UN NETWORKS
ಉಳ್ಳಾಲ: ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಂತಹ ವ್ಯವಸ್ಥೆ ದಕ್ಷಿಣದಲ್ಲಿಅಪರೂಪವಾಗಿದ್ದು ಕನಿಷ್ಠ ಐನೂರು ಬೆಡ್ ವ್ಯವಸ್ಥೆ ಇದ್ದರೂ ಕಾಲೇಜು, ಆಸ್ಪತ್ರೆ ಮಾಡುತ್ತೇವೆ ಎಂದರೂ ಸರಕಾರ ಅದಕ್ಕೆ ಅವಕಾಶ ಕೊಡುತ್ತದೆ. ಹಾಗಿದ್ದರೂ ಕಣಚೂರು ಸಂಸ್ಥೆಯ ಅಧ್ಯಕ್ಷರು ಸಾವಿರದ ಇನ್ನೂರು ಬೆಡ್ಗಳಿರುವ ಸುಸಜ್ಜಿತ ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಿಸಿದ್ದು ನಿಜಕ್ಕೂ ಇಲ್ಲಿ ಶಿಕ್ಷಣ ಪಡೆಯುವ ವೈದ್ಯಕೀಯ ಸೇರಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳ ಅದೃಷ್ಟ ಎಂದು ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ದೇರಳಕಟ್ಟೆಯ ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಫಿ, ನರ್ಸಿಂಗ್ ಸೈನ್ಸಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್ನ ನೂತನ ಶೈಕ್ಷಣಿಕ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.ನಾನು ರಾಜಕೀಯ ಸೇರಬೇಕು ಎಂದು ಬಯಸಿದ ವ್ಯಕ್ತಿ ಅಲ್ಲ. ನನಗೆ ಅದರ ಬಗ್ಗೆ ಒಲವು ಕೂಡಾ ಇರಲಿಲ್ಲ. ರಾಜಕೀಯಕ್ಕೆ ಬಂದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಜನಬೆಂಬಲ ಪ್ರೀತಿ ವಿಶ್ವಾಸ ಸಿಕ್ಕಿರುವುದು ನನ್ನ ಅದೃಷ್ಟ. ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಸುವ ಜನಪ್ರತಿನಿಧಿಯಾಗಿ ನನಗೆ ಹೆಮ್ಮೆ ಇದೆ. ನಾನು ಗಳಿಸಿದ ಪ್ರೀತಿ ವಿಶ್ವಾಸ ಉಳಿಸುತ್ತೇನೆ. ಹಾಗೆಯೇ ಎರಡೂವರೆ ಲಕ್ಷ ಚದರ ಅಡಿಯ ಕಾಲೇಜು ಬ್ಲಾಕ್ ನಾನು ಇದುವರೆಗೆ ಉದ್ಘಾಟಿಸಿಲ್ಲ. ಇವತ್ತು ಆ ಬಾಗ್ಯವೂ ನನ್ನದಾಗಿದೆ ಎಂದರು.
ಕಣಚೂರು ಸಂಸ್ಥೆಯನ್ನು ನಿರ್ದೇಶಕ ಅಬ್ದುಲ್ ರಹ್ಮಾನ್ ಅವರು ಈ ಕಾಲೇಜನ್ನು ಯಶಸ್ವಿಯಾಗಿ ಮುನ್ನಡೆಯಬೇಕು. ಸಾಧನೆಗೆ ಮನಸ್ಸು ಮಾಡಬೇಕು. ಆರೋಗ್ಯ ಕೆಟ್ಟರೆ ಜನರು ದೇವರ ಬಳಿಕ ವೈದ್ಯರನ್ನು ನಂಬುತ್ತಾರೆ. ವಿದ್ಯಾರ್ಥಿಗಳನ್ನು ವೈದ್ಯರನ್ನಾಗಿ ಮಾಡುವ ನಿಟ್ಟಿನಲ್ಲಿ ಪೋಷಕರು ಭರವಸೆ ಇಟ್ಟು ಕಾಲೇಜಿಗೆ ಕಳುಹಿಸುತ್ತಾರೆ. ಆ ನಂಬಿಕೆಯನ್ನು ವಿದ್ಯಾರ್ಥಿಗಳು ಉಳಿಸಬೇಕು ಎಂದರು.
