UN NETWORKS
ಉಳ್ಳಾಲ: ಕೆಲಸ ಮಾಡುವವರು ಬೇರೆ, ಹೆಸರು ಗಳಿಸುವವರು ಬೇರೆ. ಸೋಮೇಶ್ವರ ಬೀಚ್ನಿಂದ ಸಾರಸ್ವತ ಕಾಲನಿ ಆಗಿ ಉಳ್ಳಾಲಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ವಿಶ್ವ ಬ್ಯಾಂಕ್ ನಿಂದ ಶೇ.80 ಸಾಲ ಮತ್ತು ಶೇ.20 ರಾಜ್ಯ ಸರಕಾರದ ಅನುದಾನವನ್ನು ಒದಗಿಸಿ ಕಾಮಗಾರಿ ನಡೆಸಲಾಗುತ್ತಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
ಉಳ್ಳಾಲ ಬೀಚ್ನಿಂದ ಅಬ್ಬಕ್ಕ ಸರ್ಕಲ್ ಆಗಿ ಪ್ಯಾರೀಸ್ ಜಂಕ್ಷನ್, ದರ್ಗಾ, ಮೇಲಂಗಡಿ, ಅಕ್ಕರೆಕೆರೆ, ಸಂತ ಸೆಬೆಸ್ತಿಯನ್ನರ ಚರ್ಚ್ ಮೂಲಕ ತೊಕ್ಕೊಟ್ಟು ಒಳಪೇಟೆ ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಂಕ್ರೀಟಿಕರಣದ ಮೊದಲ ಹಂತದ ಕಾಮಗಾರಿಯ ಉದ್ಘಾಟನೆಯನ್ನು ಉಳ್ಳಾಲ ಬೀಚ್ ಸಮೀಪ ನಡೆಸಿದರು. ಪ್ರವಾಸಿಗರನ್ನು ಉಳ್ಳಾಲ ಪ್ರದೇಶಕ್ಕೆ ಆಕರ್ಷಿಸುವ ಉದ್ದೇಶದೊಂದಿಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜನಪ್ರತಿನಿಧಿಗಳು ಸೇರಿಕೊಂಡು ರೂಪಿಸಿದ್ದೇವೆ. ಈ ವರ್ಷದ ಅಬ್ಬಕ್ಕ ಉತ್ಸವವನ್ನು ಬೀಚ್ ಉತ್ಸವದ ಜೊತೆಗೆ ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಲಾಗಿದೆ. ಸೋಮೇಶ್ವರ ಬೀಚ್ನಿಂದ ಸಾರಸ್ವತ ಕಾಲನಿ ಆಗಿ ಉಳ್ಳಾಲಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಯನ್ನು ನಡೆಸಲು ಆರಂಭಿಸಲಾಗಿದೆ. ಇಲ್ಲಿ ಕೆಲಸ ಮಾಡುವವರು ಬೇರೆ, ಹೆಸರು ಗಳಿಸುವವರು ಬೇರೆಯವರಾಗಿದ್ದಾರೆ. ವಿಶ್ವ ಬ್ಯಾಂಕ್ ನಿಂದ ಶೇ.80 ಸಾಲ ಮತ್ತು ಶೇ.20 ರಾಜ್ಯ ಸರಕಾರದ ಅನುದಾನದಿಂದ ರಚಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆಯೇ ರಸ್ತೆ ಪ್ರಸ್ತಾವನೆ ಮಾಡಿರುವಂತಹ ದಾಖಲೆ ಪತ್ರ ಲೋಕೋಪಯೋಗಿ ಇಲಾಖೆಯಲ್ಲಿ ಇದೆ. ಬೇರೆಯವರು ಅನುದಾನ ಬಿಡುಗಡೆ ಮಾಡಿದ್ದೇ ಆದಲ್ಲಿ, ದಯವಿಟ್ಟು ಪ್ರಸ್ತಾವನೆ ಮಾಡಿರುವ ದಾಖಲೆ ಪತ್ರವನ್ನು ಬಹಿರಂಗಪಡಿಸಲಿ . ಕೆಲಸ ಮಾಡದೇ ಪ್ರಚಾರ ನಡೆಸಲು ಮುಂದಾಗುತ್ತಿರುವುದು ಸರಿಯಲ್ಲ. ಕಾರ್ಯಕರ್ತರು ಗೊಂದಲ ಪಡಬೇಕಾಗಿಲ್ಲ ಎಂದರು.
