UN NETWORKS
ಉಳ್ಳಾಲ : ಸ್ಕೂಟರಿನಲ್ಲಿದ್ದ ವಿವಾಹಿತೆಯನ್ನು ಹಿಂಬಾಲಿಸಿದ ಕಿರಾತಕನೋರ್ವ ತಲಪಾಡಿಯ ಪಿಲಿಕೂರು ಸಮೀಪ ನಿರ್ಜನ ಪ್ರದೇಶದಲ್ಲಿ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದ ಆರೋಪಿಯನ್ನು ಎಸಿಪಿ ನೇತೃತ್ವದ ಪೊಲೀಸರ ತಂಡ ನಿನ್ನೆ ಬಂಧಿಸಿದೆ.

ಉಪ್ಪಳ ಮೂಲದ ಜೆಪ್ಪು ಸಮೀಪದ ಫ್ಲಾಟಿನಲ್ಲಿರುವ ಮಹಮ್ಮದ್ ಸಾಹಿಲ್ (25) ಬಂಧಿತ. ಎರಡು ದಿನಗಳ ಹಿಂದೆ ಮಂಗಳೂರಿನಿಂದ ತಲಪಾಡಿ ಕಡೆಗೆ ತನ್ನ ಸ್ಕೂಟರಿನಲ್ಲಿ ವಾಪಸ್ಸಾಗುತ್ತಿದ್ದ ವಿವಾಹಿತ ಮಹಿಳೆಯನ್ನು, ತನ್ನ ಸ್ಕೂಟರಿನಲ್ಲಿ ಸಾಹಿಲ್ ಹಿಂಬಾಲಿಸಲು ಆರಂಭಿಸಿದ್ದ. ದಾರಿಮಧ್ಯೆ ಮಹಿಳೆಯಿದ್ದ ಸ್ಕೂಟರ್ ನಿಧಾನವಾಗುತ್ತಿದ್ದಂತೆ, ಸಾಹಿಲ್ `ಹಾಯ್’ ಅಂದಿದ್ದ. ಇದರಿಂದ ಬೆದರಿದ ಮಹಿಳೆ ವೇಗವಾಗಿ ಸ್ಕೂಟರನ್ನು ಚಲಾಯಿಸಿದ್ದಾರೆ. ಇದೇ ವೇಳೆ ಪತಿಗೆ ಕರೆ ಮಾಡಿ ವಿಚಾರವನ್ನು ತಿಳಿಸಿದ್ದರು. ಆದರೆ ತಲಪಾಡಿಯ ಪಿಲಿಕೂರು ನಿರ್ಜನ ಪ್ರದೇಶಕ್ಕೆ ತಲುಪುತ್ತಿದ್ದಂತೆ ಮಹಿಳೆಗೆ ಆರೋಪಿ ಕಿರುಕುಳ ನೀಡಿದ್ದಾನೆ.
ಈ ಕುರಿತು ಮಹಿಳೆ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಎಸಿಪಿ ರಾಮರಾವ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಜೆಪ್ಪುವಿನ ಆತನ ಫ್ಲಾಟಿನಿಂದ ನಿನ್ನೆ ಬಂಧಿಸಿದೆ.


