UN NETWORKS
ಅಸೈಗೋಳಿ : ಕೊಣಾಜೆಯ ಅಸೈಗೋಳಿ ಬಳಿ ಗುರುವಾರ ರಾತ್ರಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಸವಾದ್ (23) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಸೈಗೋಳಿ ಪುಲ್ಲು ನಿವಾಸಿಯಾಗಿದ್ದ ಮಹಮ್ಮದ್ ಸವಾದ್ ಅಸೈಗೋಳಿಯಿಂದ ಹಾಲು ತೆಗೆದುಕೊಂಡು ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ಅಸೈಗೋಳಿ ಜಂಕ್ಷನ್ನಿಂದ 100 ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ. ಇವರ ಬೈಕ್ ಮತ್ತು ದೇರಳಕಟ್ಟೆ ಕಡೆಯಿಂದ ಕೊಣಾಜೆ ಕಡೆ ಬರುತ್ತಿದ್ದ ಬೈಕ್ ಮುಖಾಮುಖೀ ಢಿಕ್ಕಿಯಾಗಿತ್ತು. ಪರಿಣಾಮ ಸವಾದ್ ತಲೆಗೆ ಗಂಭೀರ ಗಾಯವಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೊಂದು ಬೈಕಿನಲ್ಲಿದ್ದ ಇಬ್ಬರು ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು.ಸವಾದ್ ಸ್ಥಿತಿ ಉಲ್ಬಣಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಶುಕ್ರವಾರ ಕೊನೆಯುಸಿರೆಳೆದರು.
ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಸುಲೈಮಾನ್ ಪುಲ್ಲು ಅವರ ಏಕೈಕ ಪುತ್ರನಾಗಿದ್ದ ಸವಾದ್ ಅವರು ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದರು. ಅವರು ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