ಬಸ್ಸು, ವಾಹನಗಳು ಓಡುವ ಉದ್ದೇಶದಿಂದ ಪ್ರಥಮ ಹಂತದ ಕಾಮಗಾರಿ ತುರಾತುರಿಯಲ್ಲಿ ನಡೆಸಲಾಗಿದೆ. ಅಬ್ಬಕ್ಕ ಸರ್ಕಲ್ ನಿಂದ ಕೋಡಿ ಪ್ರದೇಶಕ್ಕೆ ಸಿಆರ್ ಎಫ್ ಯೋಜನೆಯಡಿ 5 ಕೋಟಿ ಅನುದಾನ ಬಿಡುಗಡೆಯಾಗಿದೆ. ನಗರೋತ್ಥಾನ ಯೋಜನೆಯಡಿ ರೂ.25 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದೆ. ಬಾಕಿಯಾಗಿರುವ ಯುಜಿಡಿ ಕಾಮಗಾರಿಗೆ ರೂ.24 ಕೋಟಿ ಅನುದಾನ ಮತ್ತೆ ಬಿಡುಗಡೆಗೊಳಿಸಲಾಗಿದೆ. ಶೀಘ್ರವೇ ಮತ್ತೆ ಕಾಮಗಾರಿ ಆರಂಭವಾಗಿ ಮೂರು ತಿಂಗಳ ಒಳಗೆ ಸಂಪೂರ್ಣವಾಗಲಿದೆ. ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯಾಗಿ ಅಡ್ಯಾರ್ ಸೇತುವೆಗಾಗಿ ರೂ.400 ಕೋಟಿ ಅನುದಾನದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಮಂಗಳೂರು ಅಭಿವೃದ್ಧಿಯ ನೇತಾರ ಶ್ರೀನಿವಾಸ ಮಲ್ಯ ಇವರ ಮೊಮ್ಮಗ ವಿಠಲದಾಸ್ ಮಲ್ಯ ರಸ್ತೆ ಉದ್ಘಾಟಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಕಾಂಗ್ರೆಸ್ ರಾಜ್ಯ ಚುನಾವಣಾ ಸಂಚಾಲಕ ಈಶ್ವರ್ ಉಳ್ಳಾಲ್, ಉಳ್ಳಾಲ ಲಕ್ಷ್ಮೀನರಸಿಂಹ ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಕರ ಕಿಣಿ, ಮೊಗವೀರ ಸಮಾಜದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ಶ್ರೀ ಸೋಮನಾಥೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಭಗವತಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಶ್ ಭಟ್ನಗರ, ನಗರಸಭೆ ಸದಸ್ಯರುಗಳಾದ ಐಯೂಬ್ ಮಂಚಿಲ, ಬಶೀರ್ ಕೋಟೆಪುರ, ವೀಣಾ ಶಾಮತಿ ಡಿಸೋಜ, ಇಸ್ಮಾಯಿಲ್, ಅಶ್ರಫ್ ಅಂಬಟ್ಟಡಿ, ರವಿಚಂದ್ರ ಗಟ್ಟಿ, ಬಾಝಿಲ್ ಡಿಸೋಜ, ಸಪ್ನಾ ಹರೀಶ್ ಹಾಗೂ ದೇವಕಿ ರಾಘವ, ಅಝೀಝ್ ದೋಟ, ಅಶ್ರಫ್ ಮಾಸ್ತಿಕಟ್ಟೆ, ಅಬ್ದುಲ್ ಜಬ್ಬಾರ್, ಅಬ್ದುಲ್ ಅಝೀಝ್ ಹಕ್, ಇಂಜಿನಿಯರ್ ಇಬ್ರಾಹಿಂ ಹೆಜಮಾಡಿ, ಅನ್ಸಾರ್, ನಗರಸಭೆ ಮಾಜಿ ಸದಸ್ಯ ಇಸ್ಮಾಯಿಲ್ ಪೊಡಿಮೋನು, ಅಬ್ಬಾಸ್ ಕೋಟೆಪುರ, ಹಮೀದ್ ಕೋಡಿ, ರವಿ ಗಾಂಧಿನಗರ, ವಾರಿಜಾ ಬಾಬು ಸುವರ್ಣ, ಸತ್ಯವತಿ.ಜೆ.ಕೋಟ್ಯಾನ್, ರಾಜೇಶ್ ಬಂಡಸಾಲೆ, ರವೀಂದ್ರ.ಜಿಮ ಅಫ್ರೀದಿ ಹುಸೈನ್ ಕೊಟ್ಟಾರ ಉಪಸ್ಥಿತರಿದ್ದರು.
ಅಹಮ್ಮದ್ ಬಾವ ಕೊಟ್ಟಾರ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸದಸ್ಯ ಐಯೂಬ್ ಮಂಚಿಲ ವಂದಿಸಿದರು.


