UN NETWORKS
ಹರೇಕಳ : ತೆರಿಗೆ ಹಣ ಚೆಕ್ ರೂಪದಲ್ಲಿ ಅವ್ಯವಹಾರ ಆಗಿದ್ದರೂ ಇಷ್ಟು ವರ್ಷ ತನಿಖೆಯಾಗದಿರುವುದು ನಿಜಕ್ಕೂ ದುರಂತ. ಈ ಬಗ್ಗೆ ಜೊತೆಯಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮಾಹಿತಿ ನೀಡೋಣ. ನಿಮ್ಮ ದಿನ ತಿಳಿಸಿ ಒಟ್ಟಿಗೆ ಹೋಗೋಣ, ಯಾವುದೇ ಕಾರ್ಯಕ್ರಮ ಇದ್ದರೂ ರದ್ದುಪಡಿಸಿ ಬರುತ್ತೇನೆ’ ಹೀಗೆಂದವರು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ.
ವಿವಿಧ ಕಾರಣಗಳಿಂದ ವರ್ಷ ಬಳಿಕ ಶನಿವಾರ ಪಂಚಾಯಿತಿ ವಠಾರದಲ್ಲಿ ನಡೆದ ಹರೇಕಳ ಗ್ರಾಮಸಭೆಯಲ್ಲಿ ಡಿವೈಎಫ್ಐ ಮುಖಂಡ ರಫೀಕ್ ಹರೇಕಳ ಅವರು, ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದ ಒಂಬತ್ತು ಲಕ್ಷ ರೂಪಾಯಿ ಅವ್ಯವಹಾರದ ಬಗ್ಗೆ ಪ್ರಶ್ನಿಸಿ, ತನಿಖೆಯ ಭರವಸೆ ನೀಡಿದರೂ ಪ್ರಯೋಜನ ಆಗಿಲ್ಲ. ಪೋಲಾಗಿರುವುದು ಗ್ರಾಮಸ್ಥರು ತೆರಿಗೆ ಕಟ್ಟಿದ ಹಣ ಅಲ್ಲವೇ ಎನ್ನುವ ಪ್ರಶ್ನೆಗೆ ಜಿ.ಪಂ. ಸದಸ್ಯೆ ಉತ್ತರ ನೀಡಿದರು. ಈ ಬಾರಿ ಜಿ.ಪಂ.ನ ಎಲ್ಲಾ ಸದಸ್ಯರ ಹೋರಾಟದ ಫಲವಾಗಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಬಂದಿದೆ. ಪಕ್ಷ ಬೇಧವಿಲ್ಲದೆ ನಾಲ್ಕು ಗ್ರಾಮಕ್ಕೆ ಅನುದಾನ ಸಮಾನವಾಗಿ ಹಂಚುತ್ತೇನೆ. ಈ ವರ್ಷ ಬರುವ ಅನುದಾನ ಹೆಚ್ಚು ಹರೇಕಳಕ್ಕೆ ಬಳಸುತ್ತೇನೆ. ಸರ್ಕಾರ ಯಾವುದೇ ಇರಲಿ, ಚುನಾವಣೆಗೆ ಮಾತ್ರ ರಾಜಕೀಯ ಸೀಮಿತವಾಗಲಿ. ಒಬ್ಬರನ್ನೊಬ್ಬರು ದೂರುತ್ತಾ ಕೂರುವ ಬದಲು ಯೋಜನೆ ಪ್ರತಿಯೊಬ್ಬರಿಗೂ ತಲುಪಿಸಲು ಯುವಸಮುದಾಯ ಮುಂದಾಗಬೇಕು ಎಂದರು.
ಗ್ರಾಮಸಭೆ ಬೇಕಾ, ಬೇಡವಾ?
