಸ್ಕೂಟರಿನಲ್ಲಿ ದ್ದವರು ಗೋಣಿಚೀಲವನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಗೋಣಿ ಚೀಲ ಪರಿಶೀಲಿಸಿದಾಗ ಅದರೊಳಗೆ ಕರು ಇರುವುದನ್ನು ಗಮನಿಸಿದ್ದಾರೆ. ಕರುವಿನ ಬೆನ್ನಿಗೆ, ಕಾಲಿಗೆ ಗಾಯಗಳಾಗಿದ್ದು, ಬಾಲವನ್ನು ತುಂಡರಿಸಲಾಗಿತ್ತು. ಆಹಾರವಿಲ್ಲದೆ ಸೊರಗಿದ್ದ ಕರುವಿಗೆ ಸ್ಥಳೀಯರು ಅನ್ನ ನೀಡಿ ಶುಶ್ರೂಷೆ ನಡೆಸಿದರು. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.

