UN NETWORKS
ಉಳ್ಳಾಲ: ಮಳೆಹಾನಿಯಿಂದ ತೊಂದರೆಗೊಳಗಾಗಿರುವ ಫಲಾನುಭವಿಗಳಿಗೆ ಗರಿಷ್ಟ ಮಟ್ಟದ ಪರಿಹಾರವನ್ನು ಶೀಘ್ರವೇ ನೀಡುವಲ್ಲಿ ಮತ್ತು ಸ್ಥಳೀಯರು, ಗ್ರಾಮಪಂಚಾಯತ್ ಮತ್ತು ಜಿಲ್ಲಾಡಳಿತದ ಮೂಲಕ ಮುಂಜಾಗರೂಕತಾ ಕ್ರಮಕ್ಕೆ ಕ್ರಮೃ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ತಿಳಿಸಿದರು.
ಅವರು ಸಿಡಿಲು ಬಡಿದು ಹಾನೀಗೀಡಾದ ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗೋಡಿ ಪ್ರದೇಶದ ಸದಾಶಿವ ಶೆಟ್ಟಿ ಅವರ ಮನೆಗೆ ಮತ್ತು ಅಂಬ್ಲಮೊಗರು ಗುಡ್ಡ ಕುಸಿತದಿಂದ ಹಾನಿಗೀಡಾದ ಮದಕ ನಿವಾಸಿಗಳಾದ ಅಬ್ಬಾಸ್, ರಝಾಕ್ ಅವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾಗಿದೆ. ಜಿಲ್ಲಾಡಳಿತ ಸಮೀಕ್ಷೆ ನಡೆಸಿದ್ದು ಪರಿಹಾರ ನೀಡಲಾಗುವುದು. ಸಿಡಿಲು ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಯಾವ ಯಾವ ಪ್ರದೇಶದಲ್ಲಿ ಅತೀ ಹೆಚ್ಚು ಸಿಡಿಲು ಬಡಿದಿವೆಯೋ, ಆ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ಸಿಡಿಲನ್ನು ತಡೆಗಟ್ಟುವ ಸಿಡಿಲು ನಿರೋದಕ ಉಪಕರಣವನ್ನು ಅಳವಡಿಸಲು ಸಂಭಂದ ಪಟ್ಟ ಇಲಾಖೆಗೆ ಮತ್ತು ಗ್ರಾಮ ಪಂಚಾಯತ್ ಮುಖಾಂತರ ಜಂಟಿ ಕಾರ್ಯ ನಿರ್ವಹಿಸಿ ಆ ಪ್ರದೇಶದಲ್ಲಿ ಅಳವಡಿಸಲಾಗುವುದು ಮತ್ತು ಅಪಾಯದಲ್ಲಿರುವ ಗುಡ್ಡ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಅಪಾಯವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಪಜೀರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಶೆಟ್ಟಿ,ಮಂಗಳೂರು, ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪಂಚಾಯತ್ ಸದಸ್ಯರಾದ ಇಂತಿಯಾಝ್ ಪಾನೇಲ, ರಫೀಕ್, ಜ್ಯೋತಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಉಮ್ಮರ್ ಪಜೀರ್, ಹಾಗೂ,ಜಲೀಲ್ ಮೋಂಟುಗೋಳಿ, ನಾಸೀರ್, ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