ಪಂಚಾಯಿತಿ ಆವರಣದಲ್ಲಿ ಗ್ರಾಮಸಭೆ ಅಯೋಜಿಸಿದ್ದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ಜಾಗವೇ ಇಲ್ಲ, ಒಬ್ಬೊಬ್ಬರು ಒಂದೊಂದು ಕಡೆ ಕೂತಿದ್ದಾರೆ. ನಿಮಗೆ ಬೇರೆ ಜಾಗ ಸಿಗಲಿಲ್ಲವೇ ಎಂದು ಪ್ರಶ್ನಿಸಿದರು. ಶಾಲೆಗಳಲ್ಲಿ ಪರೀಕ್ಷೆಯ ಸಮಯವಾಗಿದ್ದರಿಂದ ಅವಕಾಶ ಸಿಗಲಿಲ್ಲ ಎಂದು ಅಧ್ಯಕ್ಷೆ ಅನಿತ ಡಿಸೋಜ ತಿಳಿಸಿದರು. ಈ ಸಂದರ್ಭ ಮಾತನಾಡಿದ ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖೆಯ ಡಾ.ಪ್ರಶಾಂತ್ ಕುಮಾರ್ ಕೆಎಸ್., ಗ್ರಾಮಸಭೆ ಅಯೋಜಿಸಿರುವ ಜಾಗ ನೋಡುವಾಗ ನನಗೂ ಅಸಮಾಧಾನ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಭೆ ನಡೆಸಬೇಕೇ, ಬೇಡವೇ ಎಂದು ಗ್ರಾಮಸ್ಥರು ತೀರ್ಮಾನಿಸಬೇಕು ಎಂದರು.
ನನಗೆ ಮೂರು ಪಂಚಾಯಿತಿ ಇದೆ
ಗ್ರಾಮಸ್ಥರೋರ್ವರು ಗ್ರಾಮಕರಣಿಕರ ಬಗ್ಗೆ ಆರೋಪ ಹೊರಿಸಿದ್ದರಿಂದ ಅಸಮಾಧಾನಗೊಂಡ ಗ್ರಾಮಕರಣಿಕ ಪೂರ್ಣಚಂದ್ರ ತೇಜಸ್ವಿ, ನನ್ನಿಂದ ಯಾರಿಗೂ ಪ್ರಮಾಣ ಪತ್ರ ನೀಡುವಲ್ಲಿ ತೊಂದರೆಯಾಗಿದ್ದರೆ ಹೇಳಿ. ನನಗೆ ಮೂರು ಪಂಚಾಯಿತಿಯಲ್ಲಿ ಕೆಲಸದ ಜವಾಬ್ದಾರಿಯಿದೆ. ಭಾನುವಾರವೂ ಕೆಲಸ ಮಾಡುತ್ತಿದ್ದೇನೆ. ಹರೇಕಳಕ್ಕೆ ಮಹಿಳಾ ಗ್ರಾಮಕರಣಿಕರು ನೇಮಕ ಆಗಿದ್ದರೂ ಮರಳಿಗೆ ಸಂಬಂಧಿಸಿ ರಾತ್ರಿ ಒಂದು ಗಂಟೆಗೂ ಕರೆ ಬರುವುದರಿಂದ ಅವರು ಇಲ್ಲಿಗೆ ಬರಲು ಒಪ್ಪುತ್ತಿಲ್ಲ ಎಂದು ತಿಳಿಸಿದರು.
ಹದಿನೈದು ವರ್ಷ ಬಳಿಕ ತೆರಿಗೆ ಏರಿಕೆ!
