UN NETWORKS
ತಲಪಾಡಿ:ಸನಾತನ ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೊಂದು ವಿಶೇಷತೆಯಿದೆ. ಭೂದಾನ, ವಿದ್ಯಾದಾನ, ಕನ್ಯಾದಾನಗಳು ಪ್ರಾಚೀನ ಪರಂಪರೆಯಲ್ಲಿ ವಿಶೇಷತೆಯನ್ನು ಪಡೆದಿದ್ದರೆ, ವಾಸ್ತವದಲ್ಲಿ ರಕ್ತ ದಾನವೆನ್ನುವಂತಹುದು ಮನುಕುಲದ ಸಮಾನ ಸಾಮರಸ್ಯವನ್ನು ಸ್ಥಾಪಿಸಿ, ಸೌಹಾರ್ದತೆಯನ್ನು ಕಾಪಾಡುತ್ತದೆ. ಈ ನೆಲೆಯಲ್ಲಿ ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಶ್ಲಾಘಿಸಿದರು.
ಅವರು ಮಂಗಳೂರಿನ ಲಯನ್ಸ್ ಕ್ಲಬ್ ಹಾಗೂ ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ನಡೆದ ‘ರಕ್ತದಾನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ನ ಜಿಲ್ಲಾ ಗವರ್ನರ್ ಲಯನ್ ಕೆ. ದೇವದಾಸ್ ಭಂಡಾರಿ ವಿದ್ಯಾರ್ಥಿಗಳ ರಕ್ತದಾನದ ಮನೋಸ್ಥೈರ್ಯ ಹಾಗೂ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಲಯನ್ಸ್ ನ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳಾದ ಲಯನ್ಸ್ ನಾಗೇಶ್ ಕುಮಾರ್ ಅವರು ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿ ಎಂದು ಅಭಿನಂದಿಸಿದರು.
ವೇದಿಕೆಯಲ್ಲಿ ವಿದ್ಯಾನಿಕೇತನದ ಆಡಳಿತಾಧಿಕಾರಿ ವಿವೇಕ ತಂತ್ರಿ, ಸಮೂಹ ಸಂಸ್ಥೆಗಳ ಪ್ರಾಂಶುಪಾಲರುಗಳಾದ ಸುಷ್ಮಾ ದಿನಕರ್, ಲತಾಂಜಲಿ ರೈ, ‘ಅಷ್ಟಾವಧಾನಿ’ ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಲಯನೆಸ್ ಜ್ಯೋತಿ ಎಸ್.ಶೆಟ್ಟಿ, ಲಯನೆಸ್ ಗಾಯತ್ರಿ ರಾವ್, ಶ್ರೀಧರ ಶೆಟ್ಟಿ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಸೂರಜ್ ಎಂ.ದೇವಾಡಿಗ ಉಪಸ್ಥಿತರಿದ್ದರು. ಕು.ಕೀರ್ತಿ ಕಿಣಿ ಸ್ವಾಗತಿಸಿದರು. ಕು. ಕಾವ್ಯ ನಿರೂಪಿಸಿದರು. ಅಮಿತ ಆಳ್ವ ವ0ದಿಸಿದರು.


