UN NETWORKS
ದೇರಳಕಟ್ಟೆ : ದುಷ್ಕರ್ಮಿ ಸುಶಾಂತ್ ಎಂಬವನಿಂದ ಹಲವು ಬಾರಿ ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿನಿ ಧೀಕ್ಷಾ ಚಿಂತಾಜನಕವಾಗಿದೆ. 48 ರಿಂದ 72 ಗಂಟೆಯವರೆಗೂ ತೀವ್ರ ನಿಗಾ ಘಟಕದಲ್ಲಿರಿಸಬೇಕಿದೆ. ಹೊಲಿಗೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಿದ ಗಾಯಗಳಲ್ಲಿ ಯಾವುದೇ ರೀತಿಯ ಸೋಂಕುಗಳಾಗದೇ ಇದ್ದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಕ್ಷೇಮ ಆಸ್ಪತ್ರೆಯ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಡಾ.ನರೇಶ್ ರೈ ತಿಳಿಸಿದ್ದಾರೆ.

ಕುತ್ತಿಗೆಯ ಭಾಗದಲ್ಲಿ ಇರಿದ ಗಾಯ ಶ್ವಾಸನಾಳಕ್ಕೆ ತಗುಲಿರುವುದು ಗಂಭೀರ ಗಾಯ, ಎದೆ, ಹೊಟ್ಟೆ, ಎಡಗೈಯ ತೋಳಿನ ಭಾಗದಲ್ಲಿ ಚುಚ್ಚಿದ ಗಾಯಗಳಾಗಿವೆ. ಆಸ್ಪತ್ರೆಗೆ ಕರೆತರುವ ಸಂದರ್ಭ ತೀವ್ರ ರಕ್ತಸ್ರಾವ ಉಂಟಾಗಿ, ಹೆಮರೇಜಿಂಗ್ ಶಾಕ್ ಕೂಡಾ ಆಗಿತ್ತು. ಕೂಡಲೇ ಆಪರೇಷನ್ ಥಿಯೇಟರಿನಲ್ಲಿ ವೈದ್ಯರ ತಂಡ ಸೇರಿ ಶಸ್ತ್ರಚಿಕಿತ್ಸೆ ನಡೆಸಿತ್ತು. ಜನರಲ್ ಸರ್ಜನ್ ವಿಭಾಗದವರು ಶ್ವಾಸನಾಳಕ್ಕೆ ಹೊಲಿಗೆ , ಎಡಗೈಯ ತೋಳಿನ ಸೂಕ್ಷ್ಮವಾದ ರಕ್ತನಾಳದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯನ್ನು ಇಎನ್ ಟಿ ವಿಭಾಗ ನಡೆಸಿದೆ, ಎದಯ ಭಾಗದಲ್ಲಾದ ಗಾಯವನ್ನು ಹೃದಯ ವಿಭಾಗ ಹಾಗೂ ಹೊಟ್ಟೆಯ ಸಣ್ಣ ಕರುಳು ಮತ್ತು ದೊಡ್ಡ ಕರುಳಿನಲ್ಲಾದ ಐದು ಕಡೆಯ ಗಾಯವನ್ನು ಜನರಲ್ ಮೆಡಿಸಿನ್ ವಿಭಾಗದವರು ಶಸ್ತ್ರಚಿಕಿತ್ಸೆ ನಡೆಸಿ ಮುಚ್ಚಿದ್ದಾರೆ. 10 ಬಾಟಲಿ ರಕ್ತ ಮತ್ತು 20 ಬಾಟಲಿಯಷ್ಟು ಗ್ಲುಕೋಸ್ ನೀಡಲಾಗಿದೆ. ವೆಂಟಿಲೇಟರ್ ನಲ್ಲಿಯೇ ವಿದ್ಯಾರ್ಥಿನಿ ದೀಕ್ಷಾ ಇದ್ದು, ಚಿಂತಾಜನಕ ಸ್ಥಿತಿ ಮುಂದುವರಿದಿದೆ. ಇಳೆಯ ವಯಸ್ಸಿನವಳು ಮತ್ತು ಯಾವುದೇ ರೀತಿಯ ರೋಗಗಳು ಇಲ್ಲದಿರುವುದರಿಂದ ಬದುಕುವ ಸಾಧ್ಯತೆಗಳು ಹೆಚ್ಚಿದೆ. ಆದರೂ ಹೊಲಿಗೆ ಹಾಕಿದಂತಹ ಜಾಗದಲ್ಲಿ ರಕ್ತ ಸೋರಿಕೆ ಮತ್ತು ಸೋಂಕು ಉಂಟಾಗದೇ ಇದ್ದಲ್ಲಿ ಜೀವಕ್ಕೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.


