ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕುತ್ತಾರು: ಮದರಸ ಕಟ್ಟಡದ ಹಿಂಭಾಗದ ವಸತಿ ಪ್ರದೇಶಕ್ಕೆ ಮುಖಮಾಡಿ ಸಿಸಿಟಿವಿ ಅಳವಡಿಸಿರುವುದರ ವಿರುದ್ಧ ಕೆರಳಿದ ಸ್ಥಳೀಯರು ಪ್ರತಿಭಟಿಸಿದ ಘಟನೆ ಕುತ್ತಾರು ಸಮೀಪದ ಸುಭಾಷನಗರದಲ್ಲಿ ಗುರುವಾರ ಸಂಜೆ ವೇಳೆ ನಡೆದಿದ್ದು, ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
ಸುಭಾಷನಗರ ವಸತಿ ಪ್ರದೇಶದಲ್ಲಿ ನಿರ್ಮಿಸಲಾದ ಅಂಜುಮನ್ ಮಬ್ಲಗುಲ್ ಫಲಾಹ್ ಮದ್ರಸದ ಕಟ್ಟಡಕ್ಕೆ ನಾಲ್ಕು ಸಿ.ಸಿ.ಟಿವಿಯನ್ನು ಗುರುವಾರ ಸಂಜೆ ವೇಳೆ ಅಳವಡಿಸಲಾಗಿದೆ. ಅದರಲ್ಲಿ ಎರಡು ಕಟ್ಟಡದ ಹಿಂಭಾಗವನ್ನು ಅವಲೋಕಿಸುವಂತೆ ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಹಲವು ಮನೆಗಳು ಇದ್ದು, ಅವುಗಳ ಶೌಚಾಲಯಗಳಿರುವ ಪ್ರದೇಶ ಸಿಸಿಟಿವಿ ಸರಿಯಾಗಿ ಅವಲೋಕಿಸುವಂತೆ ಅಳವಡಿಸಲಾಗಿದೆ. ಮಹಿಳೆಯರು, ಯುವತಿಯರು ಇರುವ ಮನೆಯೊಳಗಿನ ಚಿತ್ರಣವನ್ನು ಸಿಸಿಟಿವಿ ಸೆರೆ ಮಾಡುತ್ತದೆ. ಇದರಿಂದ ಖಾಸಗೀತನಕ್ಕೆ ತೊಂದರೆ ಉಂಟಾಗುತ್ತದೆ ಎಂದು ಆರೋಪಿಸಿದ ಸ್ಥಳೀಯರು ಅದನ್ನು ಕೂಡಲೇ ತೆಗೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಹಿಂದು ಮತ್ತು ಮುಸ್ಲಿಂ ಮನೆಗಳು ಇರುವುದರಿಂದ ಹೆಚ್ಚಿನ ಜನ ಜಮಾಯಿಸಿದ್ದರಿಂದಾಗಿ ಉದ್ವಿಘ್ನ ವಾತಾವರಣ ನಿರ್ಮಾಣವಾಯಿತು.
ಪೊಲೀಸ್ ಸಹಾಯಕ ಉಪನಿರೀಕ್ಷಕ ಕಲ್ಯಾಣಿ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ ಮತ್ತು ಉಳ್ಳಾಲ ಎಸ್.ಐ ಭಾರತಿ ಸ್ಥಳದಲ್ಲಿ ಬೀಡು ಬಿಟ್ಟು ಪ್ರತಿಭಟನಾಕಾರರನ್ನು ಸಮಜಾಯಿಷಿ ನಡೆಸಿ, ಮದರಸದಲ್ಲಿ ಧರ್ಮಗುರುಗಳು ಇಲ್ಲದೇ ಇರುವುದರಿಂದ ಸದ್ಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದಾಗ, ಸ್ಥಳೀಯರು ಪಟ್ಟು ಹಿಡಿದು ಇಂದೇ ತೆಗೆಯುವಂತೆ ಒತ್ತಾಯಿಸಿದರು. ಆದರೆ ಪೊಲೀಸರು ಸಿ.ಸಿಟಿವಿಯಲ್ಲಿ ಅಂತಹ ಯಾವುದೇ ದೃಶ್ಯಗಳು ಸೆರೆಯಾಗದಂತೆ ಅಳವಡಿಸಲಾಗಿದೆ. ಅದನ್ನು ಪರೀಕ್ಷಿಸಿದ್ದೇವೆ. ಮಹಿಳೆಯರು ಬಂದು ಮದರಸದೊಳಗೆ ಪರಿಶೀಲಿಸಬಹುದು ಎಂದರು. ಅದಕ್ಕೂ ಸ್ಥಳೀಯರು ಒಪ್ಪದೇ ಇದ್ದಾಗ ,ಯಾವುದೇ ಕನೆಕ್ಷನ್ ಕೊಡದಂತೆ ತಡೆಹಿಡಿದಿದ್ದೇವೆ. ಶುಕ್ರವಾರ ಬೆಳಿಗ್ಗೆ ಅದನ್ನು ತೆಗೆಯುವಂತೆ ಮದರಸ ಅಧಿಕೃತರಿಗೆ ಸೂಚಿಸುವ ಭರವಸೆಯನ್ನು ಉಳ್ಳಾಲ ಠಾಣಾಧಿಕಾರಿ ನೀಡಿದರು. ಸ್ಥಳದಲ್ಲಿ ಕೆಎಸ್ ಆರ್ ಪ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ವಿವಾದಿತ ಮದರಸ: ವಸತಿ ಪ್ರದೇಶದಲ್ಲಿ ಮದರಸ ಕಟ್ಟಿ, ಬಳಿಕ ಮಸೀದಿ ಚಟುವಟಿಕೆ ಆರಂಭ ನಡೆಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರಥಮವಾಗಿ ಪ್ರತಿಭಟನೆ ನಡೆಸಿದ್ದರು. ಬಳಿಕ ಮಸೀದಿ ಚಟುವಟಿಕೆಯ ಮೈಕ್ ಅನ್ನು ಅಳವಡಿಸಿರುವುದನ್ನು ತೆಗೆಯುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು. ಫೆ.15 ರಂದು ಮದರಸದಲ್ಲಿ ಧ್ವನಿವರ್ಧಕದಲ್ಲಿ ಬಾಂಗ್ ನೀಡುವ ವಿಚಾರವನ್ನು ಪ್ರಶ್ನಿಸಿದ ಮಹಿಳೆಯರಿಗೆ ತಂಡವೊಂದು ಹಲ್ಲೆ ನಡೆಸಿ ಮತ್ತೊಂದು ವಿವಾದ ಸೃಷ್ಟಿಯಾಗಿತ್ತು. ಅಲ್ಲದೇ ಇದೇ ಸಂದರ್ಭ ಮಹಿಳೆಗೆ ಹಲ್ಲೆ ನಡೆಸಿದವರಿಗೆ ಇನ್ನೊಂದು ತಂಡ ಹಲ್ಲೆ ನಡೆಸುವ ಮೂಲಕ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು. ಘಟನೆ ನಂತರ ಕೆಎಸ್ ಆರ್ ಪಿ ತುಕಡಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಇದೀಗ ಸಿ.ಸಿ.ಟಿವಿ ಅಳವಡಿಕೆಯಿಂದ ಮತ್ತೊಂದು ವಿವಾದ ಸೃಷ್ಟಿಯಾಗಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
















