UN NETWORKS
ಉಳ್ಳಾಲ: ನಗರಸಭೆ ವ್ಯಾಪ್ತಿಯ ಮೂಲಭೂತ ಸೌಕರ್ಯಗಳಿಂದ ಹಿಡಿದು ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಲಭ್ಯಗೊಳಿಸಲು ಅನೇಕ ಹೋರಾಟಗಳನ್ನು ನಡೆಸಿರುವ ಸಿಪಿಐಎಂ ಪಕ್ಷದ ಅಭ್ಯರ್ಥಿಗಳನ್ನು ಜನ ಬೆಂಬಲಿಸಲಿದ್ದಾರೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ತಿಳಿಸಿದ್ದಾರೆ.
ಪ್ರಥಮ ಬಾರಿಗೆ ಉಳ್ಳಾಲ ನಗರಸಭೆಗೆ ನಡೆಯಲಿರುವ ಚುನಾವಣೆಗೆ ಸಿಪಿಐಎಂ ನಿಂದ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಒಂದು ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಲಾಗಿದೆ. ಸಿಪಿಎಂ ಪಕ್ಷ ಕಳೆದ ಐದು ವರ್ಷಗಳಲ್ಲಿ ನಗರಸಭೆ ವ್ಯಾಪ್ತಿಯ ನಾಗರಿಕರ ಮೂಲಭೂತ ಸೌಕರ್ಯಗಳಿಗೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಕ್ಷೇತ್ರದ ಶಾಂತಿ, ಸೌಹಾರ್ದತೆಗಾಗಿ ಹೋರಾಟ ನಡೆಸುತ್ತಿದೆ. ಮುಂದಿನ 5 ವರ್ಷಗಳಲ್ಲಿ ನಗರಸಭೆ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಮಗ್ರವಾಗಿ ಸ್ಪಂಧಿಸುವ ಉದ್ದೇಶದೊಂದಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ.
ಕುಡಿಯುವ ನೀರು, ರಸ್ತೆ, ದಾರಿದೀಪ, ಮಾರುಕಟ್ಟೆ ಸೇರಿದಂತೆ ಜನರ ಅನುಕೂಲಕ್ಕೆ ಲಭ್ಯವಾಗುವ ಯೋಜನೆಗಳೊಂದಿಗೆ ನಗರಸಭೆ ಶುಚಿತ್ವವೂ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ವಾರ್ಡ್ ನಂ 16 ಲಕ್ಷ್ಮಣ್ ಅಮೀನ್ ಕೆರೆಬೈಲ್, 17 ರಲ್ಲಿ ಪದ್ಮಾವತಿ ಯಸ್ ಶೆಟ್ಟಿ, 18 ರಲ್ಲಿ ಕಮಲಾಕ್ಷ , 21 ರಲ್ಲಿ ದಿವಾಕರ್ , 22 ರಲ್ಲಿ ಪ್ರಮೀಳಾ ರಂಜನ್ ಎಂಬವರು ಪಕ್ಷದ ಅಭ್ಯರ್ಥಿಗಳಾಗಿದ್ದಾರೆ. ಇವರನ್ನು ಆಯ್ಕೆ ಮಾಡಿ ನಗರಸಭೆ ಅಭಿವೃದ್ಧಿಗೆ ಜನರು ಸಹಕರಿಸಬೇಕಾಗಿದೆ. ಜನ ಬೆಂಬಲಿಸುವ ಮೂಲಕ ಸಿಪಿಎಂ ಅಭ್ಯರ್ಥಿಗಳು ಗೆದ್ದು ಅಭಿವೃದ್ಧಿ ಪೂರಕವಾದ ಕೆಲಸಗಳನ್ನು ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