ನನಗೆ ಕಲಿಯಲು ಸಾಕಷ್ಟು ಅವಕಾಶಗಳಿದ್ದರೂ ಪೋಷಕರ ಸಂಪೂರ್ಣ ಸಹಕಾರ ಇತ್ತು. ಆರ್ಥಿಕ ತೊಂದರೆ ಇಲ್ಲದಿದ್ದರೂ, ಯಾವುದೇ ಕೋರ್ಸ್ ಮಾಡುವ ಅವಕಾಶಗಳಿದ್ದರೂ ಬಾಲ್ಯದಲ್ಲಿ ಸ್ನೇಹಿತರ ಸಹವಾಸದಿಂದ ವಿದ್ಯೆಯ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮ ಆ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ. ಜನಪ್ರತಿನಿಧಿ, ಶಾಸಕ, ಸಚಿವ ಸ್ಥಾನಕ್ಕಿಂತಲೂ ವಿದ್ಯೆ ಪವರ್ ಫುಲ್ ಎಂಬುದನ್ನು ಅರಿತುಕೊಂಡಿದ್ದೇನೆ. ನನ್ನ ಅನುಭವನದ ನೆಲೆಯಲ್ಲಿ ವಿದ್ಯೆ ಅತಿ ಮುಖ್ಯ ಎಂದರು.
ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತ ನಿರ್ದೇಶಕ ಹಾಜಿ ಯು.ಕೆ. ಮೋನು ಪ್ರಾಸ್ತಾವಿಕ ಮಾತುಗಳನ್ನಾಡಿ ಜಮೀರ್ ಅಹ್ಮದ್ ಖಾನ್ ಅವರಿಗೆ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ ನಿಜಕ್ಕೂ ಮೆಚ್ಚಬೇಕಿದೆ. ನಾನು ಕಿಂಚಿತ್ತಾದರೂ ಎಲ್ಲ ಸಮಾಜಕ್ಕೆ ಸಹಾಯ ಮಾಡಿದ್ದೇನೆ. ನಿಮ್ಮ ಜೊತೆ ನಾನು ಸದಾ ಕಾಲ ಇದ್ದು ಸಮಾಜಕ್ಕೆ ನಿರಂತರ ಸಹಾಯ ಮಾಡುತ್ತೇನೆ ಎಂದರು.ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹ್ಮಾನ್, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಪ್ರೊ. ಡಾ. ಇಫ್ತಿಕಾರ್ ಅಲಿ, ಕಣಚೂರು ಮೆಡಿಕಲ್ ಕಾಲೇಜು ಡೀನ್ ಡಾ. ಎಚ್. ಎ. ವಿರೂಪಾಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ, ಜೆಡಿಎಸ್ ಮುಖಂಡ ಎ.ಎ. ಹೈದರ್ ಪರ್ತಿಪ್ಪಾಡಿ, ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಎನ್. ಎಸ್. ಕರೀಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಸ್ವಾಗತಿಸಿದರು.
ಮುಸಲ್ಮಾನ ಮೆಡಿಕಲ್ ಕಾಲೇಜು’
ವೈದ್ಯಕೀಯ ಕಾಲೇಜಿಗೆ ಅವಕಾಶ ಕೇಳಿದ್ದ ಕಾಲೇಜುಗಳಲ್ಲಿ ಸರಕಾರದಿಂದ 46ಕಾಲೇಜು ತಿರಸ್ಕೃತಗೊಂಡಿದ್ದರೂ ಏಕಮಾತ್ರ ಕಣಚೂರು ವೈದ್ಯಕೀಯ ಕಾಲೇಜಿಗೆ ಅವಕಾಶ ಸಿಕ್ಕಿದ್ದುನಿಜಕ್ಕೂ ಸಂತಸದ ವಿಷಯ. ನನಗೂ ಒಂದು ಕಾಲೇಜು ಕಟ್ಟುವ ಕನಸಿದೆ. ವಿದ್ಯೆಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ಇನ್ನಷ್ಟು ಎತ್ತರಕ್ಕೆ ಏರಬೇಕು ಎಂಬ ನೆಲೆಯಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ದೊಡ್ಡ ಮಟ್ಟದಲ್ಲಿ “ಮುಸಲ್ಮಾನ ಮೆಡಿಕಲ್ ಕಾಲೇಜು’ ಆರಂಭಿಸುವ ಯೋಜನೆ ಹಾಕಿಕೊಂಡಿದ್ದೇನೆ. ಅದನ್ನು ಮಾದರಿಯನ್ನಾಗಿ ಮಾಡುವ ಕನಸಿದೆ.
ಜಮೀರ್ ಅಹ್ಮದ್ ಖಾನ್
ವಕ್ಪ್ ಸಚಿವ


