UN NETWORKS
ಕೊಣಾಜೆ: ನಡುಪದವಿನಲ್ಲಿರುವ ಪಿ.ಎ. ಎಜ್ಯುಕೇಶನಲ್ ಟ್ರಸ್ಟ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಠಾಣೆ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಠಾಣೆ ಮಂಗಳೂರು ಇದರ ಪೊಲೀಸ್ ಮುಖ್ಯಾಧಿಕಾರಿಣಿ ಶ್ರೀಲತಾ ಮಾತನಾಡಿ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಗಳಾಗದೆ ಶಿಕ್ಷಣಕ್ಕೆ ಹೆಚ್ಚು ಮಹತ್ವಕೊಟ್ಟು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಒಳ್ಳೆಯದಲ್ಲ, ಕ್ಷಣಿಕ ಸುಖಕ್ಕೆ ಬದುಕು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಕುರಿತು ಎಚ್ಚರ ವಹಿಸಬೇಕೆಂದು ಅವರು ಕರೆ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಪೊಲೀಸ್ ಉಪ ಅಧಿಕಾರಿಣಿ ಲತಾ, ಅಧಿಕಾರಿ ಶಿವಕುಮಾರ್, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ಲಾ ಶರೀಫ್, ಶೈಕ್ಷಣಿಕ ನಿರ್ದೇಶಕ ಡಾ.ಸಫ್ರ್ರಾಝ್ ಜೆ. ಹಾಶಿಂ, ಎಂ.ಬಿ.ಎ ವಿಭಾಗದ ನಿರ್ದೇಶಕಿ ಡಾ.ಲತಾ ಕೃಷ್ಣನ್, ಡಾ. ಶರ್ಮಿಳಾ, ಡಾ.ಮುಹಮ್ಮದ್ ಮುಬೀನ್ ಉಪಸ್ಥಿತರಿದ್ದರು.
ಪಿ,ಎ. ಎಜ್ಯುಕೇಶನಲ್ ಟ್ರಸ್ಟಿನ ಅಧೀನದಲ್ಲಿರುವ ಇಂಜಿನಿಯರಿಂಗ್, ಪೊಲಿಟೆಕ್ನಿಕ್, ಫಾರ್ಮಸಿ, ಎಂ.ಬಿ.ಎ. ಹಾಗೂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ. ರಮೀಝ್ ಎಂ.ಕೆ. ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ. ಶಮಾ ಅಬ್ಬಾಸ್ ಕಾರ್ಯಕ್ರಮ ನಿರೂಪಿಸಿದರು. ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ವಂದಿಸಿದರು.


