UN NETWORKS
ಕೊಣಾಜೆ: ನಮ್ಮಲ್ಲಿ ನಿರ್ಮಲವಾದ ಮನಸ್ಸು ಇದ್ದರೆ ನಮ್ಮ ಸಮಾಜವನ್ನು ಕೂಡಾ ನಾವು ಸ್ವಚ್ಚವಾಗಿಡಲು ಪ್ರಯತ್ನಿಸುತ್ತೇವೆ. ಸ್ವಚ್ಚತೆಯ ವಿಷಯದಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಜಾಗೃತಿ ಕಾರ್ಯ ನಡೆಯುತ್ತಿದ್ದು ನಾವೆಲ್ಲರೂ ಜಾಗೃತರಾಗಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿ ಮುನ್ನಡೆಯಬೇಕು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ಕೊಣಾಜೆ ಗ್ರಾಮದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರು, ಕೊಣಾಜೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್.ರಾವ್ ಅವರು ಮಾತನಾಡಿ, ಕೊಣಾಜೆ ಗ್ರಾಮದಲ್ಲಿ ಈಗಾಗಲೇ ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಹಲವಾರು ಸಂಘಟನೆಗಳು ಕೈ ಜೋಡಿಸಿವೆ ಎಂದು ಹೇಳಿದರು.
ಕಾರ್ಯಕ್ರಮಲ್ಲಿ ಪಂಚಾಯಿತಿ ಸದಸ್ಯರಾದ ವೇದಾವತಿ ಗಟ್ಟಿ, ಶೋಭಾ, ಗೀತಾ, ಮುತ್ತು ಶೆಟ್ಟಿ, ಹರಿಶ್ಚಂದ್ರ, ದಯಾನಂದ ಗಟ್ಟಿ, ಪಂಚಾಯಿತಿ ಕಾರ್ಯದರ್ಶಿ ಶಾಲಿನಿ, ಪಂಚಾಯಿತಿ ಸಿಬ್ಬಂದಿಗಳಾದ ಗುಲಾಬಿ, ಭರತ್, ಸ್ಥಳೀಯ ಮುಖಂಡರಾದ ಇಕ್ಬಾಲ್, ನಝೀರ್, ಹಸೈನಾರ್, ಸುಧಾಕರ ಕಾನ, ಯತೀಶ್ ನಡುಪದವು, ಪ್ರಾಧ್ಯಾಪಕರಾದ ಸತೀಶ್ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸ್ವಚ್ಚತಾ ಕಾರ್ಯದಲ್ಲಿ ಕೊಣಾಜೆ ವೈ.ಎಫ್.ಸಿ, ಮಂಗಳ ಗ್ರಾಮೀಣ ಯುವಕ ಸಂಘ ಹಾಗೂ ಶ್ರೀ ಮಹಾಕಾಳಿ ಸೇವಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.


