UN NETWORKS
ಉಳ್ಳಾಲ: ಚಲಿಸುತ್ತಿದ್ದ ರಿಕ್ಷಾ ಮೇಲೆಯೇ ಹಳೇಯ ಬೃಹತ್ ಗಾತ್ರದ ಮಾವಿನ ಮರ ಉರುಳಿಬಿದ್ದು ರಿಕ್ಷಾ ನುಜ್ಜುಗುಜ್ಜಾಗಿ, ಚಾಲಕನ ಸಮಯಪ್ರಜ್ಞೆಯಿಂದ ಐದು ಜೀವಗಳು ಪವಾಡಸದೃಶವಾಗಿ ಪಾರಾದ ಘಟನೆ ಉರುಳಿಬಿದ್ದ ಹಳೇಯ ಮಾವಿನ ಮರ ಕೋಟೆಕಾರು ಸಮೀಪದ ಕೋಟೆಕಾರು ಪಟ್ಟಣ ಪಂಚಾಯಿತಿ ಎದುರುಗಡೆ ಇಂದು ಸಂಜೆ ಸಂಭವಿಸಿದೆ.



ತಲಪಾಡಿ ಪಾರ್ಕಿನ ರಿಕ್ಷಾ ಚಾಲಕ ಉಮೇಶ್ ಪೂಜಾರಿ ಸಮಯಪ್ರಜ್ಞೆಯಿಂದ ಇಬ್ಬರು ಮಕ್ಕಳು, ಮೂವರು ಮಹಿಳಾ ಪ್ರಯಾಣಿಕರು ಸೇರಿದಂತೆ ಚಾಲಕನ ಜೀವ ಬಚಾವಾಗಿದೆ.ತಲಪಾಡಿಯಿಂದ ಸೋಮೇಶ್ವರ ಕಡೆಗೆ ಬಾಡಿಗೆ ಬರುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ. ಚಲಿಸುತ್ತಿರುವಾಗಲೇ ಬುಡಸಮೇತ ಕಿತ್ತು ಬೀಳುತ್ತಿರುವ ಮರವನ್ನು ಕಂಡ ತಕ್ಷಣ ರಿಕ್ಷಾ ಚಾಲಕ ಬ್ರೇಕ್ ಹಾಕಿದ್ದರು. ಇದರಿಂದಾಗಿ ರಿಕ್ಷಾದ ಎದುರು ಭಾಗಕ್ಕೆ ಮರದ ಗೆಲ್ಲು ಬಿದ್ದು ರಿಕ್ಷಾಗೆ ಮಾತ್ರ ಹಾನಿಯಾಗಿದೆ. ರಿಕ್ಷಾದೊಳಗೆ ಇದ್ದ ಆರು ಜೀವಗಳು ಪಾರಾಗಿವೆ.ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಸ್ಥಳೀಯ ಮೆಸ್ಕಾಂ ಸಿಬ್ಬಂದಿ ಸೇರಿಕೊಂಡು ಮರ ತೆರವುಗೊಳಿಸಿದರು.
ತಪ್ಪಿದ ಭಾರೀ ಅನಾಹುತ : ಘಟನೆ ನಡೆದ ಸ್ಥಳದಲ್ಲಿ ರೈಲ್ವೇ ಗೇಟ್ ಇದೆ. ಗೇಟ್ ಬಿದ್ದಲ್ಲಿ ವಾಹನಗಳು ಸಾಲುಸಾಲಾಗಿ ನಿಂತಿರುತ್ತದೆ. ಆದರೆ ಘಟನೆ ಸಂದರ್ಭ ಗೇಟ್ ಹಾಕದೇ ಇದ್ದುದರಿಂದ, ವಾಹನಗಳು ಇರದೇ ಇದ್ದುದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿ ಹೋಗಿದೆ.



