UN NETWORKS
ಕೊಣಾಜೆ : ಕೇಂದ್ರ ಸರ್ಕಾರ ಮಂಗಳೂರಿಗೆ ಐಟಿ ಪಾರ್ಕ್ ಮಂಜೂರುಗೊಳಿಸಿದ್ದು ಸರ್ಕಾರ ಜಮೀನು ಕೊಟ್ಟರೆ ಕೊಣಾಜೆಯಲ್ಲಿ ನಿರ್ಮಾಣವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳೂರು ಕ್ಷೇತ್ರ ಬಿಜೆಪಿ ಕೊಣಾಜೆ ಮಹಾಶಕ್ತಿ ಕೇಂದ್ರದ ಕಚೇರಿ ಉದ್ಘಾಟನೆ ಹಾಗೂ ಅಸೈಗೋಳಿಯಲ್ಲಿ ನಡೆದ ಜನಬೆಂಬಲ ಯಾತ್ರೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಖಾದರ್ ಆರೋಗ್ಯ ಸಚಿವರಾಗಿದ್ದ ಸಂದರ್ಭ ಘೋಷಿಸಿದ್ದ ಬಡವರಿಗೆ ಹಲ್ಲು ಮತ್ತು ಕನ್ನಡಕ ಇದುವರೆಗೂ ಬಂದಿಲ್ಲ. ಆದರೆ ಅವರ ಮನೆಯಲ್ಲಿ ಚಿನ್ನದ ಹಲ್ಲು ಹಾಗೂ ಕನ್ನಡಕ ಬಂದಿದೆ. ಆಹಾರ ಸಚಿವರಾಗಿದ್ದ ಸಂದರ್ಭ ಘೋಷಿಸಿದ್ದ ಅನಿಲ ಯೋಜನೆ ಕೇಂದ್ರ ಸರ್ಕಾರ ನೀಡಿದೆಯೇ ಹೊರತು ರಾಜ್ಯದಿಂದ ಬಂದಿಲ್ಲ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ 14 ಹಿರಿಯ ಕಾರ್ಯಕರ್ತರಾದ ಇವರನ್ನು ಸನ್ಮಾನಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಜಯರಾಮ ಶೆಟ್ಟಿ, ಸತೀಶ್ ಕುಂಪಲ, ಸುರೇಶ್ ಶೆಟ್ಟಿ ಅಂಬ್ಲಮೊಗರು, ರಾಧಾಕೃಷ್ಣ ರೈ ಬೂಡಿಯಾರ್, ಚಂದ್ರಶೇಖರ ಉಚ್ಚಿಲ್, ಸತೀಶ್ ಆಚಾರ್ಯ ಬೋಳಿಯಾರ್, ಚಂದ್ರಹಾಸ ಅಡ್ಯಂತಾಯ, ವೇದಾವತಿ ಪೂಜಾರಿ, ಅಶ್ರಫ್ ಹರೇಕಳ, ಸುಭಾಷ್ ಧರ್ಮನಗರ, ರಾಮಕೃಷ್ಣ ಪಟ್ಟೋರಿ, ಮೋಹನ್ ದಾಸ್ ಶೆಟ್ಟಿ ಕಿನ್ಯ, ಸುರೇಶ್ ಶೆಟ್ಟಿ ಕಕ್ಕೆಮಜಲ್ ಇನ್ನಿತರರು ಉಪಸ್ಥಿತರಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟ ಸ್ವಾಗತಿಸಿದರು. ಜಿ.ಪಂ.ಸದಸ್ಯೆ ಧನಲಕ್ಷ್ಮೀ ಗಟ್ಟಿ ಯೋಧರಿಗೆ ನುಡಿನಮನ ಸಲ್ಲಿಸಿದರು. ಪಾವೂರು ಗ್ರಾ.ಪಂ.ಸದಸ್ಯ ವಾಮನ್ ರಾಜ್ ಹಾಗೂ ಬಾಸ್ಕರ್ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.
‘ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ದೇಶ ಕಾಯುವ ಸೈನಿಕರಿಗೆ ಸರಿಯಾದ ಸಮವಸ್ತ್ರ ಇರಲಿಲ್ಲ, ವಾರಕ್ಕಿಂತ ಹೆಚ್ಚು ಬರುವಂತಹ ಆಹಾರ ಇರಲಿಲ್ಲ, ಗುಂಡುಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಮೋದಿಯವರು ಸೈನಿಕರಿಗೆ ಮೂರು ಲಕ್ಷ ಕೋಟಿ ನೀಡಿದ್ದಾರೆ’
ನಳಿನ್ ಕುಮಾರ್ ಕಟೀಲ್, ಸಂಸದ














