UN NETWORKS
ಉಳ್ಳಾಲ: ಅಹಿಂದ ಜನರು ಒಗ್ಗಟ್ಟಾಗುವುದನ್ನು ಆರಂಭದಿಂದಲೂ ವಿರೋಧಿಸುತ್ತಿರುವ ಜೆಡಿಎಸ್ನ ದೇವೇಗೌಡ ಮತ್ತು ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಹಕರಿಸುವ ಉದ್ದೇಶದಿಂದ ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ದಕ್ಷಿಣ ಕನ್ನಡ ಅಹಿಂದ ಜನಚಳುವಳಿಯ ಉಪಾಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಆರೋಪಿಸಿದ್ದಾರೆ.
ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸಮಾಡಿ, ಬಿಜೆಪಿ ಅಭ್ಯರ್ಥಿ ಪರ ಸಹಕರಿಸುವ ಉದ್ದೇಶದಿಂದ ಜಾತ್ಯಾತೀತ ಜನತಾದಳದ ಮುಖಂಡರು ಬಿ.ಎಂ .ಅಶ್ರಫ್ ಅವರಿಗೆ ನಿರ್ದೇಶನ ನೀಡಿ, ಮಾಜಿ ಮೇಯರ್ ಅಶ್ರಫ್ ಅವರನ್ನು ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಇದು ಬಿಜೆಪಿ ಬೆಂಬಲವಾಗಿ ಸ್ಪರ್ಧಿಸುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಕೂಡಾ ಕೋಮುಶಕ್ತಿಗಳ ಮತ್ತು ಅಸಮಾನತೆ ಹೇರುವ ಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿಸಲ್ಪಟ್ಟ ಜನ ಹಾಗೂ ದಲಿತರು ಎಚ್ಚೆತ್ತು ಕೋಮುಶಕ್ತಿಗಳನ್ನು ಹಾಗೂ ರಾಜಕೀಯ ವ್ಯಾಪಾರಿಗಳಾದ ಬಿಜೆಪಿ ಮತ್ತು ಜೆಡಿಎಸ್ ಅನ್ನು ವಿರೋಧಿಸಬೇಕಿದೆ.
ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಅವರನ್ನು ಪುನರಾಯ್ಕೆ ನಡೆಸಬೇಕಿದೆ ಎಂದರು. ಸುದ್ಧಿಗೋಷ್ಟಿಯಲ್ಲಿ ಅಧ್ಯಕ್ಷ ವಾಸುದೇವ ಬೋಳೂರು, ಕಾರ್ಯಾಧ್ಯಕ್ಷ ಪದ್ಮನಾಭ ನರಿಂಗಾನ, ಯೂಸುಫ್ ವಕ್ತಾರ್, ವೆಲೇರಿಯನ್ ಎಸ್.ಆರ್.ಲೋಬೊ ಉಪಸ್ಥಿತರಿದ್ದರು.