ವಾಣಿಜ್ಯ ಕಟ್ಟಡ, ಮನೆಗಳಿಗೆ ಏಕಾಏಕಿ ತೆರಿಗೆ ಏರಿಸಲಾಗಿದೆ ರಿಚಾರ್ಡ್ ಅವರು ದೂರಿದಾಗ ಒಂದಿಬ್ಬರು ಅವರ ಬೆಂಬಲಕ್ಕೆ ನಿಂತರು. 15 ವರ್ಷಗಳಿಂದ ತೆರಿಗೆ ಏರಿಕೆ ಆಗಿಲ್ಲ ಎಂದು ಜಿ.ಪಂ.ನಿಂದ ನೊಟೀಸ್ ಬಂದಿದ್ದರಿಂದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸರ್ಕಾರದ ನೀತಿಯಂತೆ ನಿಗದಿಪಡಿಸಲಾಗಿದೆ. ವಾಣಿಜ್ಯ ಕಟ್ಟಡಕ್ಕೆ 60-80 ರೂಪಾಯಿ ಏರಿಸಬಹುದಾದರೂ ನಾವು 40-45 ರೂಪಾಯಿ ಮಾತ್ರ ಹಾಕಿದ್ದೇವೆ ಎಂದು ಸದಸ್ಯ ಬಶೀರ್ ಉಂಬುದ ಹೇಳಿದರು. ಆದರೂ ತಕರಾರು ಮುಂದುವರಿದಾಗ ಅಸಮಾಧಾನಗೊಂಡ ಗ್ರಾಮ ಅಭಿವೃದ್ಧಿ ಬಗ್ಗೆ ಮಾತನಾಡುತ್ತೀರಿ, 15 ವರ್ಷ ಬಳಿಕ ತೆರಿಗೆ ಏರಿಸುವ ಅಧಿಕಾರ ಪಂಚಾಯಿತಿಗೆ ಇಲ್ಲವೇ, ಆಕ್ಷೇಪ ವ್ಯಕ್ತಪಡಿಸಿರುವ ಕಟ್ಟಡ ಮಾಲೀಕರು ನಕ್ಷೆ ತಂದು ಮಿತಿಮೀರಿ ತೆರಿಗೆ ಏರಿಸಿದ್ದರೆ ತಿಳಿಸಲಿ ಎಂದು ಸದಸ್ಯ ಬದ್ರಿದ್ದೀನ್ ಫರೀದ್ ನಗರ ಸವಾಲು ಹಾಕಿದರು. ಹಿಂದೆ ಅಧಿಕಾರದಲ್ಲಿದ್ದವರು ತೆರಿಗೆ ಏರಿಸದೆ ನಿಯಮ ಉಲ್ಲಂಘಿಸಿದ್ದಾರೆ ಎಂದು ಉಪಾಧ್ಯಕ್ಷ ಮಹಾಬಲ ಹೆಗ್ಡೆ ಆರೋಪಿಸಿದರು.
15 ದಿನಗಳಲ್ಲಿ ಬಸ್ ಬರಬೇಕು ಅಷ್ಟೇ!
ಹರೇಕಳಕ್ಕೆ ಸರ್ಕಾರಿ ಬಸ್ಸು ಹಾಕುವ ನಿಟ್ಟಿನಲ್ಲಿ ಮುಂದಿನ ವಾರ ಸ್ಟೇಟ್ಬ್ಯಾಂಕ್ನಿಂದಲೇ ಸರ್ವೇ ನಡೆಸಲಾಗುತ್ತಿದ್ದು ಹದಿನೈದು ದಿನದಲ್ಲಿ ಬಸ್ ಬರಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿ ಗಜಾನನ ಮಾಹಿತಿ ನೀಡಿದರು.ಎರಡು ವರ್ಷ ಹಿಂದೆ ಸರ್ವೇ ಆಗಿದ್ದು ಇದುವರೆಗೂ ಬಸ್ ಬಂದಿಲ್ಲ. ಗ್ರಾಮಕ್ಕೆ ಏಳು ಖಾಸಗಿ ಬಸ್ಸುಗಳ ಪರವಾನಿಗೆ ಇದ್ದರೂ ಬಸ್ಸುಗಳಿಲ್ಲ. ಎರಡು ಪುರಾತನ ಕಾಲದ ಸ್ಟೇಟ್ಬ್ಯಾಂಕ್ ಪರವಾನಿಗೆ ಇದ್ದು ಒಂದರದ್ದು ಅವಧಿ ಮುಗಿದಿದೆ. ಎರಡೂ ಬಸ್ಸುಗಳಲ್ಲಿ ಹೋಗುವಾಗ ಚುಚ್ಚುಮದ್ದು ಹಿಡಿದುಕೊಂಡು ಹೋಗಬೇಕು. ಮಳೆಗಾಲದಲ್ಲಿ ಕೊಡೆ ಹಿಡೀಬೇಕು. ವಾರಕ್ಕೆ ಮದುವೆ, ಶುಭಕಾರ್ಯ ಎಂದು ರಜೆ ಇರುತ್ತದೆ. ಮೊನ್ನೆ ಒಂದು ಬಸ್ ಬ್ರೇಕ್ಫೈಲ್ ಆಗಿದ್ದು ಜನರು ಬದುಕಿದ್ದೇ ಪುಣ್ಯ ಎಂದು ರಫೀಕ್ ಹರೇಕಳ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ದಿನಗಳ ಹಿಂದೆ ನಾವು ಎರಡೂ ಇಲಾಖೆಗಳಿಗೆ ಹೋಗಿ ಸಮಸ್ಯೆಯನ್ನು ವಿವರಿಸಿದ್ದೇವೆ. ಗ್ರಾಮಸಭೆಗೂ ಬರಬೇಕು ಎಂದು ಮನವಿ ಮಾಡಿದ್ದು ಈ ಸಂದರ್ಭ ವಿಜಯವಾಣಿ ವರದಿಗಾರ ಜೊತೆಗಿದ್ದರು. ಇಂದು ಕೆಎಸ್ಆರ್ಟಿಸಿ ಅಧಿಕಾರಿ ಬಂದಿದ್ದಾರೆ ಎಂದು ಪಂಚಾಯಿತಿ ಸದಸ್ಯ ಬಶೀರ್ ಉಂಬುದ ತಿಳಿಸಿದರೆ, ನೀವು ರಾಜಕೀಯ ಮಾಡಬೇಡಿ. ಬಸ್ಸು ಬರದಿದ್ದರೆ ಮುಂದೆ ಜೊತೆಯಾಗಿ ಇಲಾಖೆಗಳಿಗೆ ಹೋಗೋಣ ಎಂದು ಮಹಾಬಲ ಹೆಗ್ಡೆ ಹೇಳಿದರು.ಗ್ರಾಮದ ಅಭಿವೃದ್ಧಿಯಲ್ಲಿ ನಮ್ಮ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಕೆಎಸ್ಆರ್ಟಿಸಿ ಅಧಿಕಾರಿ ಹೇಳಿದಂತೆ ಹದಿನೈದು ದಿನದಲ್ಲಿ ಬಸ್ ಬರಬೇಕು ಅಷ್ಟೇ ಎಂದು ರಫೀಕ್ ಎಚ್ಚರಿಸಿದರು.
ರೌಡಿ ಪಟ್ಟಿಯಲ್ಲಿ ಫೊಟೋ ಬರಬಹುದಾ?
ಬೀಟ್ ಪೊಲೀಸ್ ವ್ಯವಸ್ಥೆ ಎಂದು ಎರಡು ವರ್ಷಗಳ ಹಿಂದೆ ಜನರಿಂದ ಫೆÇಟೋ ತೆಗೆದುಕೊಂಡಿದ್ದು ಇದುವರೆಗೂ ಸುದ್ದಿ ಇಲ್ಲ. ಮುಂದೆ ಅವರ ಫೋಟೋ ರೌಡಿ ಪಟ್ಟಿಯಲ್ಲಿ ಬರಬಹುದೇ ರಫೀಕ್ ಹರೇಕಳ ಅನುಮಾನ ವ್ಯಕ್ತಪಡಿಸಿದರು.ಅಪರಾಧ ಕೃತ್ಯ, ಗಾಂಜ ಬಗ್ಗೆ ಮಾಹಿತಿ ನೀಡಿದರೆ ಮಾಹಿತಿದಾರರ ಬಗ್ಗೆ ಆರೋಪಿಗಳಲ್ಲಿ ಏಕೆ ತಿಳಿಸುತ್ತೀರಿ ಸದಸ್ಯ ಎಂ.ಪಿ.ಮಜೀದ್ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಲ್ಲಾ ಮಾಹಿತಿ ನೀಡುವುದಿಲ್ಲ ಎಂದು ಪೊಲೀಸ್ ಸಿಬ್ಬಂದಿ ಹೇಳಿದಾಗ ಐದು ವರ್ಷ ಹಿಂದೆ ಭಂಗಿ ಎಳೆಯುವವರ ಮಾಹಿತಿ ನೀಡಿದ್ದಕ್ಕೆ ಪೊಲೀಸರು ಅವರಲ್ಲೇ ನಮ್ಮ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಗ್ರಾಮಸ್ಥರೋರ್ವರು ದೂರಿದರು.ಸ್ವಚ್ಛ ಭಾರತ ಎಂದು ಹೇಳುತ್ತೀರಿ, ಕಳೆದ ಆರು ತಿಂಗಳಿಂದ ಐಕ್ಯೂ ಅಂಗನವಾಡಿಯಲ್ಲಿ ಶೌಚಗ್ರಹವೇ ಇಲ್ಲ, ಕಾರ್ಯಕರ್ತೆ ಹಾಗೂ ಸಹಾಯಕಿ ಪಕ್ಕದ ಮನೆಯನ್ನು ಆಶ್ರಯಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
ಕೆಎಸ್ಆರ್ ಟಿಸಿ ಅಧಿಕಾರಿ ಭಾಗಿ!
