UN NETWORKS
ಕೊಣಾಜೆ: ನಮ್ಮ ದೇಶದಲ್ಲಿರುವ ಧರ್ಮ ಜಾಗೃತಿ, ಧಾರ್ಮಿಕ ಚಿಂತನೆಗಳು ಬೇರೆ ಯಾವ ದೇಶಗಳಲ್ಲೂ ಕಾಣಲು ಸಾಧ್ಯವಿಲ್ಲ. ಧಾರ್ಮಿಕ ಚಿಂತನೆಗಳು ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಬೆಳೆಸುವುದರೊಂದಿಗೆ ಉತ್ತಮ ಸಮಾಜ, ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಆವರು ಹೇಳಿದರು.
ಅವರು ಕೊಣಾಜೆ, ಮುಲಾರ ಬೊಲ್ಯ ಶ್ರೀ ಉಳ್ಳಾಲ್ತಿ ಕೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ದೇಶಕ್ಕೆ ಎಷ್ಟೋ ಭಾರಿ ಜಾಗತಿಕ ದಾಳಿಯಾದರೂ ಭಾರತವು ಸದೃಢವಾಗಿ ನೆಲೆನಿಲ್ಲಲು ಇಲ್ಲಿಯ ಧಾರ್ಮಿಕ ಚಿಂತನೆಗಳು ಗಟ್ಟಿಯಾಗಿರುವುದೇ ಕಾರಣವಾಗಿದೆ. ನಮ್ಮ ತುಳುನಾಡಿನಲ್ಲಿ ಅದೆಷ್ಟೋ ವರ್ಷಗಳಿಂದ ನಮ್ಮ ಹಿರಿಯರ ಕಾಲದಿಂದ ಆರಾಧಿಸಿಕೊಂಡು ಬಂದಿರುವ ದೈವ ದೇವಾಸ್ಥಾನಗಳು ಇವೆ. ಇದು ನಮ್ಮಲ್ಲಿ ನಂಬಿಕೆ ವಿಶ್ವಾಸವನ್ನು ಬೆಳೆಸುವುದರೊಂದಿಗೆ ಧಾರ್ಮಿಕ ಶಕ್ತಿಯನ್ನು ಬೆಳೆಸಿದೆ. ಇದೀಗ ನೂತನವಾಗಿ ನಿರ್ಮಾಣಗೊಂಡ ಉಳ್ಳಾಲ್ತಿ ಸಾನಿಧ್ಯವು ಕೂಡಾ ಪವಿತ್ರವಾದ ಕ್ಷೇತ್ರವಾಗಿದ್ದು, ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಊರು ಕೂಡಾ ಅಭಿವೃದ್ಧಿಯಾಗಲಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅರ್ಚಕ ಸುದರ್ಶನ ಭಟ್ ಅವರು, ಉಳ್ಳಾಲ್ತಿ ಕ್ಷೇತ್ರವು ಕಾರಣಿಕದ ಜಾಗವಾಗಿದೆ. ಈಗಾಗಲೇ ದಿನನಿತ್ಯ ಈ ಊರಿನ ನೂರಾರು ಯುವಕರ ಶ್ರಮದಾನದೊಂದಿಗೆ ಕ್ಷೇತ್ರದ ಕೆಲಸವು ನಡೆಯುತ್ತಿದೆ. ಅದೇ ರೀತಿ ಬ್ರಹ್ಮಕಲಶೋತ್ಸವು ಕೂಡಾ ಎಲ್ಲರ ಸಹಕಾರದೊಂದಿಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಬಿ.ಸುರೇಶ್ ರೈ ಕಲ್ಲಿಮಾರ್ ಗುತ್ತು ಅವರು ವಹಿಸಿದ್ದರು.
ರವೀಂದ್ರ ರೈ ಹರೇಕಳ ಅವರು ಕ್ಷೇತ್ರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಸಾದ್ ರೈ ಕಲ್ಲಿಮಾರ್ ಅವರು ಸ್ವಾಗತಿದರು. ಕೊಶಾಧಿಕಾರಿ ರವೀಂದ್ರ ಬಂಗೇರ ವಂದಿಸಿದರು. ವಿಜಯಲಕ್ಷ್ಮೀ ಪಿ. ರೈ ವಂದಿಸಿದರು.


