UN NETWORKS
ಉಳ್ಳಾಲ: ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಹಿಂದೆ ಖಾಸಗಿ ಬಸ್ಸಿನ ನಿರ್ವಾಹಕರು ಆಗಿದ್ದ ಕುತ್ತಾರು ಮುಂಡೋಳಿ ನಿವಾಸಿ ಗಣೇಶ್ ಕುಮಾರ್ (39) ಗುರುವಾರ ನಸುಕಿನ ಜಾವ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಣೇಶ್ ಕುಮಾರ್ ಅವರ ಕಣ್ಣನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.
ಫೆ.2 ಶನಿವಾರ ಮುನ್ನೂರು ಸುಭಾಷನಗರ ಸಮೀಪ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ಕೆಲಸ ನಿರ್ವಹಿಸುವ ಸ್ಥಳದ ಎದುರು ಮಾವಿನ ಮರದಲ್ಲಿ ಮಾವಿನಕಾಯಿ ಕೀಳಲು ಮರ ಏರಿದ್ದರು. ಆದರೆ ಮರದ ಗೆಲ್ಲು ಮುರಿದು ಗಣೇಶ್ ಕಳೆಗೆ ಇದ್ದ ಕಲ್ಲಿನ ಮೇಲೆ ಬಿದ್ದು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಲವು ವರ್ಷಗಳಿಂದ ಖಾಸಗಿ ಬಸ್ಸುಗಳಾದ ಮಹೇಶ್ ಟ್ರಾವೆಲ್ಸ್, ದುರ್ಗಾಲಕ್ಷ್ಮೀ ಟ್ರಾವೆಲ್ಸ್ ಹಾಗೂ ಇನ್ನಿತರ ಬಸ್ಸುಗಳಲ್ಲಿ ನಿರ್ವಾಹಕರಾಗಿದ್ದರು. ಕಳೆದೆರಡು ವರ್ಷಗಳಿಂದ ಸೆಂಟ್ರಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಮೃತರು ಶಾಲೆಗೆ ಹೋಗುತ್ತಿರುವ ಓರ್ವ ಪುತ್ರಿ, ಪುತ್ರ ಹಾಗೂ ಪತ್ನಿ ಮತ್ತು ತಾಯಿಯನ್ನು ಅಗಲಿದ್ದಾರೆ.
ಸಾವಿನಲ್ಲಿ ಸಾರ್ಥಕತೆ : ಆರ್ಥಿಕವಾಗಿ ಬಲಿಷ್ಠರಲ್ಲದ ಕುಟುಂಬದ ಮಂದಿ ಹೃದಯಲ್ಲಿ ಶ್ರೀಮಂತಿಕೆ ಮೆರೆದಿದ್ದಾರೆ. ಗಣೇಶ್ ಅವರು ಸಾವನ್ನಪ್ಪುತ್ತಿದ್ದಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಗಣೇಶ್ ಅವರ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.


