UN NETWORKS
ಉಳ್ಳಾಲ: ಮೊಗವೀರಪಟ್ನ ಶಿವಾಜಿ ಕ್ಲಬ್ ಬಳಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕಂಬ ನೆಲಕ್ಕೆ ಬಿದ್ದರೂ, ಅದನ್ನು ತೆರವುಗೊಳಿಸದೆ ಅಪಾಯವನ್ನು ಆಹ್ವಾನಿಸುವ ಸ್ಥಿತಿ ಇದೆ. ಇದರಿಂದಾಗಿ ಸ್ಥಳೀಯರು ವಿದ್ಯುತ್ ಇಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಸಾಲು ಸಾಲಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಸಾರ್ವಜನಿಕರು ನಡೆದಾಡುವ ರಸ್ತೆ ಬದಿಯಲ್ಲೇ ವಿದ್ಯುತ್ ಕಂಬ ಹಾಗೂ ತಂತಿಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ. ಈ ಕುರಿತು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಅಧಿಕಾರಿಗಳು ಹಾಗೂ ಲೈನ್ ಮೆನ್ ನೋಡಿ ಹೋಗಿದ್ದಾರೆ. ಆದರೆ 24 ಗಂಟೆಯಾದರೂ ತೆರವಾಗಲಿ, ದುರಸ್ತಿಯಾಗಲಿ ಮಾಡಲಿಲ್ಲ ಅನ್ನುವುದು ಸಾರ್ವಜನಿಕರ ಆರೋಪ. ಸಮುದ್ರ ಕಿನಾರೆಗೆ ನೂರಾರು ಪ್ರವಾಸಿಗರು, ಸ್ಥಳೀಯ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ದಾಟುತ್ತಿರುತ್ತಾರೆ. ಆದರೂ ಇಲಾಖೆಯವರು ತೆರವುಗೊಳಿಸದೇ ಇರುವುದರಿಂದ ತೊಂದರೆಯಾಗಿದೆ ಅನ್ನುವ ಆರೋಪ ಕೇಳಿಬಂದಿದೆ.
ಶನಿವಾರ ಬೆಳಿಗ್ಗೆ ಬೀಸಿದ ಗಾಳಿಯಿಂದಾಗಿ ಉಳ್ಳಾಲ ವ್ಯಾಪ್ತಿಯಲ್ಲಿ 70ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿಬಿದ್ದಿದೆ. ಬಹುತೇಕ ಕಂಬಗಳನ್ನು ಲೈನ್ಮೆನ್ನವರು ಸೇರಿಕೊಂಡು ಹಗಲು ರಾತ್ರಿ ಕಾರ್ಯಾಚರಿಸಿ ದುರಸ್ತಿಗೊಳಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಬಹುತೇಕ ಕಂಬಗಳನ್ನು ದುರಸ್ತಿಗೊಳಿಸಲಾಗುವುದು. ಒಂದೇ ದಿನದಲ್ಲಿ 70ಕ್ಕಿಂತ ಅಧಿಕ ಕಂಬಗಳು ಬಿದ್ದಿರುವುದರಿಂದ ತರಾತುರಿಯಲ್ಲಿ ದುರಸ್ತಿಗೊಳಿಸಲು ಅಸಾಧ್ಯವಾಗಿದೆ ಅನ್ನುವುದು ಮೆಸ್ಕಾಂ ಇಲಾಖೆ ಅಭಿಪ್ರಾಯವಾಗಿದೆ.


