UN NETWORKS
ಉಳ್ಳಾಲ: ಕೊಡಗಿನಲ್ಲಿ ಆಗಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರ ಜತಗೆ ನಾವಿದ್ದೇವೆ. ಎಲ್ಲಾ ಧರ್ಮದವರು ತಮ್ಮ ಆರಾಧನಾಲಯಗಳಲ್ಲಿ ಧರ್ಮ ನೋಡದೆ ಆಶ್ರಯ ನೀಡಿರುವುದು ರಾಜ್ಯದ ಜನತೆಯ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.


ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಕ್ರೀದ್ ಹಬ್ಬದ ಸಂದೇಶವಾಗಿರುವ ತ್ಯಾಗ, ತಾಳ್ಮೆ, ಪ್ರೀತಿ, ವಿಶ್ವಾಸದಲ್ಲಿ ಬಾಳುವಂತಹವ ವಾತಾವರಣ ನಿರ್ಮಿಸುವಲ್ಲಿ ಎಲ್ಲರೂ ತೊಡಗಬೇಕಿದೆ. ಬಕ್ರೀದ್ ಹಬ್ಬ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಎಲ್ಲಾ ಧರ್ಮದವರು ಸೇರಿಕೊಂಡು ಆಚರಿಸಿದಾಗ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಹಬ್ಬದ ಸಂದೇಶವನ್ನು ಎಲ್ಲರಿಗೂ ತಿಳಿಸಿ ಪರಸ್ಪರ ಜೊತೆಯಾಗುವ ಮೂಲಕ ಉತ್ತಮ ಸಮಾಜದ ನಿರ್ಮಾಣವಾಗಬೇಕಿದೆ. ಕಷ್ಟದ ಕಾಲದಲ್ಲಿಯೂ ಎಲ್ಲರೂ ಜೊತೆಯಾಗುವಂತಹ ಮನೋಸ್ಥಿತಿಯನ್ನು ಬೆಳೆಸಬೇಕಿದೆ. ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಸಂತ್ರಸ್ತರ ನೋವಿನಲ್ಲಿ ಎಲ್ಲರೂ ಜೊತೆಗಿದ್ದೇವೆ. ಮುಸ್ಲಿಂ ಸಹೋದರರು ಹಿಂದು ಆರಾಧನಾಲಯಗಳಲ್ಲಿ, ಹಿಂದೂಗಳು ಮುಸ್ಲಿಂ ಆರಾಧನಾಲಯಗಳಲ್ಲಿ ಹಾಗೂ ಕ್ರೈಸ್ತರು ಸಂತ್ರಸ್ತರಿಗೆ ಸಹಕರಿಸುವ ಮೂಲಕ ಮಾನವೀಯತೆಯನ್ನು ಮೆರೆದಿರುವ ಕಾರ್ಯ ಆಗಿದೆ ಎಂದರು.
ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಮಾತನಾಡಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ಮಾತನಾಡಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಪ್ರಯುಕ್ತ ಸರ್ವಧರ್ಮದ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಮೂಲಕ ಸೌಹಾರ್ದತೆಯನ್ನು ಕಾಪಾಡುವ ಕೆಲಸವಾಗಿದೆ. ತ್ಯಾಗ, ಬಲಿದಾನದ ಸಂಕೇತವಾಗಿರುವ ಹಬ್ಬವನ್ನು ನಾಡಿಗೆ ಒಳಿತನ್ನು ಕರುಣಿಸಲಿ ಎಂದು ಶುಭಹಾರೈಸಿದರು.
ಖತೀಬರಾದ ಅಝೀಝ್ ಬಾಖವಿ ದುಆ ನೆರವೇರಿಸಿದರು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್, ದರ್ಗಾ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಖಜಾಂಚಿ ಇಲ್ಯಾಸ್, ನಗರಸಭೆ ಸದಸ್ಯ ಬಾಝಿಲ್ ಡಿಸೋಜ, ಇಬ್ರಾಹಿಂ ಕಕ್ಕೆತೋಟ, ಅಮೀರ್ ಹಾಜಿ, ಯು.ಟಿ.ಇಲ್ಯಾಸ್, ತ್ವಾಹ ಹಾಜಿ, ಆಝಾದ್ ಇಸ್ಮಾಯಿಲ್, ಮುಸ್ತಾಫ ಮಂಚಿಲ, ಕೆ.ಎನ್.ಮೆಹಮೂದ್. ಇಬ್ರಾಹಿಂ ಉಳ್ಳಾಲಬೈಲ್ ಮುಸ್ತಾಫ ಉಪಸ್ಥಿತರಿದ್ದರು.


