UN NETWORKS
ಬೋಳಿಯಾರ್ : ಚಿನ್ನದ ಅಂಗಡಿ ಹಾಗೂ ಫೈನಾನ್ಸ್ ಮಾಲಕರಾಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೋಳಿಯಾರ್ ನ ಪ್ರಭಾ ಜ್ಯುವೆಲ್ಲರ್ಸ್ ಹಾಗೂ ಪ್ರಭಾ ಫೈನಾನ್ಸ್ನ ಮಾಲಕರಾದ ಪ್ರಭಾಕರ ಆಚಾರ್ಯ(57) ಎಂಬವರೇ ನಾಪತ್ತೆಯಾದ ವ್ಯಕ್ತಿಯಾಗಿದ್ದಾರೆ. ಕಳೆದ ಹಲವಾರು ವರ್ಷದಿಂದ ಇದೇ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದ ಪ್ರಭಾಕರ ಆಚಾರ್ಯ ಅವರು ಬೊಳಿಯಾರ್ ನಲ್ಲಿ ವಾಸವಾಗಿದ್ದರು. ಭಾನುವಾರದಂದು ಮನೆಯಿಂದ ಔಷಧಿಗಾಗಿ ಹೋಗಿ ಬರುತ್ತೇನೆ ಎಂದು ಪತ್ನಿ ಪೂರ್ಣಿಮಾರಲ್ಲಿ ತಿಳಿಸಿ ಹೊರಟಿದ್ದರು. ಬಳಿಕ ರಾತ್ರಿಯಾದರೂ ಮನೆಗೆ ವಾಪಸ್ಸಾಗದ ಕಾರಣ ಮನೆ ಮಂದಿ ಆತಂಕಗೊಂಡು ಎಲ್ಲಾ ಕಡೆಯೂ ಹುಡುಕಾಡಿದ್ದಾರೆ. ಆದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೆ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಭಾಕರ ಆಚಾರ್ಯ ಅವರ ಪುತ್ರ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಇವರು ಚಲಾಯಿಸಿಕೊಂಡು ಬಂದ ಕಾರು ಮುಡಿಪು ಬಳಿ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