ಗ್ರಾಮಕ್ಕೆ ಸರ್ಕಾರಿ ಬಸ್ಸು ಬೇಕೆನ್ನುವ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಗೆ ಯಾವುದೇ ರೀತಿಯಲ್ಲೂ ಸ್ಪಂದನೆ ಸಿಕ್ಕಿರಲಿಲ್ಲ. ಗ್ರಾಮ ಸಭೆಯಲ್ಲಾದರೂ ಆರ್.ಟಿ.ಓ. ಅಥವಾ ಕೆಎಸ್ಆರ್ ಟಿಸಿ ಪ್ರತಿನಿಧಿ ಭಾಗವಹಿಸಬೇಕು ಎನ್ನುವ ಬೇಡಿಕೆಗೂ ಸ್ಪಂದನೆ ಸಿಕ್ಕಿರಲಿಲ್ಲ. ಕಳೆದ ತಿಂಗಳು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಎರಡೂ ಇಲಾಖೆಗಳಿಗೆ ಹೋಗಿ ಸಮಸ್ಯೆಯನ್ನು ಮನದಟ್ಟು ಮಾಡಿದ್ದರು. ಇದರ ಫಲವಾಗಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗ ಮುಖ್ಯಸ್ಥ ಗಜಾನನ ಭಾಗವಹಿಸಿದ್ದರು.
ತಲೆಗೆ ಬಿದ್ದ ನಾಮಫಲಕ
ಗ್ರಾಮಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಂಚಾಯಿತಿಯ ಗ್ರಂಥಾಲಯ ಕಟ್ಟಡದಲ್ಲಿ ನೇತಾಡುತ್ತಿದ್ದ ಫಲಕ ಜಗಲಿಯಲ್ಲಿ ಕುಳಿತಿದ್ದ ಆಶಾ ಕಾರ್ಯಕರ್ತೆಯ ಹಣೆಗೆ ಬಿತ್ತು. ಅವರನ್ನು ಇತರ ಮಹಿಳೆಯರು ಒಳಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರು. ಕೆಲವು ನಿಮಿಷಗಳ ಬಳಿಕ ಕಾರ್ಯಕರ್ತೆ ಚೇತರಿಸಿಕೊಂಡರು. ಆದರೆ ಈ ವಿಚಾರ ವೇದಿಕೆಯಲ್ಲಿದ್ದವರಿಗೆ ಗೊತ್ತಾಗಲೇ ಇಲ್ಲ. ಪಂಚಾಯಿತಿ ಅಧ್ಯಕ್ಷೆ ಅನಿತ ಡಿಸೋಜ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಮನ್ವಯಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಎಸ್. ಸಂಪನ್ಮೂಲ ಅಧಿಕಾರಿಯಾಗಿದ್ದರು. ವೈದ್ಯಾಧಿಕಾರಿ ವಿದ್ಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಂಕರಿ, ಮೆಸ್ಕಾಂ ಎ.ಇ. ವಿನೋದ್, ಇಂಜಿನಿಯರ್ ನಿತಿನ್, ಪೊಲೀಸ್ ಇಲಾಖೆ ಅಧಿಕಾರಿ ಭಾಗವಹಿಸಿದ್ದರು.


