UN NETWORKS
ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಅನ್ನು ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕಟೀಲ್ ಜೊತೆಗೆ ಡಿವೈಎಫ್ ಐ ಕಾರ್ಯಕರ್ತರು ಸೇರಿಕೊಂಡು ಉದ್ಘಾಟಿಸಿದರು.ಕೇಳುವಾಗ ಇದೊಂದು ಅಚ್ಚರಿಯೇ ಹೌದು. ಆದರೆ ವಾಸ್ತವವಾಗಿ ಕಾಮಗಾರಿ ಮುಗಿಸುವ ದಿನಾಂಕ ನೀಡಿರುವ ಸಂಸದರು ತಪ್ಪಿದ್ದಾರೆ ಎಂದು ಆರೋಪಿಸಿ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಸೇತುವೆಯನ್ನು ಮೂವರ ಮುಖವಾಡವನ್ನು ಧರಿಸಿ ಅಣುಕು ಉದ್ಘಾಟನೆ ನಡೆಸುವ ಮೂಲಕ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಡಿವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ, ತಲಪಾಡಿಯಿಂದ ಕುಂದಾಪುರದವರೆಗೆ ಹೆದ್ದಾರಿ ದುರಸ್ತಿಗೊಳಿಸಲು ಅಸಾಧ್ಯವಾಗಿದೆ. ನ,.1, ಡಿ.30 ಎಂದು ನಳಿನ್ ಕಟೀಲ್ ದಿನಕ್ಕೊಂದು ಹೇಳಿಕೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಅನ್ನುತ್ತಾ ಸುಳ್ಳು ಹೇಳಿಕೆಗಳನ್ನೇ ನೀಡುತ್ತಲೇ ಬಂದಿದ್ದಾರೆ. ಫೆ.28 ರ ಒಳಗೆ ಸಂಚಾರ ಮುಕ್ತ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪು ಹಾದಿಗೆ ಕೊಂಡೊಯುವ ಪ್ರಯತ್ನವಾಗಿದೆ. ಜನರಲ್ಲಿನ ಆಕ್ರೋಶ ಕಡಿಮೆ ಗೊಳಿಸುವ ಸಲುವಾಗಿ ಸುಳ್ಳು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈವರೆಗೂ ಮುಕ್ತಾಯ ಮಾಡಲು ಸಾಧ್ಯವಾಗಿಲ್ಲ. ಅಮಾಯಕ ವಾಹನ ಸವಾರರು ಪ್ರಾಣಹಾನಿಯಾದ ಘಟನೆ ದಿನನಿತ್ಯ ಸಂಭವಿಸುತ್ತಲೇ ಇದೆ.
ಜನರಿಗೆ ಸರಿಯಾಗಿ ಓಡಾಟ ನಡೆಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಸಚಿವ ನಿತಿನ್ ಗಡ್ಕರಿ ಮತ್ತು ನಳಿನ್ ಕಟೀಲ್ ಅವರ ಮುಖವಾಡಗಳನ್ನು ಧರಿಸಿ ಅಣುಕು ಉದ್ಘಾಟನೆ ನೆರವೇರಿಸಲಾಗಿದೆ. 21 ವರ್ಷ ಪಡೆದ ಬೋಗಿಬಿಲ್ ಸೇತುವೆಯನ್ನು ಮುಗಿಸಿದ ಮೋದಿ ಪೋಸ್ ನೀಡುತ್ತಾರೆ. ಆದರೆ ಅದೇ 11 ವರ್ಷವಾದರೂ ತೊಕ್ಕೊಟ್ಟು ಸೇತುವೆ ಪೂರ್ಣಗೊಳಿಸಲು ಅಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ತೊಕ್ಕೊಟ್ಟು, ಪಂಪ್ ವೆಲ್ ಸೇತುವೆ ಕಾಮಗಾರಿ 21 ವರ್ಷ ಆಗುವ ಮೂಲಕ ಗಿನ್ನೆಸ್ ದಾಖಲೆ ಪಡೆಯಲಿದೆ. ಅಚ್ಚೇ ದಿನ್ ಬಿಡಿ ಕನಿಷ್ಠ ಅಚ್ಚೇ ಸಡಕ್ ನೀಡಲು ಅಸಾಧ್ಯವಾಗಿದೆ. ವಿಶ್ವದ ಎತ್ತರದ ಮೂರ್ತಿ ಎಂದು ಸರ್ದಾರ್ ವಲ್ಲಭಬಾಯ್ ಪಟೇಲ್ ಮೂರ್ತಿಯನ್ನು ನೀಡಲಾದರೂ, ಒಂದು ಕಿ.ಮೀ ಉದ್ದ ದ ತೊಕ್ಕೊಟ್ಟು ಸೇತುವೆ ನಿರ್ಮಿಸಲು ಅಸಾಧ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ಸರಿಯಾದ ಉತ್ತರವನ್ನು ನೀಡಲಿದ್ದಾರೆ. ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಹಂತಹಂತವಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ಫಾರುಕ್ ಉಳ್ಳಾಲ್ ಮಾತನಾಡಿ , ಬಿಜೆಪಿ ಪಕ್ಷದ ಜನವಿರೋಧಿ ಕೃತ್ಯಗಳನ್ನು ಜನರಿಗೆ ತಿಳಿಸುವಂತಹ ಬಹಿರಂಗ ಪ್ರದರ್ಶನವಾಗಿದೆ. ಕಟೀಲ್ ಗೆ ಇಚ್ಛಾಶಕ್ತಿ ಇದ್ದಲ್ಲಿ ಕಾಮಗಾರಿ ಮುಗಿಯುತಿತ್ತು. ವಾಸ್ತವ ನವಯುಗ ಕಂಪೆನಿಯಿಂದ ಸಚಿವ ನಿತಿನ್ ಗಡ್ಕರಿ, ಸಂಸದ ಕಟೀಲ್ ಪಡೆದ ಲಂಚದ ಆಮಿಷದಿಂದ ಕಾಮಗಾರಿ ವಿಳಂಬವಾಗಿದೆ. ಮೂರು ಮುಖಗಳು ತ್ರೀ ಈಡಿಯಟ್ಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ನಳಿನ್ ಅವರಿಗೆ ಜಿಲ್ಲೆಗೆ ಬರಲು ಹಕ್ಕಿಲ್ಲ ಅನ್ನುವ ಜಾಗೃತಿಯನ್ನು ಮಾಡುತ್ತೇವೆ. ಇಂಗ್ಲೀಷ್, ಹಿಂದಿ ಭಾಷೆಯೂ ಬರುವುದಿಲ್ಲ ತಿಂಗಳಲ್ಲಿ ಎಷ್ಟು ದಿನಗಳು ಎಂಬುದೂ ಸಂಸದರಿಗೆ ಗೊತ್ತಿಲ್ಲ. ತೊಕ್ಕೊಟ್ಟು ಪಂಪ್ ವೆಲ್ ನಲ್ಲಿ ಇಕ್ಕಟ್ಟಿನಲ್ಲಿ ಸಾಗಬೇಕಾದ ದುರ್ದೈವ ಎಲ್ಲರಿಗೂ ಒದಗಿದೆ. ಇನ್ನೂ ಕಾಮಗಾರಿ ಮುಗಿಯದಿದ್ದಲ್ಲಿ ಸಂಸದರ ಮನೆಗೆ ಧರಣಿ ಹಾಕುತ್ತೇವೆ. ಅಲ್ಲದೆ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಕಾಲಿಡದ ರೀತಿಯಲ್ಲಿ ಪ್ರತಿಬಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಖ್ ತಲಪಾಡಿ ಮಾತನಾಡಿ, ಭರವಸೆ ಕೊಡುವುದೇ ಒಂದು ಸಾಧನೆ ಅನ್ನುವುದು ಅವರ ಮನದಲ್ಲಿದೆ. 10 ವರ್ಷಗಳ ಆಡಳಿತ ಪೂರೈಸುವುದರ ಜೊತೆಗೆ ಅಷ್ಟೇ ಕಾಲ ಫ್ಲೈಓವರ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಸಾಧ್ಯವಾಗಿದೆ. ದೇಶದಲ್ಲಿ ಬೆಂಕಿ ಹಚ್ಚುವುದರಲ್ಲೇ ಕಾಲ ಕಳೆದ ಮತ್ತು ಅಣುಕು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟ ಏಕೈಕ ಸಂಸದರ ಖ್ಯಾತಿ ಪಡೆದುಕೊಂಡಿದ್ದಾರೆ. ಭರವಸೆ ಕೊಡುವಾಗ ತಾವು ಯಾವ ಸ್ಥಾನದಲ್ಲಿರುವುದಾಗಿ ಗೊತ್ತಿಲ್ಲ. ಬುದ್ಧಿವಂತರ ಜಿಲ್ಲೆಯ ಸಂಸದರು ಎಂದು ಹೇಳಲು ನಾಚಿಕೆಯಾಗುತ್ತಿದೆ. ಸಂಸದರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೀಟು ನೀಡಿದಲ್ಲಿ ರಾತ್ರಿಯಿಡೀ ದುಡಿದು ಸೋಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ವಿದ್ಯಾರ್ಥಿಗಳು, ಸಾರ್ವಜನಿಕರು ತೊಕ್ಕೊಟ್ಟು ಪಂಪ್ ವೆಲ್ ಪ್ರದೇಶದಲ್ಲಿ ದಿನನಿತ್ಯ ತೊಂದರೆಯನ್ನು ಅನುಭವಿಸುತ್ತಲೇ ಇದ್ದಾರೆ. ಸರಿಯಾದ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ತಲುಪಲಾಗುತ್ತಿಲ್ಲ. ಎರಡು ಕಡೆಯಲ್ಲಿ ಬ್ಲಾಕ್ ಆಗಿ, ವಾಹನ ಸವಾರರಿಗೆ ತೆರಳಲು ಅಸಾಧ್ಯವಾಗುತ್ತಲೇ ಇದೆ. ಮುಂದೆ ದೊಡ್ಡ ಮಟ್ಟಿನಲ್ಲಿ ಜನಸಮೂಹ ಎದ್ದು ಹೋರಾಡುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ನವೀನ್ ಕೊಂಚಾಡಿ , ಜಿಲ್ಲಾ ಜತೆ ಕಾರ್ಯದರ್ಶಿ ನಿತಿನ್ ಕುತ್ತಾರ್, , ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಜಯಂತ್ ನಾಯ್ಕ್ , ಪದ್ಮಾವತಿ. ಯಸ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಗಡಿನಾಡು ರಕ್ಷಣಾ ವೇದಿಕೆ ಸಿದ್ದೀಖ್ ತಲಪಾಡಿ, ರಫೀಕ್ ಹರೇಕಳ, ಇಬ್ರಾಹಿಂ ಮದಕ, ಮಹಾಬಲ ಟಿ. ದೆಪ್ಪೆಲಿಮಾರ್, ಹರೇಕಳ ಗ್ರಾ.ಪಂ ಸದಸ್ಯ ಅಶ್ರಫ್ ಹರೇಕಳ, ಹನೀಫ್ ಹರೇಕಳ, ಮಿಥುನ್ ಕುತ್ತಾರ್ ಉಪಸ್ಥಿತರಿದ್ದರು.


